ಬಳ್ಳಾರಿ, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇಶಕ್ಕೆ ಅನ್ನ ಕೊಡೋ ರೈತನಾಗುವ ಛಲವನ್ನು ತೊಟ್ಟ ವಿಜಯಕುಮಾರ ಇವರು ಮೂಲತಃ ಬಳ್ಳಾರಿ ತಾಲ್ಲೂಕಿನ ಎತ್ತಿನಬೂದಿಹಾಳ್ ಗ್ರಾಮದವರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮುಗಿಸಿ, ಕೃಷಿಯ ಮೇಲಿನ ಒಲವಿನಿಂದ ಕೃಷಿಯಲ್ಲಿ ಏನಾದರೊಂದು ಸಾಧನೆ ಮಾಡುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟರು.
ಸಮಗ್ರ ಕೃಷಿಯ ಪಂಡಿತರಾಗಿರುವ ಇವರು ತಮ್ಮ 16 ಎಕರೆ ಜಮೀನಿನಲ್ಲಿ ಹತ್ತಾರು ಬೆಳೆಯನ್ನು ಅಳವಡಿಸಿಕೊಂಡು ಸುಸ್ಥಿರ ಮತ್ತು ನಿರಂತರ ಆದಾಯಗಳಿಸುವುದರ, ಜೊತೆಗೆ ಒಂದೇ ಬೆಳೆಗೆ ಸೀಮಿತವಾಗದೆ ವೈವಿಧ್ಯ ಬೆಳೆ ಬೆಳೆದು ರಾಜ್ಯಕ್ಕೆ ಆದರ್ಶ ರೈತರಾಗಿ ಮತ್ತೊಬ್ಬ ರೈತರಿಗೆ ಮಾದರಿ ಆಗಿದ್ದಾರೆ.
ಮಿಶ್ರ ಬೆಳೆ ಪದ್ಧತಿಯಿಂದ ಒಂದಲ್ಲ ಒಂದು ಬೆಳೆ ನಮ್ಮನ್ನು ಕೈಹಿಡಿಯುತ್ತದೆ ಎಂದು ನಂಬಿರುವ ಇವರು, ಮಿಶ್ರ ಬೇಸಾಯ ಮಾಡಿ ಯಶಸ್ಸು ಕಂಡುಕೊಂಡಿದ್ದಾರೆ. ತರಕಾರಿ, ಹಣ್ಣು, ಹಸು, ಕೋಳಿ, ಜೇನು ಸಾಗಾಣಿಕೆ ಎಲ್ಲವನ್ನೂ ಸಮಗ್ರವಾಗಿ ನಿರ್ವಹಿಸಿ, ಯಶಸ್ವಿ ಯುವ ರೈತರಾಗಿರುವುದು ವಿಶೇಷ.
ಇವರ 16 ಎಕರೆ ಜಮೀನಿನಲ್ಲಿ ವಿಭಿನ್ನ ಸಮಗ್ರ ಕೃಷಿಯನ್ನು ನೋಡಬಹುದಾಗಿದೆ. ಅದರಲ್ಲಿ ಅತಿಹೆಚ್ಚು ಪೆÇೀಷಕಾಂಶ, ಖನಿಜಾಂಶ, ಕಬ್ಬಿಣಾಂಶ ಹೊಂದಿದ ಚಿಕ್ಕೂ ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ಆದಾಯ ಗಳಿಸುವ ಕೋಳಿ ಸಾಗಾಣಿಕೆ, ಅತ್ಯಮೂಲ್ಯ ಪೌಷ್ಟಿಕಾಂಶದ ಆಹಾರವಾದ ಸೌಂದರ್ಯವರ್ಧಕ ಜೇನು ಸಾಗಾಣಿಕೆ, ನೀರಿನ ಅಂತರ್ಜಲ ಹೆಚ್ಚಿಸಿ, ಕೃಷಿಗೆ ಅನುಕೂಲವಾಗುವ ಕೃಷಿ ಹೊಂಡ, ಮೆಕ್ಕೆಜೋಳ ಮತ್ತು ತೊಗರಿಯ ಮಿಶ್ರ ಬೆಳೆ ಮಣ್ಣಿನ ಪುಷ್ಟಿಕರಣ ಅವರ ಸುಸ್ಥಿರ ಆರ್ಥಿಕ ಲಾಭಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲದೇ ಮಾರುಕಟ್ಟೆಯಲ್ಲಿ ವರ್ಷವಿಡೀ ಬೇಡಿಕೆ ಹೊಂದಿರುವ ಬದನೆಕಾಯಿ, ಮೆಣಸಿನಕಾಯಿ, ಟೊಮೆಟೊ, ಹುರುಳಿ, ಬೆಂಡೆಹಾಯಿ ಮುಂತಾದ ದಿನಬಳಕೆಯ ತರಕಾರಿಗಳನ್ನು ಸಾವಯವ ಪದ್ದತಿಯಲ್ಲಿ ಬೆಳೆದು ತಮ್ಮ ಮತ್ತು ಇತರೆ ಜನರಿಗೆ ರಾಸಾಯನಿಕ ಮುಕ್ತ ತರಕಾರಿಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೃಷಿಯಲ್ಲಿ ಸಾಧನೆ ಮಾಡಲು, ಅತಿ ಹೆಚ್ಚು ಲಾಭ ಗಳಿಸಲು ಹಲವಾರು ಎಕರೆ ಭೂಮಿ ಇರಬೇಕು ಎಂದೇನಿಲ್ಲ. ಕೆಲವೇ ಕಡಿಮೆ ಜಮೀನು ಇದ್ದರೂ, ಕೊಂಚ ಜಾಣ್ಮೆ ಉಪಯೋಗಿಸಿ ಅದಕ್ಕೆ ತಕ್ಕಂತೆ ಶ್ರಮ ಹಾಕಿದರೆ ವರ್ಷಕ್ಕೆ ಲಕ್ಷ, ಲಕ್ಷ ಆದಾಯ ಗಳಿಸಬಹುದು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.
ಹಲವಾರು ವಿಶಿಷ್ಟ ಪ್ರಯೋಗದೊಂದಿಗೆ ಎಲ್ಲ ಕೃಷಿಕರಿಗೂ ಮಾದರಿಯಾಗಿ ನಿಂತಿರುವುದು ಬಳ್ಳಾರಿ ತಾಲ್ಲೂಕಿನ ಎತ್ತಿನ ಬೂದಿಹಾಳ್ ಗ್ರಾಮದ ಯುವ ರೈತ ವಿಜಯ್ ಕುಮಾರ್ ಅವರ ಯಶಸ್ಸು ಇತರ ರೈತರಿಗೆ ಪ್ರೇರಣೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್