
ಗದಗ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಕಳೆದ ಹಲವು ದಿನಗಳಿಂದ ಬಿಜಾಪೂರ ಬಾಗಲಕೋಟಿ, ಬೆಳಗಾವಿ ಸೇರಿದಂತೆ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳು ಹಾಗೂ ಬಾಗಲಕೋಟಿ, ಬಿಜಾಪೂರ ರೈತರ ಸಮಸ್ಯೆಗಳು ವಿಭಿನ್ನವಾಗಿವೆ.
ಹೋರಾಟದ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಕಬ್ಬು ತುಂಬಿದ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿದ್ದಾರೆ. ಕಾರ್ಖಾನೆ ಮಾಲಿಕರಿಂದಲೇ ಈ ಕೃತ್ಯ ನಡೆದಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ಆದರೆ, ಕಾರ್ಖಾನೆ ಮಾಲಿಕರು ನಾವು ಮಾಡಿಲ್ಲ ಎನ್ನುವರು. ಒಟ್ಟಾರೆಯಾಗಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಗದಗನಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವತಃ ತಾವೇ ಬೆಳೆದ ಬೆಳೆಗೆ ರೈತರು ಬೆಂಕಿ ಹಚ್ಚಲು ಸಾಧ್ಯವಿಲ್ಲ. ಬೆಂಕಿ ಹಚ್ಚಿದ ಕಿಡಗೇಡಿಗಳ ವಿರುದ್ದ ಕಠಿಣ ಕ್ರಮ ಕೈಗೋಳುತ್ತೇವೆ ಎಂದು ಒಂದು ಮಾತನ್ನು ಮುಖ್ಯಮಂತ್ರಿ ಹೇಳುತ್ತಿಲ್ಲ. ರಾಜ್ಯದ ಎಲ್ಲ ರೈತರ ಜೊತೆ ನಿಲ್ಲಬೇಕು ಅಂತ ಮಾಜಿ ಸಿಎಂ ಯಡಿಯೂರಪ್ಪನವರು ಆದೇಶ ಮಾಡಿದ್ದಾರೆ. 3,300 ರೂಪಾಯಿ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ರೈತರಿಗೆ ಇದರಿಂದ ತೃಪ್ತಿ ಆಗಿಲ್ಲ ಎಂದು ಹೇಳಿದರು.
ತುಂಗಭದ್ರಾ ಜಲಶಯಕ್ಕಾಗಿ ದೊಡ್ಡ ಮಟ್ಟದ ಹೋರಾಟ ಮಾಡಲು ತಿರ್ಮಾನಿಸಿದ್ದೇವೆ. ತುಂಗಭದ್ರಾ ಗೇಟ್ ದುರಸ್ಥಿ ಮಾಡುವ ಕೆಲಸ ಮಾಡುತ್ತಿಲ್ಲ. ತುಂಗಭದ್ರಾ ಡ್ಯಾಂ ನಲ್ಲಿ ನೀರು ಇದ್ದರೂ ಬಿಡುಗಡೆ ಮಾಡದೇ ರೈತರ ಜೀವನದ ಜೊತೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಎರಡು ಬೆಳೆಗೆ ನೀರು ಕೊಡಲು ಆಗಲ್ಲ ಅಂತ ಸರ್ಕಾರ ಹೇಳುತ್ತಿದೆ. ಬೆಂಬಲ ಬೆಲೆ ಘೋಷಣೆ ಮಾಡಿ ಅಂದ್ರೆ ಕೇಂದ್ರದ ಕಡೆ ಬೊಟ್ಟು ಮಾಡುತ್ತಿದ್ದಾರೆ. 56 ರಿಂದ 60 ಸಾವಿರ ಕೋಟಿ ರೂ. ಗ್ಯಾರಂಟಿಗೆ ನೀಡಲಾಗುತ್ತಿದೆ. ಆದರೆ, ಬೆಳೆ ಹಾನಿಗೆ ಹಣ ನೀಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಗೋವಿನಜೋಳಕ್ಕೆ 2400 ರೂ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಆದರೆ, ರಾಜ್ಯದಲ್ಲಿ 1400-1500 ರೂ ಗೆ ರೈತರು ಮಾರಾಟ ಮಾಡುತ್ತಿದ್ದಾರೆ. ಖರೀದಿ ಕೇಂದ್ರ ತೇರೆಯದೇ ರೈತರಿಗೆ ಹಾನಿ ಮಾಡಲಾಗುತ್ತಿದೆ. ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಲೆಗೆ ಬೆಂಬಲ ಬೆಲೆ ನೀಡುತ್ತಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಗ್ಯಾರಂಟಿ ನೀಡಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಅವರು ತೀವ್ರ ವಾಗ್ದಾಳಿ ನಡೆಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಸಿ. ಎಸ್ ಶಿವನಗೌಡ್ರ, ವಿಜಯಲಕ್ಷ್ಮೀ ಮಾನ್ವಿ, ರವಿ ಗುಂಜೀಕರ, ವೆಂಕಟೇಶ ಕುಲಕರ್ಣಿ, ರಮೇಶ ಸಜ್ಜಗಾರ, ಕಿರಣ್ ಪ್ರಕಾಶ್ ಭೂಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP