
ಮೈಸೂರು, 18 ಜನವರಿ (ಹಿ.ಸ.) :
ಆ್ಯಂಕರ್ : ಶಿಕ್ಷಣದಿಂದ ವ್ಯಕ್ತಿತ್ವವನ್ನು ಹಾಗೂ ಮನುಷ್ಯತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಹೇಳಿದರು.
ಇಂದು ಮೈಸೂರಿನ ಶ್ರೀ ಮುತ್ತತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗೀಗಳವರ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಕೃಷಿ ವಿಚಾರಸಂಕಿರಣ ಉದ್ಘಾಟನೆ ಕೃಷಿಯಲ್ಲಿ ಮಹಿಳೆ ಸುಸ್ಥಿರ ಅಭಿವೃದ್ಧಿ ಮತ್ತು ಆಹಾರ ಭದ್ರತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುತ್ತೂರು ಜಾತ್ರಾ ಮಹೋತ್ಸವ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.ಒಂದು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಸುತ್ತೂರು ಮಠ ಶಿಕ್ಷಣಕ್ಕೆ ಮೊದಲಿನಿಂದಲೂ ಹೆಚ್ಚು ಒತ್ತು ಕೊಡುತ್ತಾ ಬಂದಿದೆ. ಧಾರ್ಮಿಕವಾಗಿ ತೊಡಗಿಸಿಕೊಂಡಿರುವ ಜೊತೆಗೆ ಜ್ಞಾನ ಮತ್ತು ಅನ್ನದಾಸೋಹಕ್ಕೆ ಮಹತ್ವ ನೀಡಿದೆ. ಶಿಕ್ಷಣದಿಂದ ಮಾತ್ರ ಸ್ವಾಭಿಮಾನ ಬರಲು ಸಾಧ್ಯವಾಗುವುದರಿಂದ ಶಿಕ್ಷಣವೇ ಬಹಳ ಮುಖ್ಯ. ನೂರಕ್ಕೆ ಶೇ.75% ಜನ ಶಿಕ್ಷಣ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಅದನ್ನು ಮನಗಂಡ ಮಠ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿದೆ ಎಂದರು.
ದಯೆಯಿಲ್ಲದ ಧರ್ಮ ಯಾವುದಯ್ಯ ಎಂದು ಬಸವಣ್ಣ ಧರ್ಮದ ಕುರಿತು ವ್ಯಾಖ್ಯಾನ ಮಾಡಿದ್ದಾರೆ. ಎಲ್ಲ ಧರ್ಮಕ್ಕಿಂತ ಮಾನವ ಧರ್ಮ ಮೇಲು ಎಂದು ಅರ್ಥ ಮಾಡಿಕೊಳ್ಳಬೇಕು. ನಾವೆಲ್ಲರೂ ಮೂಲತಃ ಮನುಷ್ಯರು. ಯಾವುದೇ ಧರ್ಮವಿದ್ದರೂ ಮನುಷ್ಯರು ಪರಸ್ಪರ ಪ್ರೀತಿಸಬೇಕು ಎಂದು ಹೇಳುತ್ತದೆಯೇ ವಿನ: ದ್ವೇಷ ಮಾಡಿ ಎಂದು ಹೇಳಿಕೊಡುವುದಿಲ್ಲ. ಇದೇ ಸಮಾಜಕ್ಕೆ ನಾವು ಕೊಡುವ ಕೊಡುಗೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa