ಬಳ್ಳಾರಿ, 26 ಜೂನ್ (ಹಿ.ಸ.)
ಆ್ಯಂಕರ್:
ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಾಗಿ ಗಮನಹರಿಸಿ ಉನ್ನತ ಗುರಿ ಸಾಧಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ಬಾಬು ಅವರು ಹೇಳಿದ್ದಾರೆ.
ಗುರುವಾರ, ಬಳ್ಳಾರಿ ತಾಲ್ಲೂಕಿನ ಕೆ.ವೀರಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಹುಟ್ಟಿನಿಂದ 05 ವರ್ಷದೊಳಗಿನ ಮಕ್ಕಳಿಗೆ ಕಾಡುವ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮದಡಿ ಜಿಂಕ್ ಮತ್ತು ಓಆರ್ಎಸ್ ದ್ರಾವಣ ಕುರಿತು ಜಾಗೃತಿ ಹತ್ತನೇಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಆರೋಗ್ಯ ಇಲಾಖೆಯು ಎಲ್ಲ ಆಸ್ಪತ್ರೆಗಳಲ್ಲಿರುವ ‘ಸ್ನೇಹ ಕ್ಲಿನಿಕ್’ ನಲ್ಲಿ ಹದಿಹರೆಯದವರ ಆಪ್ತಸಮಾಲೋಚಕರ ಬಳಿ ಸಲಹೆ ಪಡೆದು ಒತ್ತಡಗಳಿಂದ ಮುಕ್ತರಾಗುವ ಹಾಗೂ ಹದಿಹರೆಯದಲ್ಲಿ ಆಕರ್ಷಕವಾಗುವ ತಂಬಾಕು ಉತ್ಪನ್ನಗಳು, ಬೀಡಿ ಸೀಗರೇಟು ಮುಂತಾದವುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಜಂತುಹುಳು ಕಂಡುಬಂದ ಸಂದರ್ಭದಲ್ಲಿ ಮಕ್ಕಳು ಸೇವಿಸುವ ಆಹಾರವನ್ನು ಜಂತುಹುಳುಗಳು ಕಸಿದುಕೊಳ್ಳುವ ಮೂಲಕ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿ ಕುಂದಿಸಿ ಸಣ್ಣಪುಟ್ಟ ಕಾಯಿಲೆಗಳು ದೀರ್ಘಾವಧಿಯವರೆಗೆ ಕಾಡುವಂತೆ ಮಾಡುತ್ತವೆ ಎಂದರು.
ಈ ಸಂದರ್ಭದಲ್ಲಿ ಶಿಡಿಗಿನಮೊಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ ಹೆಬ್ಬಾಳ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಶಾಲೆಯ ಮುಖ್ಯಗುರುಗಳಾದ ನಾಗರಾಜ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ, ಶಕುಂತಲಮ್ಮ, ಸಮುದಾಯ ಆರೋಗ್ಯ ಅಧಿಕಾರಿ ಮಧುಲತಾ ಸೇರಿದಂತೆ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಮಕ್ಕಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್