ನವದೆಹಲಿ, 12 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನ್ಯಾಯದ ನಿಜವಾದ ಅರ್ಥ ಅತ್ಯಂತ ದುರ್ಬಲರನ್ನು ರಕ್ಷಿಸುವುದರಲ್ಲಿದೆ. ಕಾನೂನಿನ ನಿಯಮವು ನ್ಯಾಯ, ಘನತೆ ಮತ್ತು ಸಮಾನತೆಯ ಸಾಧನವಾಗಿ ಕಾರ್ಯನಿರ್ವಹಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದರು.
ಶನಿವಾರ ವಿಯೆಟ್ನಾಂನ ಹನೋಯ್ನಲ್ಲಿ ನಡೆದ “ಲಾ ಏಷ್ಯಾ” ಸಮ್ಮೇಳನದಲ್ಲಿ “ವೈವಿಧ್ಯತೆ ಮತ್ತು ಸೇರ್ಪಡೆಯನ್ನು ಉತ್ತೇಜಿಸುವಲ್ಲಿ ವಕೀಲರು ಮತ್ತು ನ್ಯಾಯಾಲಯಗಳ ಪಾತ್ರ” ಎಂಬ ವಿಷಯದ ಕುರಿತ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿ ವೈವಿಧ್ಯತೆ ಹಾಗೂ ಸೇರ್ಪಡೆಗೆ ಸಂಘಟಿತ ಪ್ರಯತ್ನಗಳು ಅಗತ್ಯ ಎಂದು ಒತ್ತಾಯಿಸಿದರು.
ತಮ್ಮದೇ ಜೀವನವನ್ನು ಉದಾಹರಿಸಿಕೊಂಡು ಮಾತನಾಡಿದ ಅವರು, “ನಾನು ಅಂಚಿನ ಸಮುದಾಯದಲ್ಲಿ ಜನಿಸಿದ್ದೇನೆ. ಆದರೆ ಸಂವಿಧಾನವು ನನಗೆ ಕೇವಲ ರಕ್ಷಣೆಯಷ್ಟೇ ನೀಡಿಲ್ಲ — ಗೌರವ, ಅವಕಾಶ ಮತ್ತು ಮನ್ನಣೆಗಳನ್ನು ಸಹ ಖಚಿತಪಡಿಸಿದೆ. ಸಂವಿಧಾನದಿಂದ ನನಗೆ ದೊರೆತ ಘನತೆ, ಇತರ ಯಾವುದೇ ನಾಗರಿಕರಂತೆಯೇ ಸಮಾನವಾಗಿ ಗುರುತಿಸಲ್ಪಟ್ಟಿದೆ,” ಎಂದರು ಎಂದು ಬಾರ್ & ಬೆಂಚ್ ವರದಿ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಗೌತಮ ಬುದ್ಧ, ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ತಮ್ಮ ತಂದೆ ಆರ್.ಎಸ್. ಗವಾಯಿ ಅವರ ಪ್ರಭಾವವನ್ನು ಸ್ಮರಿಸಿದರು. ಡಾ. ಅಂಬೇಡ್ಕರ್ ಕಾನೂನನ್ನು ಶ್ರೇಣೀಕೃತ ಸಾಧನದಿಂದ ಸಮಾನತೆಯ ಸಾಧನವಾಗಿ ಪರಿವರ್ತಿಸಿದರು ಎಂಬುದನ್ನು ಉಲ್ಲೇಖಿಸಿದ ಅವರು, ತಮ್ಮ ತಂದೆ ತಮ್ಮಲ್ಲಿ ನ್ಯಾಯ ಮತ್ತು ಕರುಣೆಯ ಮೌಲ್ಯಗಳನ್ನು ತುಂಬಿದರು ಎಂದು ಹೇಳಿದರು.
“ಕಾನೂನು ವ್ಯಕ್ತಿಯ ಘನತೆಯನ್ನು ರಕ್ಷಿಸಿದಾಗ ಅದು ಅವನ ಜೀವನದ ಹಾದಿಯನ್ನೇ ಬದಲಾಯಿಸಬಲ್ಲದು. ವೈವಿಧ್ಯತೆ ಮತ್ತು ಸೇರ್ಪಡೆಯ ಕಲ್ಪನೆ ನನ್ನ ದೃಷ್ಟಿಯಲ್ಲಿ ಕೇವಲ ಅಮೂರ್ತ ಕನಸಲ್ಲ — ಅದು ಲಕ್ಷಾಂತರ ನಾಗರಿಕರ ಆಕಾಂಕ್ಷೆಯಾಗಿದೆ,” ಎಂದು ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa