ರಾಯಚೂರು, 04 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ನಮ್ಮ ಜಮೀನಿಗೆ ಯಾರು ಬಂದಿಲ್ಲ. ಸಮೀಕ್ಷೆ ಮಾಡಿಲ್ಲ. ಬೆಳೆಹಾನಿಯಾದರೂ ನಮಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಜಿಲ್ಲೆಯ ಯಾವುದೇ ಪ್ರದೇಶದ ರೈತರಿಂದ ದೂರುಗಳು ಕೇಳಿ ಬಂದಲ್ಲಿ, ಅಧಿಕಾರಿಗಳಿಗೆ ಹೊಣೆಯಾಗಿಸಿ ಕ್ರಮ ಜರುಗಿಸಲಾಗುವುದು ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಳೆ ಹಾನಿ ಪ್ರದೇಶದಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಅವರು ಮಾತನಾಡಿದರು.
ಬೆಳೆಹಾನಿ ಜಂಟಿ ಸಮೀಕ್ಷೆ ಅಚ್ಚುಕಟ್ಟಾಗಿ ನಡೆಯಬೇಕು. ಹಾನಿಗೊಳಗಾದ ಪ್ರತಿಯೊಂದು ಹೊಲಕ್ಕೂ ಹೋಗಿ ಸಮೀಕ್ಷೆ ಮಾಡಬೇಕು. ಹಾನಿ ಅನುಭವಿಸಿದ ಪ್ರತಿಯೊಬ್ಬ ರೈತರಿಗೂ ಸಮರ್ಪಕ ಪರಿಹಾರಕ್ಕೆ ಕ್ರಮ ವಹಿಸಬೇಕು. ಜನ-ಜಾನುವಾರು ಜೀವಹಾನಿ, ಮನೆ ಹಾನಿ ಪ್ರಕರಣಗಳಿಗೆ ಸಹ ಕಾಲಮಿತಿಯೊಳಗೆ ಪರಿಹಾರ ನೀಡಲು ಕ್ರಮವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಅವರು ಮಾತನಾಡಿ, ಅಧಿಕಾರಿಗಳು ಕಚೇರಿಯಿಂದ ಹೊರಬಂದು ತಂಡವಾಗಿ ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾಗಬೇಕು. ಪರಿಹಾರ ದಕ್ಕುತ್ತದೆ ಎಂದು ರೈತರಿಗೆ ವಿಶ್ವಾಸ ಬರುವ ಹಾಗೆ ಅಧಿಕಾರಿಗಳು ಕಾಳಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಶಾಸಕರ ಸಲಹೆ : ಕೆಲಕಡೆಗೆ ವಿದ್ಯುತ್ ಪರಿವರ್ತಕಗಳು ಮುಳುಗಡೆಯಾಗಿದ್ದು, ಬದಲಾಯಿಸಬೇಕು ಎಂದು ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟ್ರಾನ್ಸಪಾರ್ಮರ್ ಖರೀದಿಸಿ : ಟ್ರಾನ್ಸಪಾರ್ಮರ್ ಬೇಕು ಎಂದು ರೈತರು ಸಾಲುಗಟ್ಟಿ ನಿಲ್ಲುವಂತಾಗಿದೆ. ಎಲ್ಲಾ ತಾಲೂಕಿನಲ್ಲಿ ಟ್ರಾನ್ಸಪಾರ್ಮರಗಳ ಖರೀದಿ ಆಗಬೇಕಿದೆ ಎಂದು ರಾಯಚೂರ ನಗರ ಶಾಸಕರಾದ ಡಾ.ಎಸ್ ಶಿವರಾಜ್ ಪಾಟೀಲ ಅವರು ಸಲಹೆ ಮಾಡಿದರು.
ಅಧಿಕಾರಿಗಳಿಗೆ ಸೂಚನೆ : ದಾಳಿಂಬೆ ಸೇರಿದಂತೆ ಬೇರೆ ಬೇರೆ ತೋಟಗಾರಿಕಾ ಬೆಳೆಗಳಿಗೆ ಮಸ್ಕಿ ತಾಲೂಕಿನಲ್ಲಿ ಹಾನಿಯಾಗಿದೆ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ರಸ್ತೆಗಳ ರಿಪೇರಿ ಆಗಬೇಕು ಎಂದು ಮಸ್ಕಿ ಶಾಸಕರಾದ ಆರ್ ಬಸನಗೌಡ ತುರವಿಹಾಳ ಅವರು ತೋಟಗಾರಿಕಾ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಳೆದ ಶನಿವಾರದಿಂದಲೇ ಜಂಟಿ ಸಮೀಕ್ಷೆ ಆರಂಭವಾಗಿದೆ. ತೀವ್ರ ಮಳೆಯಿಂದಾಗಿ, ಈಗಾಗಲೇ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 25,000 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದುವರೆಗೆ ಶೇ.18ರಷ್ಟು ಸಮೀಕ್ಷೆ ಆಗಿದೆ. ಇನ್ನು ಮುಂದುವರೆದಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮಾನವಿ ಶಾಸಕರಾದ ಹಂಪಯ್ಯ ನಾಯಕ, ದೇವದುರ್ಗ ಶಾಸಕರಾದ ಕರೆಮ್ಮ ಜಿ ನಾಯಕ, ವಿಧಾನ ಪರಿಷತ್ ಶಾಸಕರಾದ ಎ ವಸಂತಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಹಾಗೂ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್