
ಧಾರವಾಡ, 15 ಆಗಸ್ಟ್ (ಹಿ.ಸ.):
ಆ್ಯಂಕರ್:
ನಮ್ಮ ದೇಶದ ಯುವಕರು, ಬುದ್ಧ, ಬಸವ ಅವರ ಹಾದಿಯಲ್ಲಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ಸಿಂಗ್, ರಾಜಗುರು, ಸುಖದೇವ, ಸುಭಾಷ್ಚಂದ್ರ ಬೋಸ್ ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರಾದ ಸಂತೋಷ ಎಸ್. ಲಾಡ್ ಅವರು ಹೇಳಿದರು.
ಧಾರವಾಡ ಜಿಲ್ಲಾಡಳಿತ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,
ಭಾರತವು ಜಿಡಿಪಿಯಲ್ಲಿ ಆರನೇ ಸ್ಥಾನದಲ್ಲಿ ಇದೆ. ಇವತ್ತು ಈ ದೇಶದಲ್ಲಿ ಶೇ. 1 ರಷ್ಟು ಜನಸಂಖ್ಯೆಯು ಶೇ. 40 ರಷ್ಟು ಆಸ್ತಿ ಹೊಂದಿದ್ದಾರೆ. ಸುಮಾರು 9 ಕೋಟಿ ಜನರು ತೆರಿಗೆ ವ್ಯಾಪ್ತಿಯಲ್ಲಿ ಬರುತ್ತಾರೆ. ಆದರೆ 4.5 ಕೋಟಿ ಜನ ಮಾತ್ರ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಅರ್ಹ ತೆರಿಗೆದಾರರು ನಿಯಮಾನುಸಾರ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದರೆ, ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಭಾರತವು ದೇಶವು ಅಭಿವೃದ್ಧಿ ಹೊಂದಲು ದೇಶದ ಏಕತೆ, ಸಂಸ್ಕøತಿ, ವಿಶೇಷವಾಗಿ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಹಾಗೂ ಇತರರು, ಎಲ್ಲರೂ ಒಂದೇ ಎಂದು ಸಹಬಾಳ್ವೆಯಿಂದ ಇದ್ದಾಗ ದೇಶದ ಏಕತೆಯ ಸಂಸ್ಕೃತಿಯನ್ನು ಕಾಪಾಡಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದರು.
ಸ್ವಾತಂತ್ರ್ಯ ದಿನವು ಕೇವಲ ರಜಾದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಧನ್ಯವಾದ ಹೇಳಲು ಮತ್ತು ಅವರ ಮೌಲ್ಯಗಳನ್ನು ನೆನಪಿಸಿಕೊಳ್ಳಲು ಒಂದು ಅವಕಾಶ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟವು ವಿಶ್ವದ ಇತಿಹಾಸದಲ್ಲೇ ಅತ್ಯಂತ ಉತ್ತಮವಾದ ಚಳವಳಿಗಳಲ್ಲಿ ಒಂದಾಗಿದೆ. ಭಾರತದ ಸ್ವಾತಂತ್ರ್ಯದ ಚಳವಳಿಯನ್ನು ರೂಪಿಸಿದ ನಮ್ಮ ಹಿರಿಯ ಹೋರಾಟಗಾರರಾದ ರಾಜಾರಾಮ್ ಮೋಹನ್ ರಾಯ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ದಾದಾಬಾಯಿ ನವರೋಜಿ, ಬಾಲ ಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್, ಗೋಪಾಲಕೃಷ್ಣ ಗೋಖಲೆ, ಮಹಾತ್ಮ ಗಾಂಧೀಜಿ, ಅಬ್ದುಲ್ ಕಲಾಂ ಆಜಾದ್, ಜವಾಹರಲಾಲ್ ನೆಹರು, ನೇತಾಜಿ ಸುಭಾಷ್ಚಂದ್ರ ಬೋಸ್, ಡಾ. ಬಿ. ಆರ್. ಅಂಬೇಡ್ಕರ್, ಭಗತ್ ಸಿಂಗ್ ಮೊದಲಾದ ಮಹನೀಯರುಗಳನ್ನು ನೆನಪಿಸಿಕೊಳ್ಳೋಣ.
ಧಾರವಾಡ ಜಿಲ್ಲೆಯ ಮೈಲಾರ ಮಹದೇವಪ್ಪ, ಆರ್.ಆರ್.ದಿವಾಕರ್, ಉಮಾಬಾಯಿ ಕುಂದಾಪುರ, ಎನ್. ಎಸ್. ಹರಡೀಕರ್, ಕೆ. ಎಫ್. ಪಾಟೀಲ, ಗೋವಿಂದಾಚಾರ್ಯ ಅಗ್ನಿಹೋತ್ರಿ, ಡೆಪ್ಯೂಟಿ ಚನ್ನಬಸಪ್ಪ, ಸರ್. ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡರು ಅವರುಗಳು ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಕೈ ಜೋಡಿಸಿದ್ದರು. ನಮ್ಮ ಧ್ವಜವು, ನಮ್ಮ ಆತ್ಮಗೌರವ, ಏಕತೆ, ಮತ್ತು ತ್ಯಾಗದ ಸಂಕೇತವಾಗಿದೆ. ರಾಷ್ಟ್ರಧ್ವಜವನ್ನು ಧಾರವಾಡದ ಗರಗ ಹಾಗೂ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಸಿದ್ಧಪಡಿಸಿ, ಇಡೀ ದೇಶಕ್ಕೆ ಒದಗಿಸಲಾಗುತ್ತಿದೆ. ಇಂದು ಭಾರತವು ವಿಶ್ವದ ಪ್ರಮುಖ ದೇಶಗಳ ಸಾಲಿನಲ್ಲಿ ಸೇರುತ್ತದೆ. ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ದೇಶ ಹೆಚ್ಚಿನ ಸಾಧನೆ ಮಾಡಿದೆ. ಈ ಅಭಿವೃದ್ಧಿಯ ಪಯಣದಲ್ಲಿ ಕರ್ನಾಟಕ ಮತ್ತು ಧಾರವಾಡ ಜಿಲ್ಲೆಯ ಕೊಡುಗೆಯೂ ಉತ್ತಮವಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ನೂತನ ಸರ್ಕಾರವು ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ನೂತನವಾಗಿ ಪ್ರಜಾ ಸೇವಾ ಇಲಾಖೆಯನ್ನು ಸ್ಥಾಪಿಸಿದೆ. ರೈತ ಮಿತ್ರ, ಬಡವರ ಬಂಧು-ಅತಿ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಮೊತ್ತದಲ್ಲಿ ಶೇ. 50 ರಷ್ಟು ಸಹಾಯ ಧನ ನೀಡಲಾಗುವುದು.
ಗ್ರಾಮ ಅನುಭವ- ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಅನುಭವಕ್ಕಾಗಿ ಗ್ರಾಮ ವಾಸ್ತವ್ಯವನ್ನು ಆರಂಭಿಸಲಾಗುವುದು. ಯುವ ಯುಗ-ಯುವ ಕರ್ನಾಟಕ ನಿರ್ಮಾಣ: ಭಾರತ್ ಜೋಡೋ ಯುವ ಸಂಘ ಮಿಷನ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 6000, ನಗರ ಪ್ರದೇಶಗಳಲ್ಲಿ 4000 ಸಂಘಗಳ ಸ್ಥಾಪನೆ, ವಾರ್ಷಿಕ ತಲಾ 10 ಲಕ್ಷ ಅನುದಾನದಂತೆ ವಾರ್ಷಿಕ 1000 ಕೋಟಿಗಳ ವೆಚ್ಚ ಯುವಕರಲ್ಲಿ ಆರೋಗ್ಯ ಕೌಶಲ್ಯ ಸಾಮಾಜಿಕ ಸಾಮರಸ್ಯ ಉತ್ತೇಜನ ನೀಡಲಾಗುವುದು. ಯುವ ಉದ್ಯೋಗ ಸೇತು-ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ಆಸ್ಪತ್ರೆಗಳ ದತ್ತು ಯೋಜನೆ - ರಾಜ್ಯದ ಮೆಡಿಕಲ್ ಕಾಲೇಜುಗಳು, ಸಿಎಚ್ಸಿ ಮತ್ತು ಪಿಎಚ್ಸಿ ಗಳಿಗೆ ಅವಶ್ಯ ಮಾನವ ಸಂಪನ್ಮೂಲ ಒದಗಿಸಲು ಉತ್ತೇಜನ ನೀಡಲಾಗುವುದು. ನಶೆ ಮುಕ್ತ ಕರ್ನಾಟಕ- ಯುವಕರು ನಶೆ ಪದಾರ್ಥಗಳಿಂದ ದೂರ ಇರಲು ಅರಿವು ಮೂಡಿಸಲು ಕಾರ್ಯಕ್ರಮವನ್ನು ರೂಪಿಸಿ ವ್ಯಸನ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಪ್ರಜಾ ಸೇವೆ ಇಲಾಖೆ - ಸಾರ್ವಜನಿಕರ ಕುಂದುಕೊರತೆ ಆಲಿಸಲು ಪ್ರತ್ಯೇಕ ಇಲಾಖೆ ಸ್ಥಾಪಿಸಿ ಆಧುನಿಕ ತಂತ್ರಜ್ಞಾನದ ಮೂಲಕ ತ್ವರಿತ ಸ್ಪಂದನೆಗೆ ಕ್ರಮ. ಭೂ ಗ್ಯಾರಂಟಿ - ರಾಜ್ಯದ ಎಲ್ಲಾ ಕೃಷಿಯೇತರ ಸ್ವತ್ತುಗಳಿಗೆ ಇ-ಖಾತೆ ಸೇರಿದಂತೆ ಡಿಜಿಟಲ್ ಆರ್.ಟಿ.ಸಿ.ಗಳು ಮತ್ತು ಅರ್ಹ ಬಿ-ಖಾತೆಗಳನ್ನು ಎ-ಖಾತೆಗಳಾಗಿ ಪರಿವರ್ತಿಸುವುದು. ಕರ್ನಾಟಕ ಮೊಬಿಲಿಟಿ ಗ್ರಿಡ್ ಮಿಷನ್ - ರಾಜ್ಯದ ಎಲ್ಲಾ ನಗರ ಮತ್ತು ಪಟ್ಟಣಗಳಲ್ಲಿ ರಿಂಗ್ ರಸ್ತೆ, ಬೈಪಾಸ್ ರಸ್ತೆಗಳನ್ನು ನಿರ್ಮಿಸಿ ಸಂಚಾರ ದಟ್ಟಣೆ ಕಡಿಮೆ ಮಾಡಲಾಗುವುದು. ತೇಗದ ಸಿರಿ - ವಾಣಿಜ್ಯ ಬೆಳೆ ಆದ ತೇಗದ ಮರಗಳನ್ನು ರೈತರು ತಮ್ಮ ಜಮೀನಿನ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ಬೆಳೆಸಲು ಉತ್ತೇಜನ ನೀಡಲಾಗುವುದು. ಇದರಿಂದ ಬರುವ ಆಧಾಯದಲ್ಲಿ ಶೇ. 70 ರಷ್ಟು ರೈತರಿಗೆ ನೀಡಲಾಗುವುದು. ರಾಜ್ಯದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ನುಡಿದಂತೆ ನಡೆದಿದ್ದು, ಜನಪರ ಯೋಜನೆಗಳಾದ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಶಕ್ತಿ ಯೋಜನೆ ಅಡಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಜುಲೈ-2026 ವರೆಗೆ 42 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿರುತ್ತಾರೆ. ರೂ.937 ಕೋಟಿ ಮೊತ್ತದ ಸೇವೆಯನ್ನು ಪಡೆದಿರುತ್ತಾರೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಒಟ್ಟು 4,04,827 ಮಹಿಳೆಯರಿಗೆ ರೂ.2,270.00 ಕೋಟಿಗಳ ಅನುದಾನವನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿದೆ.
ಗೃಹಜ್ಯೋತಿ ಯೋಜನೆ ಅಡಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಒಟ್ಟು 5,12,270 ಕುಟುಂಬಗಳಿಗೆ ರೂ.803.00 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ನಮ್ಮ ಜಿಲ್ಲೆಯಲ್ಲಿ 3,75,996 ಬಿ.ಪಿ.ಎಲ್. ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸಲಾಗಿದೆ. ಯುವನಿಧಿ ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ 11,553 ಫಲಾನುಭವಿಗಳಿಗೆ ನೇರ ನಗದು (ಡಿಬಿಟಿ) ಹಣವನ್ನು ವರ್ಗಾವಣೆ ಮಾಡಲಾಗಿದೆ.
2026-27 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈವೆರೆಗೆ ಒಟ್ಟು 2.71 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಜಿಲ್ಲೆಯ 68,055 ರೈತರಿಗೆ ರೂ.130.45 ಕೋಟಿಗಳ ಬೆಳೆ ಪರಿಹಾರವನ್ನು ವಿತರಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಒಟ್ಟು 15,855 ಕ್ವಿಂಟಾಲ್ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ ಹಾಗೂ 36,740 ಮೆಟ್ರಿಕ್ ಟನ್ಗಳಷ್ಟು ರಸಗೊಬ್ಬರವನ್ನು ವಿತರಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ರೂ.28.68 ಕೋಟಿಗಳ ಅನುದಾನ ಲಭ್ಯವಿರುತ್ತದೆ ಎಂದು ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.
ರೈತರು, ಕಾರ್ಮಿಕರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ವರ್ಗದ ಬಡ ಜನತೆಗೆ ಭದ್ರತೆಯನ್ನು ಒದಗಿಸಲು ಸರ್ಕಾರ ಸದಾ ಬದ್ಧವಾಗಿದೆ. ನಮ್ಮ ಸರ್ಕಾರವು ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವ ಗುರಿ ಹೊಂದಿದೆ. ಸರ್ಕಾರ ರೂಪಿಸುವ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಎಲ್ಲರ ಸಹಕಾರ ಮತ್ತು ಬದ್ಧತೆ ಅಗತ್ಯವಾಗಿದೆ ಎಂದು ಹೇಳಿದರು.
ಸಾಧಕರಿಗೆ ಸನ್ಮಾನ: 80 ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಧಾರವಾಡ ಜಿಲ್ಲಾಡಳಿತದಿಂದ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಸಚಿವರಾದ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್.ಆರ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಹಿರಿಯರನ್ನು ಗೌರವಿಸಿ, ಸನ್ಮಾನಿಸಿದರು.
ಪರಿಸರ ವಿಭಾಗದಲ್ಲಿ ಪಂಡಿತ ಮುಂಜಿ, ಕ್ರೀಡಾ ವಿಭಾಗದಲ್ಲಿ ಜಾನವಿ.ಕೆ, ಐಶ್ವರ್ಯ.ರ., ಅನು.ಎ.ಮುತ್ತಗಿ, ಸಾಯಿಪ್ರಸಾದ. ಪ. ಕ್ಷಾತ್ರತೇಜ, ಓಂ ಗೌಡ ಜಂತ್ಲಿ, ಎಸ್ಐಆರ್ ಚಟುವಟಿಕೆಯ ವಿಭಾಗದಲ್ಲಿ ಶಿವಲೀಲಾ ಹುಲ್ಲೂರ. ಸಂಗೀತ ವಿಭಾಗದಲ್ಲಿ ವೀರಣ್ಣ ದೇವೇಂದ್ರಪ್ಪ ಪತ್ತಾರ. ಸಾಹಿತ್ಯ ವಿಭಾಗದಲ್ಲಿ ರೇಣುಕಾ ತಾಯಿ ಸಂತಬಾ, ವೈದ್ಯಕೀಯ ವಿಭಾಗದಲ್ಲಿ ಡಾ. ಉಮೇಶ್ವರ ರುದ್ದಪ್ಪ ಹಳ್ಳಿಕೇರಿ, ಕೃಷಿ ವಿಭಾಗದಲ್ಲಿ ಡಾ.ಶೌಕತ್ಅಲಿ ಲಂಬೂನವರ. ಮಾಧ್ಯಮ ವಿಭಾಗದಲ್ಲಿ ಅಕ್ಷಯ ಮಹಾಂತೇಶ ಕಮತಗಿ, ಶಿವಲಿಂಗಯ್ಯ ಪಾಟೀಲ. ಸಮಾಜ ಸೇವೆ ವಿಭಾಗದಲ್ಲಿ ಡಾ. ಶಿವಾಜಿ ಕಾಶೀನಾಥ ಜಾಧವ, ಸರ್ಕಾರಿ ಸೇವೆ ವಿಭಾಗದಲ್ಲಿ ಪರಶುರಾಮ ಕವಲೂರ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ ಚೆಕ್ಗಳ ವಿತರಣೆ: ಕಾರ್ಮಿಕ ಇಲಾಖೆಯಿಂದ ಮಾತೃತ್ವ ಪ್ರಯೋಜನ 1961 ಕಾಯ್ದೆಯಲ್ಲಿ ಇಬ್ಬರು ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ ಚೆಕ್ಗಳನ್ನು ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರಾದ ಸಂತೋಷ ಎಸ್.ಲಾಡ್ ಅವರು ವಿತರಣೆ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.