ಬಳ್ಳಾರಿ, 20 ಜೂನ್ (ಹಿ.ಸ.) :
ಆ್ಯಂಕರ್ : ಜೋಳ ಖರೀದಿ ಕೇಂದ್ರದಲ್ಲಿ ಜೂನ್ 30 ರಿಂದ ಜೋಳದ ಖರೀದಿಯನ್ನು ತಡೆಹಿಡಿಯುವುದಾಗಿ ಸರ್ಕಾರ ಜಾರಿ ಮಾಡಿರುವ ಆದೇಶವನ್ನು ತಕ್ಷಣವೇ ಹಿಂದಕ್ಕೆ ಪಡೆದು, ಜೋಳ ಖರೀದಿಯನ್ನು ಮುಂದುವರೆಸಿ ರೈತರಿಗೆ ನೆರವಾಗಲು ಕೋರಿ ಕನ್ನಡನಾಡು ರೈತ ಸಂಘ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದೆ.
ಕನ್ನಡನಾಡು ರೈತ ಸಂಘದ ಜಿಲ್ಲಾಧ್ಯಕ್ಷ ಮೆಣಸಿನ ಈಶ್ವರಪ್ಪ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದು, ಜೋಳ ಖರೀದಿಗೆ ಜೂನ್ ತಿಂಗಳ 30 ರಂದು ಕೊನೆಯ ದಿನವನ್ನಾಗಿ ಸರ್ಕಾರ ಆದೇಶ ಜಾರಿ ಮಾಡಿದೆ. ಈ ಆದೇಶವು ಜೋಳ ಬೆಳೇದಿರುವ ರೈತರ ವಿರುದ್ಧವಾಗಿದೆ ಎಂದರು.
ಬಳ್ಳಾರಿಯ ಜೋಳ ಖರೀದಿ ಕೇಂದ್ರದಲ್ಲಿ 3,796 ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದು, ಒಟ್ಟು 2,95,428 ಕ್ವಿಂಟಾಲ್ ಜೋಳದ ಖರೀದಿಯ ಸಾಧ್ಯತೆಗಳಿವೆ. ಈವರೆಗೆ 81,863 ಕ್ವಿಂಟಲ್ ಜೋಳವನ್ನು ಮಾತ್ರ ತೂಕ ಖರೀದಿ ಮಾಡಲಾಗಿದೆ. ಉಳಿದ 2,625 ರೈತರು ಮತ್ತು 2,13,565 ಕ್ವಿಂಟಾಲ್ ಜೋಳ ಮಾರುಕಟ್ಟೆಗೆ ಬರಲು ಸಿದ್ದವಾಗಿದ್ದು, ಸರ್ಕಾರ ಯಾವುದೇ ಕಾರಣಕ್ಕೂ ಜೋಳ ಖರೀದಿ ದಿನಾಂಕವನ್ನು ಜುಲೈ ಕೊನೆಯ ವಾರದವರೆಗೂ ಮುಂದುವರೆಸಬೇಕು ಎಂದು ಅವರು ಆಗ್ರಹಿಸಿದರು.
ಸಂಘದ ಪದಾಧಿಕಾರಿಗಳಾದ ಕನ್ನಿ ಶಿವಮೂರ್ತಿ, ಜಿ. ದೊಡ್ಡಬಸವನಗೌಡ, ಜೆ. ರಾಜಯ್ಯ ಕುಂಟನಹಾಲ್, ಯಾಲ್ಪಿ ಸುರೇಶ್, ವೈ. ಮಲ್ಲಿಕಾರ್ಜುನ, ಮೇಟಿ ದಿವಾಕರಗೌಡ, ಜಿ. ಚೆನ್ನಾರೆಡ್ಡಿ, ಎನ್. ವಿಶ್ವನಾಥ್ಗೌಡ, ದಿವಾಕರರೆಡ್ಡಿ, ಶಿವಪ್ರಸಾದ್ ರೆಡ್ಡಿ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್