


ಕೊಪ್ಪಳ, 20 ನವೆಂಬರ್ (ಹಿ.ಸ.) :
ಆ್ಯಂಕರ್ : 2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಯಡಿ ಮಂಜೂರಾದ ಕಾಮಗಾರಿಯ ಬಗ್ಗೆ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ವರದಿಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಕೊಪ್ಪಳ ವಿಭಾಗದಿಂದ ಸ್ಪಷ್ಟೀಕರಣ ನೀಡಲಾಗಿದೆ.
2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯಡಿ ಮಂಜೂರಾದ ಕಾಮಗಾರಿಗೆ ಸಂಬಂಧಿಸಿದಂತೆ ಕೊಪ್ಪಳ ನಗರದ 23ನೇ ವಾರ್ಡನ ಗಾಂಧಿನಗರ ಸ.ಹಿ.ಪ್ರಾ.ಶಾಲೆಯಲ್ಲಿ 1 ಕೊಠಡಿ ನಿರ್ಮಾಣ ((KPL2324133552) ರೂ.13.50 ಲಕ್ಷಗಳ ನಿರ್ವಹಿಸಿದ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿರುವುದಾಗಿ ಹಾಗೂ ಮೂರನೇ ತಂಡದ ತಪಾಸಣೆಯಾಗದೇ ಬಿಲ್ಲನ್ನು ಪಡೆದಿರುವುದಾಗಿ ಸುದ್ದಿ ವಾಹಿನಿಯಲ್ಲಿ ನವೆಂಬರ್ 19ರಂದು ವರದಿ ಪ್ರಸಾರವಾಗಿದ್ದು, ಈ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಯ ದಾಖಲಾತಿಗಳನ್ನು ಪರಿಶೀಲಿಸಿದಾಗ ನಿಯಮನುಸಾರ ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ಪಡೆದು ಇ-ಪ್ರಕ್ಯೂರಮೆಂಟ್ ಮೂಲಕ ಟೆಂಡರ್ ಕರೆದು ಎಲ್-1 ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ ಕಾಮಗಾರಿಯನ್ನು ಅನುಷ್ಠಾನ ಮಾಡಿರುತ್ತಾರೆ .
ಸದರಿ ಕಾಮಗಾರಿಗೆ ಮೂರನೇ ತಂಡದ ಎಜೆನ್ಸಿಯಾದ ಪ್ರಾಚಾರ್ಯರು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ತಳಕಲ್ ರವರಿಂದ ತಪಾಸಣೆ ಮಾಡಿಸಿ ಗುಣಮಟ್ಟ ಪರಿಶೀಲನಾ ವರದಿಯ ನಂತರ ಬಿಲ್ಲನ್ನು ಮಾನ್ಯ ಕಾರ್ಯದರ್ಶಿಗಳು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ರವರಿಗೆ ಈ ಕಾಮಗಾರಿಯ ವೆಚ್ಚ ಪಾವತಿಸಲು ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಕೊಪ್ಪಳ ಕಛೇರಿಯಿಂದ ಪತ್ರ ಬರೆಯಲಾಗಿರುತ್ತದೆ. ಈ ಕಾಮಗಾರಿಯನ್ನು ನಿಯಮನುಸಾರ ಅನುಷ್ಠಾನ ಮಾಡಲಾಗಿರುತ್ತದೆ ಹಾಗೂ ಗುಣಮಟ್ಟದಿಂದ ಕಾಮಗಾರಿಯನ್ನು ನಿರ್ಮಾಣ ಮಾಡಲಾಗಿರುತ್ತದೆ ಎಂದು ಈ ಮೂಲಕ ಸ್ಪಷ್ಟಿಕರಣ ನೀಡಲಾಗಿದೆ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಕೊಪ್ಪಳ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್