ಭಾಷಾ ವಿವಾದ ಯೋಗ್ಯವಲ್ಲ : ಶಾಸಕ ಯತ್ನಾಳ
ವಿಜಯಪುರ, 30 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೇಶದ ಪ್ರತಿಯೊಂದು ಭಾಷೆಯೂ ದೇಶದ ಅಮೂಲ್ಯ ಸಂಪತ್ತಾಗಿದೆ. ನಾವು ಎಲ್ಲ ಭಾಷೆಗಳನ್ನು ಪ್ರೀತಿಸಿ, ಗೌರವದಿಂದ ನೋಡಬೇಕು. ಭಾಷೆಗಳ ನಡುವೆ ಶ್ರೇಷ್ಠತೆ ಎಂಬ ಭೇದಭಾವ ಇರಬಾರದು. ಎಲ್ಲರೂ ಸಾಮರಸ್ಯದಿಂದ ಬದುಕಬೇಕು ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾ
ಯತ್ನಾಳ


ವಿಜಯಪುರ, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೇಶದ ಪ್ರತಿಯೊಂದು ಭಾಷೆಯೂ ದೇಶದ ಅಮೂಲ್ಯ ಸಂಪತ್ತಾಗಿದೆ. ನಾವು ಎಲ್ಲ ಭಾಷೆಗಳನ್ನು ಪ್ರೀತಿಸಿ, ಗೌರವದಿಂದ ನೋಡಬೇಕು. ಭಾಷೆಗಳ ನಡುವೆ ಶ್ರೇಷ್ಠತೆ ಎಂಬ ಭೇದಭಾವ ಇರಬಾರದು. ಎಲ್ಲರೂ ಸಾಮರಸ್ಯದಿಂದ ಬದುಕಬೇಕು ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ, ಸಂಖ ಇವರ ಸಂಯುಕ್ತ ಆಶ್ರಯದಲ್ಲಿ ಮಹಾರಾಷ್ಟ್ರದ ಜತ್ ತಾಲೂಕಿನ ಸಂಖ ಗ್ರಾಮದಲ್ಲಿ ಆಯೋಜಿಸಿದ್ದ ಗಡಿನಾಡು ಕನ್ನಡ ಸಾಹಿತ್ಯ–ಸಂಸ್ಕೃತಿ ಸಂಭ್ರಮ ಹಾಗೂ ನಲಿ–ಕಲಿ ಸಾಮಗ್ರಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದೆ ಮಾತನಾಡಿ ಗಡಿನಾಡು ಕನ್ನಡಿಗರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ಸರ್ಕಾರಗಳು ಸೇರಿ ಬಗೆಹರಿಸಬೇಕು. ಈ ಭಾಗದ ಕನ್ನಡ ಶಾಲೆಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿ ವರ್ಷ ಕನಿಷ್ಠ 100 ಕೋಟಿ ರೂಪಾಯಿ ಅನುದಾನ ನೀಡಬೇಕೆಂದು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದರು.

ಇದಲ್ಲದೆ, ಈ ಭಾಗದ ನೀರಿನ ಸಮಸ್ಯೆಯನ್ನು ಎರಡೂ ಸರ್ಕಾರಗಳು ಸೇರಿ ಶಾಶ್ವತವಾಗಿ ಪರಿಹರಿಸಬೇಕು. ವಿಜಯಪುರದಿಂದ ಸಂಖ–ಗುಡ್ಡಾಪುರ ಮಾರ್ಗವಾಗಿ ಮುಂಬೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದರೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜತ್ ಶಾಸಕ ಗೋಪಿಚಂದ್ ಪಡಳಕರ್ ಅವರು, “ನನಗೆ ಮರಾಠಿ ಹಾಗೂ ಕನ್ನಡ ಎರಡೂ ಭಾಷೆಗಳು ಸಮಾನ. ಜತ್ ಭಾಗದ ಅಭಿವೃದ್ಧಿಗೆ ನಾನು ಸದಾ ಸಿದ್ಧನಿದ್ದೇನೆ. ಇಲ್ಲಿನ ಕನ್ನಡಿಗರ ಸಮಸ್ಯೆಗಳನ್ನು ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ತರುತ್ತೇನೆ” ಎಂದು ಹೇಳಿದರು.

ಬಸವೇಶ್ವರ ಮಹಾಮಂಡಳದ ಮೂಲಕ ಕನ್ನಡ ಶಾಲೆಗಳು ಹಾಗೂ ಲಿಂಗಾಯತ ಸಮಾಜಕ್ಕೆ ನೆರವಾಗುವ ಯೋಜನೆಗಳನ್ನು ರೂಪಿಸುವಂತೆ ಸೂಚನೆ ನೀಡುವುದಾಗಿ ತಿಳಿಸಿದರು.

ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಹಾಗೂ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲೇ ನಡೆಸುವಂತೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು. ಬಸವೇಶ್ವರರ ವಚನಗಳನ್ನು ಮರಾಠಿ ಭಾಷೆಗೆ ಅನುವಾದಿಸುವ ಕಾರ್ಯ ಆರಂಭವಾಗಿದ್ದು, ಶೀಘ್ರದಲ್ಲೇ ಸಂಖದಲ್ಲಿ ಬಸವೇಶ್ವರ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರವನ್ನು ಮನವಿ ಮಾಡುವುದಾಗಿ ಹೇಳಿದರು.

ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ನಲಿ–ಕಲಿ ಸಾಹಿತ್ಯ ವಿತರಿಸಿ ಮಾತನಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸೋಮಣ್ಣ ಬೇವಿನಮರದ್ ಅವರು, ಪ್ರಾಧಿಕಾರವು ಸದಾ ಗಡಿನಾಡು ಕನ್ನಡಿಗರ ಬೆಂಬಲಕ್ಕೆ ನಿಂತಿದ್ದು, ಅವರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದೆ. ಈ ಭಾಗದ ಉನ್ನತಿ ಹಾಗೂ ಕನ್ನಡಿಗರ ಹಿತರಕ್ಷಣೆಗೆ ಕರ್ನಾಟಕ ಸರ್ಕಾರದೊಂದಿಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಕನ್ನಡ ಶಾಲೆಗಳ ಉನ್ನತಿಗಾಗಿ ಇನ್ನು ಹೆಚ್ಚಿನ ಅನುದಾನವನ್ನು ನೀಡಲಾಗುವುದು ಅದಕ್ಕಾಗಿ ಕರ್ನಾಟಕ ಸರ್ಕಾರ ನಮಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಪೂಜ್ಯ ಗುರುಪಾದ ಶಿವಾಚಾರ್ಯರು, ಸಮ್ಮೇಳನ ಅಧ್ಯಕ್ಷ ಗುರುಪಾದ್ ಕುಂಬಾರ, ಡಾ. ಆರ್.ಕೆ. ಪಾಟೀಲ್, ಗುರು ಪಾಟೀಲ್, ಕಿರಣ್ ಪಾಟೀಲ್, ಚಂದ್ರಶೇಖರ್ ಗೊಬ್ಬಿ, ಸರ್ದಾರ್ ಪಾಟೀಲ್, ಕರಬಸು ಲವಂಗಿ, ಧರೆಪ್ಪ ಕಟ್ಟಿಮನಿ, ಕವಿತಾ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಬೆಳಿಗ್ಗೆ ಭುವನೇಶ್ವರಿ ದೇವಿಯ ಪ್ರತಿಮೆಯೊಂದಿಗೆ ಸಮ್ಮೇಳನಧ್ಯಕ್ಷರ ವಿವಿಧ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಅಧ್ಯಕ್ಷರು ಸೋಮಣ್ಣ ಬೇವಿನಮರದ ಅವರು ಪ್ರಾಧಿಕಾರದಿಂದ್ ಈ ಶಾಲೆಗೆ ನೀಡಿದ 30 ಲಕ್ಷ ರೂ. ಗಳ ಶಾಲಾ ಕೊಠಡಿ ನಿರ್ಮಾಣದ ಉದ್ಘಾಟನೆಯನ್ನು ಸಹ ಮಾಡಿದರು.

ಮಧ್ಯಾಹ್ನ ಉಪನ್ಯಾಸಗೋಷ್ಠಿ ಮತ್ತು ಕವಿಗೋಷ್ಠಿಗಳು ಜರುಗಿದವು. ಸಂಜೆಯ ಸಮಾರೋಪ ಸಮಾರಂಭದಲ್ಲಿ ಡಾ. ಕೆ.ಕೆ. ಪತ್ತಾರ ಅವರು ಸಮಾರೋಪ ನುಡಿಗಳನ್ನು ನೀಡಿದರು. ನಂತರ ವಿವಿಧ ಕಲಾತಂಡಗಳ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.

ಸಮಾರಂಭದ ಯಶಸ್ಸಿಗೆ ಕಿರಣ್ ಪಾಟೀಲ್, ವಿಜಯ ಬಿರಾದಾರ್, ಗುರುಬಸು ವಗ್ಗೋಲಿ, ಅಜಯ್ ಬಿರಾದಾರ್, ಕುಮಾರ್ ವಿಠೇಕರ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಶ್ರಮಿಸಿದರು. ಜತ್ ತಾಲೂಕಿನ ಅನೇಕ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭಕ್ಕೆ ಮೆರುಗು ತಂದರು.

ಕವಿತಾ ಪಾಟೀಲ್ ಆಶಯ ನುಡಿಗಳನ್ನು ಹೇಳಿದರು. ಕರಡಿ ಗುರುಗಳು ನಿರೂಪಣೆ ನಡೆಸಿದರೆ, ಕಿರಣ್ ಪಾಟೀಲ್ ವಂದನಾರ್ಪಣೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande