
ಬಳ್ಳಾರಿ, 18 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯದ ಅಂಗವಿಕಲರು ಸಂಕಷ್ಟದಲ್ಲಿದ್ದು ಪೆನ್ಷನ್ ಹೆಚ್ಚಳ ಮಾಡಲು ಆಗ್ರಹಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ಅಂಗವಿಕಲರು ಹಾಗೂ ಪಾಲಕರ ಒಕ್ಕೂಟ ತೀರ್ಮಾನಿಸಿದೆ.
ಈ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ್ ಅವರು ಪತ್ರಿಕಾ ಭವನದಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ್ದು, ಅಂಗವಿಕಲರ ಪೆನ್ಷನ್ ಹೆಚ್ಚಳ ಹಾಗೂ ಹಕ್ಕುಗಳ ರಕ್ಷಣೆಗಾಗಿ ನಿರಂತರ ಹೋರಾಟ ನಡೆಯುತ್ತಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಪರಿಗಣಿಸುತ್ತಿಲ್ಲ, ತಮ್ಮ ಹೋರಾಟಗಳಿಗೆ ಸ್ಪಂದನೆ ನೀಡುತ್ತಿಲ್ಲ ಎಂದು ಅವರು ವಿಷಾದಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಮಟ್ಟದ ಮಹಾ ಪ್ರತಿಭಟನೆ ನಡೆದಾಗ, ಸರ್ಕಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ `ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ' ಎಂದು ಭರವಸೆ ನೀಡಿ ಪ್ರತಿಭಟನೆಯನ್ನು ಸಮಾರೋಪಗೊಳಿಸಿತ್ತು. ಆನಂತರ, ಸರ್ಕಾರ ಅಥವಾ
ಅಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಗಮನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2016ರ ಅಂಗವಿಕಲರ ಹಕ್ಕುಗಳ ಕಾಯ್ದೆಯ ಪ್ರಕಾರ ಅಂಗವಿಕಲರು ಗೌರವಯುತ ಜೀವನ ನಡೆಸಲು ಪೆನ್ಷನ್ ಮುಖ್ಯ ಆಧಾರ. ಆದರೆ, ಸರ್ಕಾರ ಪೆಶ್ಷನ್ ಹೆಚ್ಚಳದ ಕುರಿತು ಚಕಾರ ಎತ್ತುತ್ತಿಲ್ಲ. ಶಿಕ್ಷಣ-ಉದ್ಯೋಗ ಹಾಗೂ ಇನ್ನಿತರೆಗಳಿಂದ ವಂಚಿತರಾಗಿರುವ ಅಂಗವಿಕಲರು ಸರ್ಕಾರ ನೀಡುತ್ತಿರುವ 800 ರಿಂದ 1,400 ರೂನಲ್ಲಿ ಜೀವನ ನಡೆಸುವುದು ಕಷ್ಟಕರ ಎಂದರು.
ಜಿಲ್ಲಾಧ್ಯಕ್ಷ ಎನ್. ಕುಮಾರಪ್ಪ, ಕೆ. ವರಲಕ್ಷ್ಮಿ, ಎರ್ರಿಸ್ವಾಮಿ, ಪಾರ್ವತಿ ಬಾಯಿ, ನಾಗು ನಾಯಕ್, ರಾಜ ನಾಯಕ್, ಬಂಗಾರಪ್ಪ ಸೇರಿ ಅನೇಕರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್