
ಕೊಪ್ಪಳ, 20 ನವೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ರಾಜ್ಯ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ಪದವೀಧರರಿಗೆ, ನಾಗರಿಕ ಸೇವೆಗಳಾದ ಐ.ಎ.ಎಸ್. ಅಥವಾ ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಭಾರತದ ಅಥವಾ ಕರ್ನಾಟಕದ ಆಡಳಿತಾತ್ಮಕ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುವ ಸಲುವಾಗಿ `ಚಾಣಕ್ಯ ಆಡಳಿತ ತರಬೇತಿ ಯೋಜನೆ' ಯಡಿ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ಐ.ಎ.ಎಸ್. ಅಥವಾ ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ಪಡೆಯುವ ಸಂಬಂಧ 2025-26ನೇ ಸಾಲಿನಲ್ಲಿ ಪ್ರವೇಶಾತಿ ಪಡೆದು ಪಾವತಿಸಲಾದ ತರಬೇತಿ ಶುಲ್ಕದ ಮೊತ್ತದಲ್ಲಿ ಗರಿಷ್ಠ ರೂ. 1.00 ಲಕ್ಷ ಗಳಿಗೆ ಮಿತಿಗೊಳಿಸಿ ಡಿಬಿಟಿ ಮೂಲಕ ನೇರವಾಗಿ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲಾಗುವುದು. ಅರ್ಹ ಮತ್ತು ಆಸಕ್ತಿಯುಳ್ಳ ಕನಿಷ್ಠ 21ರಿಂದ ಗರಿಷ್ಠ 35 ವರ್ಷದೊಳಗಿನ ಬ್ರಾಹ್ಮಣ ಪದವೀಧರರು ಡಿಸೆಂಬರ್ 15 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು, ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದ್ದು, ಅರ್ಜಿದಾರರು ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣಪತ್ರ ((EWS ಪ್ರಮಾಣ ಪತ್ರ) ಹೊಂದಿರಬೇಕು, ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯೊಂದಿಗೆ ಸೀಡಿಂಗ್ ಮಾಡಿರಬೇಕು. ಜೊತೆಗೆ ವಿದ್ಯಾರ್ಥಿಗಳು ಆಯ್ಕೆ ಮಾಡಲಾದ ತರಬೇತಿ ಸಂಸ್ಥೆಯು ಕಡ್ಡಾಯವಾಗಿ ಉSಖಿ ನೋಂದಣಿಯಾಗಿರಬೇಕು, ಕನಿಷ್ಠ 3 ವರ್ಷಗಳ ಕಾಲ ತರಬೇತಿ ನೀಡಿರುವ ಅನುಭವ ಹೊಂದಿರಬೇಕು, ಯಶಸ್ವಿ ಮತ್ತು ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರಬೇಕು ಹಾಗೂ ತರಬೇತಿ ಸಂಸ್ಥೆಯು ಕರ್ನಾಟಕ ರಾಜ್ಯದ ಮಿತಿಯಲ್ಲಿರಬೇಕು. ಈ ಎಲ್ಲಾ ಸಾಮಾನ್ಯ ಅರ್ಹತೆಗಳನ್ನು ಹೊಂದಿರಬೇಕು.
ಸೂಚನೆ: ಮಹಿಳಾ ಅರ್ಜಿದಾರರಿಗೆ ಶೇ. 33 (ವಿಧವೆಯರಿಗೆ ಹಾಗೂ ವಿಚ್ಚೇದಿತ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು) ಹಾಗೂ ವಿಶೇಷ ಚೇತನರಿಗೆ ಶೇ.5 ರಷ್ಟು ಮೀಸಲಾತಿ ನಿಗದಿಪಡಿಸಲಾಗಿದ್ದು, ಒಂದು ವೇಳೆ ವಿಶೇಷ ಚೇತನ, ಅಂಧ ಅಥವಾ ಮಹಿಳಾ ಅರ್ಜಿಗಳು ಇಲ್ಲದೇ ಇದ್ದಲ್ಲಿ, ಇತರೆ ಅರ್ಹ ಬ್ರಾಹ್ಮಣ ಅರ್ಜಿದಾರರಿಗೆ ಅವಕಾಶ ಕಲ್ಪಿಸಲಾಗುವುದು, ದಿವ್ಯಾಂಗ ಅಭ್ಯರ್ಥಿಗಳು ನಿಯಮಾನುಸಾರ ಸಕ್ಷಮ ಪ್ರಾಧಿಕಾರದಿಂದ ನಿಗಧಿಪಡಿಸಲಾದ ನಮೂನೆಯಲ್ಲಿ ದಿವ್ಯಾಂಗ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು, ಒಬ್ಬ ಅಭ್ಯರ್ಥಿಗೆ ಒಂದು ಬಾರಿ ಮಾತ್ರ ತರಬೇತಿ ಶುಲ್ಕ ಮರುಪಾವತಿಗೆ ಅವಕಾಶವಿರುತ್ತದೆ, ಈ ಯೋಜನೆಯಡಿ 100 ವಿದ್ಯಾರ್ಥಿಗಳಿಗೆ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು ಒಂದು ವೇಳೆ 100 ಕ್ಕೂ ಹೆಚ್ಚಿನ ಅರ್ಜಿ ಸ್ವೀಕೃತವಾದಲ್ಲಿ, ಪ್ರವೇಶ ಪರೀಕ್ಷೆಯನ್ನು ನಡೆಸಿ ಫಲಿತಾಂಶದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 8029605888 ಮತ್ತು 8762249230 ಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ. ರವಿಶಂಕರ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್