

ನವದೆಹಲಿ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಮಕ್ಕಳ ಸಾಹಿತಿಗಳೇ ನವ ಸಮಾಜದ ನಿರ್ಮಾತೃಗಳು. ಮಕ್ಕಳ ಸಾಹಿತ್ಯ ಅತ್ಯಂತ ಪ್ರಮುಖ ಮತ್ತು ಅಗತ್ಯವಾದ ಸಾಹಿತ್ಯ ಪ್ರಕಾರವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ. ಮಾಧವ್ ಕೌಶಿಕ್ ಅಭಿಪ್ರಾಯಪಟ್ಟರು.
ನವದೆಹಲಿಯ ತ್ರಿವೇಣಿ ಕಲಾಸಂಗಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಕೆ ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್ ಬುಕ್ ‘ಮಕ್ಕಳ ಕಥಾ ಸಂಕಲನಕ್ಕೆ 2025 ರ ಬಾಲ ಸಾಹಿತ್ಯ ಪುರಸ್ಕಾರವನ್ನು ಪ್ರದಾನ ಮಾಡಿ ಮಾತನಾಡಿದರು.
ಈ ದಿನ ನಾವೆಲ್ಲ ಮತ್ತೆ ಮತ್ತೆ ನಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವ ದಿನವಾಗಿದೆ. ಭಾರತದ 24 ಭಾಷೆಗಳಲ್ಲಿ ಮಕ್ಕಳ ಸಾಹಿತ್ಯ ರಚನಕಾರರು ಮುಖ್ಯವಾದ ಕೆಲಸವನ್ನು ಮಾಡುತ್ತಿದ್ದಾರೆ. ಮಕ್ಕಳ ಸಾಹಿತಿಗಳು ಮನುಷ್ಯರನ್ನು ಮಾನವೀಯಗೊಳಿಸುವ ಕೆಲಸ ಮಾಡುವವರು. ನಮ್ಮ ಬಾಲ್ಯದಲ್ಲಿ ನಾವೆಲ್ಲ ಅಜ್ಜ ಅಜ್ಜಿಯರಿಂದ ಕಥೆ ಕೇಳುತ್ತಿದ್ದೆವು. ಇಂದು ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ತಂದೆ ತಾಯಿ ಇಬ್ಬರಿಗೂ ಅವರೊಂದಿಗೆ ಸಮಯ ಕಳೆಯಲು ಆಗದಿರುವುದು ಕಳವಳದ ಸಂಗತಿ ಎಂದರು.
ಹಂದಿಹಾಳು ಬರೆದ ಕಥೆಗಳು ಅವರೊಟ್ಟಿಗೆ ಇದ್ದು ಅವರನ್ನು ಸಂಸ್ಕಾರವಂತರನ್ನಾಗಿಸಲು ಸಹಕರಿಸುವಂತಿವೆ. ಅಂತವರಿಗೆ ಕಥೆಗಾರರೇ ಅವರಿಗೆ ತಂದೆ ತಾಯಿ ಅಜ್ಜ ಅಜ್ಜಿಯರು ಆಗುವಂತಿದ್ದಾರ.ಅದಕ್ಕಾಗಿ ಶಿವಲಿಂಗಪ್ಪ ಅಭಿನಂದನಾರ್ಹರು. ಭಾರತದಲ್ಲಿ ಮಕ್ಕಳ ಸಾಹಿತ್ಯ ರಚನೆ ಮಾಡುವ ನೀವೆಲ್ಲಾ ನವ ಸಮಾಜ ಸುಧಾರಕರು ಎನ್ನಬಹುದು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳಾದ ಶ್ರೀಮತಿ ಪಲ್ಲವಿ ಪ್ರಶಾಂತ್ ಹೋಲ್ಕರ್ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಗುಜರಾತಿನ ಪ್ರಮುಖ ಕವಿಯತ್ರಿ ವರ್ಷಾ ದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವರ್ತಮಾನದಲ್ಲಿ ಮಕ್ಕಳ ಸಾಹಿತ್ಯದ ಅಗತ್ಯತೆಯ ಕುರಿತು ಉಪನ್ಯಾಸವನ್ನು ನೀಡಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷರಾದ ಕುಮುದಾ ಶರ್ಮಾ ವಂದನಾ ನುಡಿಗಳನ್ನು ನುಡಿದರು.
ಸಮಾರಂಭದಲ್ಲಿ ದೇಶದ 24 ಭಾಷೆಗಳನ್ನು ಪ್ರತಿನಿಧಿಸಿ ಆಗಮಿಸಿದ್ದ ಬಾಲ ಸಾಹಿತ್ಯ ಪುರಸ್ಕಾರ ಪುರಸ್ಕೃತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್