ಕೊಪ್ಪಳ, 05 ಜೂನ್ (ಹಿ.ಸ.) :
ಆ್ಯಂಕರ್ : ನಾನಾ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಗುರುವಾರ ತಾಲ್ಲೂಕಿನ ಗೊಂಡಬಾಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗ್ರಾಮ ಪಂಚಾಯತಿಯಿಂದ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದ್ದು, ಹಂತವಾರು ಸಹಾಯಧನ ಫಲಾನುಭವಿಗೆ ದೊರಕುವಂತೆ ಕ್ರಮವಹಿಸಬೇಕು. ಫಲಾನುಭವಿಗಳನ್ನು ಆಯ್ಕೆ ಸಂದರ್ಭದಲ್ಲಿ ಕಾಯ್ದಿರಿಸಿದ ಪಟ್ಟಿಯಲ್ಲಿರುವವರಿಗೆ ಮನೆ ಮಂಜೂರಾತಿ ಮಾಡಬೇಕು ಎಂದು ಸಿಇಒ ಅವರು ಪಂಚಾಯತ ಅಭಿವೃದ್ದಿ ಅಧಿಕಾರಿಗೆ ಸೂಚಿಸಿದರು.
2018-19 ರಿಂದ 2025-26ನೇ ಸಾಲಿನ ವರೆಗೆ ಮನೆ ಮಂಜೂರಾತಿಯಾಗಿರುವ ಫಲಾನುಭವಿಗಳ ಪಟ್ಟಿಯನ್ನು ಖುದ್ದು ಪರಿಶೀಲಿಸಿದರು. ಗ್ರಾಮ ಪಂಚಾಯತಿಯಲ್ಲಿ ವಸತಿರಹಿತರು ಮತ್ತು ನಿವೇಶನರಹಿತರ ಒಂದು ಅಂತಿಮ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಗ್ರಾಮ ಪಂಚಾಯತಿಗೆ ಮನೆ ಮಂಜೂರಾದ ಸಂದರ್ಭದಲ್ಲಿ ಅರ್ಹರಿಗೆ ಮನೆ ಮಂಜೂರಾತಿ ನೀಡಬೇಕೆಂದು ನಿರ್ದೇಶಿಸಿದರು.
ತ್ಯಾಜ್ಯ ಸಂಗ್ರಹಣೆ ಶುಲ್ಕ ವಸೂಲಾತಿಗೆ ಒತ್ತು: ಸಂಜಿವಿನಿ ಒಕ್ಕೂಟದ ಸದಸ್ಯರು ಪ್ರತಿ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಣೆ ಶುಲ್ಕವನ್ನು ಪಾವತಿಸುವಂತೆ ಮನವೋಲಿಸುವಂತೆ ಒಕ್ಕೂಟದ ಸದಸ್ಯರಿಗೆ ಸಿಇಒ ಅವರು ಸೂಚಿಸಿದರು. ಇದರಿಂದ ಗ್ರಾಮದಲ್ಲಿ ಕಸ ವಿಲೇವಾರಿಯಾಗುವದರ ಜೊತೆಗೆ ಗ್ರಾಮದಲ್ಲಿ ನೈರ್ಮಲ್ಯದಿಂದ ಕೂಡಿರುತ್ತದೆ. ಕಸ ಸಂಗ್ರಹಣೆ ಮತ್ತು ಪ್ರತ್ಯೇಕಿಸುವ ಸಲುವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವೇತನ ಪಾವತಿಗೆ ಅನುಕೂಲವಾಗುತ್ತದೆ ಎಂದರು. ಪ್ರತಿ ಮನೆಗೆ ತಿಂಗಳಿಗೆ ರೂ.30 ಹಾಗೂ ಹೊಟೆಲ್ಗಳಿಗೆ ರೂ.50 ನಿಗದಿಪಡಿಸಲಾಗಿದ್ದು, ಈ ತಿಂಗಳು ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಣೆ ಶುಲ್ಕವನ್ನು ವಸೂಲಾತಿ ಮಾಡಬೇಕೆಂದು ಒಕ್ಕೂಟದ ಸದಸ್ಯರಿಗೆ ಸೂಚಿಸಿದರು.
ಗೊಂಡಬಾಳ ಕೂಸಿನ ಮನೆ ಪರಿವೀಕ್ಷಣೆ: ಗ್ರಾಮದ ಕೂಸಿನ ಮನೆಗೆ ಭೇಟಿ ನೀಡಿ ಮಕ್ಕಳು ದಾಖಲಾಗಿರುವ ಕುರಿತು ಕೆರ್ ಟೆಕಸ್ರ್ಗಳು ಮಾಹಿತಿ ನೀಡಿದರು. ಪ್ರಸ್ತುತ 29 ಮಕ್ಕಳು ಪ್ರತಿ ದಿನ ಕೂಸಿನ ಮನೆಗೆ ಬರುತ್ತಿದ್ದು ಬೆಳಿಗ್ಗೆ ಹಾಲು, ಬಾಳೆಹಣ್ಣು, ದಾಲ್ ಖಿಚಡಿ, ಹೆಸರು ಬೆಳೆ ಪಾಯಸ, ಶಾವಿಗೆ ಪಾಯಸ, ಮೊಟ್ಟೆ ನೀಡುತ್ತಿರುವ ಕುರಿತು ವಿವರಿಸಿದರು. ಕೆರ್ ಟೆಕರ್ ಗಳಿಗೆ ವೇತನ ನೀಡವಂತೆ ಸಿಇಓ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಪ್ರಕಾಶ ವಿ., ತಾಲೂಕ ಪಂಚಾಯತ ಸಹಾಯಕ ನಿರ್ದೇಶಕ ಮಹೇಶ್, ಪಂಚಾಯತ ಅಭಿವೃದ್ದಿ ಅಧಿಕಾರಿ ಜಯಲಕ್ಷ್ಮೀ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಮ ಪಂಚಾಯತಿ ಸದಸ್ಯ ಕೊಟ್ರೇಶ್, ಗ್ರಾಮ ಪಂಚಾಯತ ಕಾರ್ಯದರ್ಶಿ ಗವಿಸಿದ್ದಯ್ಯ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್