ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮನುಕುಲದ ಆರೋಗ್ಯ ಸಂರಕ್ಷಣೆಯಲ್ಲಿ ಔಷಧ ಶಾಸ್ತ್ರಜ್ಞರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಎಸ್.ಎಸ್. ಬಿಜಿಐ ಗೌರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾದ ಪ್ರೊ.ಎಸ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ನಗರದ ಶ್ರೀಶರಣಬಸವೇಶ್ವರ ಫಾರ್ಮಸಿ ಕಾಲೇಜಿನಲ್ಲಿ ವಿಶ್ವ ಔಷಧ ಶಾಸ್ತ್ರಜ್ಞರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಸಕ್ತ ಔಷಧ ಶಾಸ್ತ್ರಜ್ಞರ ದಿನವನ್ನು ಥಿಂಕ್ ಹೆಲ್ತ್ ಅಂಡ್ ಥಿಂಕ್ ಫಾರ್ಮಸಿಸ್ಟ್ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಔಷಧಿಗಳ ಸುರಕ್ಷಿತ, ಪರಿಣಾಮಕಾರಿ ಬಳಕೆಯಲ್ಲಿ ಹಾಗೂ ಸಾರ್ವಜನಿಕ ಆರೋಗ್ಯದಲ್ಲಿ ಔಷಧಶಾಸ್ತ್ರಜ್ಞರ ಪ್ರಮುಖ ಪಾತ್ರ ಅತ್ಯಂತ ಮಹತ್ವಾದ್ದಾಗಿ ಎಂದು ಬಣ್ಣಿಸಿದರು.
ಪ್ರಾಂಶುಪಾಲ ಡಾ.ಎಚ್. ಶಿವಕುಮಾರ ಮಾತನಾಡಿ, ಔಷಧಶಾಸ್ತ್ರಜ್ಞರು ಆರೋಗ್ಯ ಕ್ಷೇತ್ರದ ಹೃದಯಸ್ಥಾನವಾಗಿದ್ದು, ಔಷಧಿಗಳ ಗುಣಮಟ್ಟ, ಸುರಕ್ಷತೆ ಮತ್ತು ಲಭ್ಯತೆ ಖಾತರಿಪಡಿಸುತ್ತಾರೆ ಎಂದು ವಿವರಿಸಿದರು.
ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಜ್ಞಾನ, ಕೌಶಲ್ಯವನ್ನು ಬೆಳೆಸಿಕೊಂಡಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ನಿಮ್ಮ ಸೇವೆ ಮಾನವ ಸೇವೆಗೆ ಸಮರ್ಪಿತವಾಗಿರಬೇಕು ಎಂದು ಕಿವಿಮಾತು ಹೇಳಿದರು.
ವಿಜಯಪುರ ಜಿಲ್ಲಾ ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ರಮೇಶ ಬಿರಾದಾರ, ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಹೇಂದ್ರ ಕಾಪ್ಸೆ ಮಾತನಾಡಿದರು.
ಎಸ್.ಎಸ್.ಬಿ. ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಪ್ರೊ. ಈರಣ್ಣ ಶೀರಾಳಶೆಟ್ಟಿ ಹಾಗೂ ಎಸ್.ಎಸ್.ಬಿ. ಪಿಯು ಕಾಲೇಜಿನ ಪ್ರಾಚಾರ್ಯ ಪ್ರಜ್ವಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆರೋಗ್ಯ ಸೇವೆಯಲ್ಲಿ ತೊಡಗಿರುವ ಸರ್ಕಾರಿ ಔಷಧಶಾಸ್ತ್ರಜ್ಞರಾದ ಶಾಂತಕುಮಾರ ರೂಡಗಿ, ಶ್ರೀಶೈಲ ಸಂದಿಮನಿ, ಅಬ್ದುಲ್ ಖಾದರ್ ಕೇಶಾಪೂರ, ಅರ್ಚನಾ ನಾಟಿಕರ, ಅಶ್ಪಾಕ, ಅಶೋಕ ತೆಲ್ಲೂರ ಇವರನ್ನು ಸನ್ಮಾನಿಸಲಾಯಿತು.
ವೃತ್ತಿಯ ಮಹತ್ವ ಸಾರುವ ಉಪನ್ಯಾಸ, ಪೋಸ್ಟರ್ ಪ್ರದರ್ಶನ, ಆರೋಗ್ಯ ಜಾಗೃತಿ ಅಭಿಯಾನಗಳು ಮತ್ತು ಕ್ವಿಜ್ ಸೇರಿದಂತೆ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ವಿನೋದ ಬಬಲೇಶ್ವರ ಕಾರ್ಯಕ್ರಮ ಸಂಯೋಜಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande