ರಾಯಚೂರು, 20 ಜೂನ್ (ಹಿ.ಸ.) :
ಆ್ಯಂಕರ್ : 2024-25ನೇ ಸಾಲಿನ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ ಒಣಮೆಣಸಿನಕಾಯಿ ಉತ್ಪನ್ನವನ್ನು ಪ್ರತಿ ಕ್ವಿಂಟಲಿಗೆ ರೂ.10,589 ದಂತೆ ಖರೀದಿಸಲು ಆದೇಶವಿದ್ದು, ಪ್ರತಿ ಎಕರೆಗೆ 15 ಕ್ವಿಂಟಾಲ್ ಇಳುವರಿಯಂತೆ ಪ್ರತಿ ರೈತರಿಂದ ಗರಿಷ್ಟ 30 ಕ್ವಿಂಟಾಲ್ ಗೆ ಮಿತಿಗೊಳಿಸಿ ವ್ಯತ್ಯಾಸದ ಮೊತ್ತ ನೀಡಲಾಗುವುದು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಈ ಯೋಜನೆಯಡಿಯಲ್ಲಿ ಮಾರಾಟ ಮಾಡಲು ಬರುವ ರೈತರ ನೋಂದಣಿ ಕಾರ್ಯವನ್ನು ಎನ್ಇಎಂಎಲ್ ತಂತ್ರಾಂಶದಲ್ಲಿ ಮಾಡಿ ನಂತರ ಒಣಮೆಣಸಿನಕಾಯಿ ಉತ್ಪನ್ನದ ಗೇಟ್ ಎಂಟ್ರಿಯನ್ನು ಯುಎಂಪಿ ತಂತ್ರಾಂಶದಡಿಯಲ್ಲಿ ದಾಖಲಿಸುವ ಕಾರ್ಯವನ್ನು ಆಯಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರು ಕಡ್ಡಾಯವಾಗಿ ನಿರ್ವಹಿಸುವುದು.
ಇ-ಆಡಳಿತ ಇಲಾಖೆಯ ಫ್ರುಟ್ಸ್ ತಂತ್ರಾಂಶದಲ್ಲಿ ರೈತರು ನೀಡಿರುವ ವಿವರಗಳನ್ನು ಭೂಮಿ, ಯುಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ಹೊಂದಾಣಿಕೆ ಮಾಡಿ, ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಯುಎಂಪಿ ತಂತ್ರಾಂಶದ ಇ-ಟೆಂಡರ್ ಮೂಲಕ ಮಾರಾಟ ಪ್ರಕ್ರಿಯೆ ಕೈಗೊಳ್ಳಲಾಗುವುದು.
ರೈತ ಬಾಂಧವರು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಪಹಣಿಯೊಂದಿಗೆ ತಮ್ಮ ಹತ್ತಿರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ನೋಂದಾಯಿಸಿ ಒಣಮೆಣಸಿನಕಾಯಿ ಮಾರಾಟ ಮಾಡಿ ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಜಿಲ್ಲೇಯ ರೈತ ಬಾಂಧವರಲ್ಲಿ ಕೋರಲಾಗಿದೆ ಎಂದು ರಾಯಚೂರ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್