
ಕೊಪ್ಪಳ, 14 ಮಾರ್ಚ್ (ಹಿ.ಸ.)
ಆ್ಯಂಕರ್: ಪ್ರೀತಿ ವಿಚಾರಕ್ಕೆ ಅಡ್ಡಿಯಾದನೆಂದು ಕೊಲೆಯಾದ ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದ ಮಂಜುನಾಥ ಎಂಬ ಬಾಲಕನ ಕೊಲೆ ಪ್ರಕರಣದಲ್ಲಿ ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ರೂ.7 ಸಾವಿರಗಳ ದಂಡ ಸಹಿತ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಕೊಪ್ಪಳ ನ್ಯಾಯಾಲಯವು ಆದೇಶ ಹೊರಡಿಸಿದೆ.
ತಳಕಲ್ ಗ್ರಾಮದ ಅಣ್ಣಪ್ಪ ತಂ.ಹೇಮಣ್ಣ ನಡುವಲಮನಿ ಎಂಬ ವ್ಯಕ್ತಿಯು ಅದೇ ಗ್ರಾಮದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಈ ವಿಷಯವನ್ನು ಹುಡುಗಿಯ ತಮ್ಮ ಮಂಜುನಾಥ ಎಂಬ ಬಾಲಕನು ಮನೆಯಲ್ಲಿ ಹೇಳಿದ್ದರಿಂದ ಹುಡುಗಿ ಮನೆಯವರು ಅಣ್ಣಪ್ಪನಿಗೆ ಹುಡಗಿಯ ತಂಟೆಗೆ ಬರದಂತೆ ಬೈದು ಬುದ್ದಿವಾದ ಹೇಳಿ, ತಾಕೀತು ಮಾಡಿದ್ದರು. ಇದರಿಂದ ಕೋಪಗೊಂಡ ಅಣ್ಣಪ್ಪನು ತನ್ನ ಪ್ರೀತಿ ವಿಚಾರಕ್ಕೆ ಬಾಲಕ ಮಂಜುನಾಥ ಅಡ್ಡಿಯಾಗುವನೆಂದು ಭಾವಿಸಿ 2020 ರ ಜುಲೈ 19 ರಂದು ಬಾಲಕನನ್ನು ಚಿಗರಿ ನೋಡುವ ಆಸೆ ತೋರಿಸಿ, ಕೊಪ್ಪಳ ತಾಲ್ಲೂಕಿನ ಹಲಗೇರಿ ಸೀಮಾದಲ್ಲಿರುವ ಸರಕಾರಿ ಇಚ್ಚಲ ಹಳ್ಳದಲ್ಲಿ ಕೊಲೆಗೈದು, ಗುಂಡಿ ತೋಡಿ ಮುಚ್ಚಿ ಇಟ್ಟಿದ್ದನು. ಈ ಬಗ್ಗೆ ಕುಕನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.57/2020, ಕಲಂ: 364, 302, 201 ಐಪಿಸಿ ಅಡಿ ಪ್ರಕರಣ ದಾಖಲಾಗಿತ್ತು.
ಆಗಿನ ತನಿಖಾಧಿಕಾರಿಗಳಾಗಿದ್ದ ಯಲಬುರ್ಗಾ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ನಾಗರೆಡ್ಡಿಯವರು ಪ್ರಕರಣದ ತನಿಖೆಯಲ್ಲಿ ಆರೋಪಿತನ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಆರೋಪಿಯ ವಿರುದ್ದ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆಯಲ್ಲಿ ಆರೋಪಿಯ ವಿರುದ್ಧದ ಆರೋಪಗಳು ಸಾಕ್ಷಾö್ಯಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಚಂದ್ರಶೇಖರ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗು ರೂ.7000/- ಗಳ ದಂಡವನ್ನು ವಿಧಿಸಿ ಮಾರ್ಚ್ 12 ರಂದು ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಮನೋಹರ ಅವರು ವಾದ ಮಂಡಿಸಿದ್ದರು. ಕುಕನೂರು ಪೊಲೀಸ್ ಠಾಣೆ ಸಿಬ್ಬಂದಿ ಅರ್ಜುನ್ ಸಿಪಿಸಿ-464, ಬಸಯ್ಯ ಸಿಎಚ್ಸಿ-182, ಅಮರೇಗೌಡ ಸಿಪಿಸಿ-502 ಇವರು ಸಾಕ್ಷೀದಾರರನ್ನು ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕರಿಸಿದ್ದಾರೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರ ಕಾರ್ಯಾಲಯ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್