ಮಹರ್ಷಿ ವಾಲ್ಮೀಕಿ ಭಾರತದ ದಿವ್ಯ ಜ್ಯೋತಿ : ಹೆಚ್. ಕೆ ನರಸಿಂಹಮೂರ್ತಿ
ಹಂಪಿ, 15 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭಾರತೀಯ ಪರಂಪರೆಯ ಮೊಟ್ಟ ಮೊದಲ ಕವಿ ವಾಲ್ಮೀಕಿ. ಅವರು ಬರೆದ ವಾಲ್ಮೀಕಿ ರಾಮಾಯಣವು ಕೇವಲ ಒಂದು ಜಾತಿಗೆ, ಸಮುದಾಯಯಕ್ಕೆ, ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಅವರ ತತ್ವಸಿದ್ದಾಂತವು ಇಡೀ ವಿಶ್ವಮನುಕುಲಕ್ಕೆ ಮಾದರಿಯಾಗಿದೆಂದು ತುಮಕೂರಿನ ಪದವಿಪೂರ್ವ ಶಿಕ್
ಮಹರ್ಷಿ ವಾಲ್ಮೀಕಿಯು ಭಾರತದ ದಿವ್ಯ ಜ್ಯೋತಿ: ಶ್ರೀ ಹೆಚ್. ಕೆ ನರಸಿಂಹಮೂರ್ತಿ


ಮಹರ್ಷಿ ವಾಲ್ಮೀಕಿಯು ಭಾರತದ ದಿವ್ಯ ಜ್ಯೋತಿ: ಶ್ರೀ ಹೆಚ್. ಕೆ ನರಸಿಂಹಮೂರ್ತಿ


ಮಹರ್ಷಿ ವಾಲ್ಮೀಕಿಯು ಭಾರತದ ದಿವ್ಯ ಜ್ಯೋತಿ: ಶ್ರೀ ಹೆಚ್. ಕೆ ನರಸಿಂಹಮೂರ್ತಿ


ಹಂಪಿ, 15 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ಪರಂಪರೆಯ ಮೊಟ್ಟ ಮೊದಲ ಕವಿ ವಾಲ್ಮೀಕಿ. ಅವರು ಬರೆದ ವಾಲ್ಮೀಕಿ ರಾಮಾಯಣವು ಕೇವಲ ಒಂದು ಜಾತಿಗೆ, ಸಮುದಾಯಯಕ್ಕೆ, ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಅವರ ತತ್ವಸಿದ್ದಾಂತವು ಇಡೀ ವಿಶ್ವಮನುಕುಲಕ್ಕೆ ಮಾದರಿಯಾಗಿದೆಂದು ತುಮಕೂರಿನ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಹೆಚ್.ಕೆ. ನರಸಿಂಹಮೂರ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ವಾಲ್ಮೀಕಿ ಅಧ್ಯಯನ ಪೀಠದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಮಕಾಲೀನ ಸಂದರ್ಭದಲ್ಲಿ ವಾಲ್ಮೀಕಿ ರಾಮಾಯಣ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ರಾಮಾಯಣವು ರಾಮನನ್ನು ಎಂದೂ ದೇವರನ್ನಾಗಿ ಕಂಡಿಲ್ಲ, ಅವರನ್ನು ಒಬ್ಬ ಉತ್ಕೃಷ್ಟ ವ್ಯಕ್ತಿಯನ್ನಾಗಿ ಕಂಡಿದೆ. ಇಂತಹ ವಾಲ್ಮೀಕಿ ರಾಮಾಯಣವನ್ನು ನಾವು ಮರೆತರೆ ಭಾರತದ ಸಂಸ್ಕೃತಿಯನ್ನು ಹಾಗೂ ಇತಿಹಾಸವನ್ನು ಮರೆತಂತೆ. ಪ್ರಮುಖವಾಗಿ ರಾಮಾಯಣವು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಮೊದಲು ಸಾರಿದ ಮಹಾಕಾವ್ಯವಾಗಿದ್ದು, ಇದರಲ್ಲಿ ಉತ್ತಮ ವ್ಯಕ್ತಿ ನಡುವಳಿಕೆಗಳೇನು, ಪರಿಸರವನ್ನು ಹೇಗೆ ಪೂಜಿಸಿಬೇಕು, ಗುರುಕುಲ ಶಿಕ್ಷಣ ಹೇಗಿರಬೇಕು, ಜನರಲ್ಲಿ ಸ್ನೇಹ ಸಂಬಂಧ ಹಾಗೂ ಬಾಂಧವ್ಯ ಹೇಗಿರಬೇಕು ಎನ್ನುವುದನ್ನು ಗ್ರಂಥದಲ್ಲಿ ತಿಳಿಸುತ್ತದೆ. ನಮ್ಮ ಮಾಜಿ ರಾಷ್ಟ್ರಪತಿಯಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಒಳ್ಳೆಯ ಮನುಷ್ಯನಾಗುವುದಕ್ಕೆ ವಾಲ್ಮೀಕಿ ರಾಮಾಯಣವನ್ನು ಉದಾಹರಣೆಯಾಗಿ ನೀಡುತ್ತಾರೆ. ಇನ್ನು ನಾವೆಲ್ಲರೂ ವಾಲ್ಮೀಕಿ ಅವರ ಹೆಸರನ್ನು ನಗರದ ವೃತ್ತಗಳಿಗೆ, ರಸ್ತೆಗಳಿಗೆ ನಾಮಕರಣ ಮಾಡುವುದರಿಂದ ಬದುಕು ಸ್ವಾರ್ಥಕವಾಗುವುದಿಲ್ಲ. ವಾಲ್ಮೀಕಿ ರಾಮಾಯಣನ್ನು ಓದಿ ಅದರ ಸಂದೇಶವನ್ನು ಅಳವಡಿಸಿಕೊಂಡು ಜೀವನ ನಡೆಸಿದರೆ ಉತ್ತಮ ಸಮಾಜವನ್ನು ನಿರ್ಮಿಸಬಹುದು ಎಂದು ತಿಳಿಸಿದರು.

ಸಂಡೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಮತಿ ಅನ್ನಪೂರ್ಣ ಈ. ತುಕಾರಾಮ್ ಅವರು ಮಾತನಾಡುತ್ತಾ, ಶ್ರೀ ಮಹರ್ಷಿ ವಾಲ್ಮೀಕಿ ಅವರು 64 ವಿದ್ಯೆಗಳನ್ನು ಕಲಿತ ಮಹಾನ್ ಚೇತನ, ಕೇವಲ ಒಂದೇ ಯುಗಕ್ಕೆ ಸೀಮಿತವಾಗಿಸದೇ, ಮುಂದಿನ ಯುಗ ಯುಗಕ್ಕೂ ಅವರನ್ನು ಸ್ಮರಿಸುವ ಅಗತ್ಯವಿದೆ. ಪ್ರಕೃತಿಯೊಂದಿಗೆ ನಾವು ಯಾವ ರೀತಿ ಜೀವಿಸಬೇಕೆಂಬ ಸಂದೇಶವನ್ನು ತಿಳಿಸಿದವರು. ಇಂತಹ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡಾಗ ನಮ್ಮಲ್ಲಿ ಬದಲಾವಣೆ ಸಾಧ್ಯ ಎಂದು ನುಡಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಂಡ ಅವರು ಮಾತನಾಡುತ್ತ, ವಾಲ್ಮೀಕಿ ರಾಮಾಯಣದ ಸಂದೇಶಗಳನ್ನು ಪ್ರತಿನಿತ್ಯ ನಮ್ಮ ಜೀವನದಲ್ಲಿ ಮತ್ತು ನಮ್ಮ ಬದುಕಿನಲ್ಲಿ ನೆನಪಿಸಿಕೊಳ್ಳುತ್ತ ಬಾಳಬೇಕು. ಇದು ಮನುಷ್ಯನ ಮೌಲ್ಯಗಳನ್ನು ಹೆಚ್ಚಿಸುವಂತಹ ಕಾವ್ಯವಾಗಿದ್ದು, ಪ್ರಕೃತಿಯ ಸಾರಾಂಶವನ್ನು ಸಾರಿದೆ ಎಂದು ತಿಳಿಸಿದರು.

2025ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಕೆ. ಉಚ್ಚೆಂಗೆಪ್ಪ ಅವರು ಮಾತನಾಡುತ್ತಾ, ವಿಶ್ವದ ಅತ್ಯಂತ ಪ್ರಸಿದ್ಧವಾದ ಮಹಾಕಾವ್ಯವಾಗಿದ್ದು ಶಾಶ್ವತವಾದ ಸಂದೇಶವನ್ನು ತಿಳಿಸುತ್ತದೆ. ವಾಲ್ಮೀಕಿಯಿಂದ ರಾಮಾಯಣ ರಾಮಾಯಣದಿಂದ ವಾಲ್ಮೀಕಿ ಅಲ್ಲ ಎಂದು ಈ ಸಂದರ್ಭದಲ್ಲಿ ನುಡಿದರು.

ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ರಾಮಾಯಣವು ವಿಶ್ವದಲ್ಲೇ ಹೆಚ್ಚು ಪ್ರಭಾವಿಸಿದ ಮಹಾಕಾವ್ಯ. ಇದು ಜನಸಾಮಾನ್ಯರಲ್ಲಿಯೂ ಹಾಗೂ ಸಾಹಿತ್ಯವಲದಲ್ಲಿಯೂ ಪ್ರಭಾವ ಬೀರಿದೆ. ನಾಗಚಂದ್ರನ ಪಂಪ ರಾಮಾಯಣ ಮುಂಚೆವು ಕನ್ನಡದಲ್ಲಿ ರಾಮಾಯಣಗಳನ್ನು ನಾವು ಕಾಣಬಹುದು. ರಾಮಾಯಣವು ಎಲ್ಲಾ ಪಂಥದವರೂ ಚರ್ಚಿಸುವ ಒಂದು ಮಹಾಕಾವ್ಯವಾಗಿದೆ. ವಾಲ್ಮೀಕಿ ಜಯಂತಿಯ ಮೂಲಕ ವಾಲ್ಮೀಕಿಯ ಸಂದೇಶಗಳನ್ನು ಸಾರಬೇಕು, ರಾಮಾಯಣದ ಹೆಚ್ಚಿನ ಆದರ್ಶಗಳನ್ನು ಕಾಣಬೇಕು, ಮತ್ತು ಸುಖಿ ಸಮಾಜವನ್ನು ಕಟ್ಟಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ಅಧ್ಯಯನ ಪೀಠದ ಸಂಚಾಲಕರಾದ ಡಾ. ಅಮರೇಶ ಯತಗಲ್ ಅವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಭಾಷಾ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಪಿ. ಮಹಾದೇವಯ್ಯ ಅವರು ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ- ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ಹೊಸಪೇಟೆ ಅಕ್ಕಪಕ್ಕದ ಗ್ರಾಮಸ್ಥರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande