ರಾಯಚೂರು, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪಾಲಿಕೆಯಿಂದ ಸ್ವ ನಗರದ ಯುವಜನರು ಸಕಾರಾತ್ಮಕ ಚಟುವಟಿಕೆಗಳ ಕಡೆಗೆ ಆಕರ್ಷಿತರಾಗಬೇಕು ಮತ್ತು ಅವರ ಶಕ್ತಿಯನ್ನು ಸಮಾಜ ಹಿತದ ಕಡೆಗೆ ಹರಿಸಬೇಕು ಎನ್ನುವ ಸದುದ್ದೇಶದಿಂದ ಮಹಾನಗರ ಪಾಲಿಕೆಯು ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಕ್ಟೋಬರ್ 09ರಂದು ಮ್ಯಾರಾಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣಾಧಿಕಾರಿಗಳ (ಕೆ.ಎಸ್.ಎ.ಪಿ.ಎಸ್) ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ, ಸ್ವಚ್ಛ ಹಸಿರು ರಾಯಚೂರಿಗಾಗಿ ಭರವಸೆಯ ಓಟ ಎಂಬ ವಿಷಯದಡಿಯಲ್ಲಿ 5 ಕಿಲೋಮೀಟರ್ ಮ್ಯಾರಥಾನ್ ಸ್ಪರ್ಧೆಗೆ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಆಯುಕ್ತರು, ಪ್ರಸ್ತುತ ಯುವಜನರು ವಿವಿಧ ನಕಾರಾತ್ಮಕ ಚಟುವಟಿಕೆಗಳ ಕಡೆಗೆ ಒಲವು ತೋರುವ ಸನ್ನಿವೇಶದಲ್ಲಿ ಅವರನ್ನು ಸರಿಯಾದ ಮಾರ್ಗದರ್ಶನ ಮತ್ತು ಸಕ್ರಿಯ ಭಾಗವಹಿಸುವಿಕೆಯ ಮೂಲಕ ಸಮುದಾಯದ ಮುಖ್ಯಧಾರೆಗೆ ತರುವುದು ಅತ್ಯಗತ್ಯವಾಗಿದ್ದು, ಈ ಉದ್ದೇಶದಿಂದಲೇ ಇಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಯುವಜನರು ನಮ್ಮ ನಗರದ ಭವಿಷ್ಯ. ಅವರನ್ನು ಸಕಾರಾತ್ಮಕವಾಗಿ ಒಟ್ಟುಗೂಡಿಸುವುದು ನಮ್ಮ ಕರ್ತವ್ಯ. ಇಂದಿನ ಓಟ ಇದರ ಒಂದು ಹಂತ ಮಾತ್ರ. ಯುವಜನರು ದುರ್ಮಾರ್ಗಕ್ಕೆ ತಿರುಗದೆ, ಸಮಾಜದ ಅಭಿವೃದ್ಧಿಯ ಮುಖ್ಯಸ್ಥರಾಗಲು ನಾವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಮತ್ತು ಮುಂದೆಯೂ ಹಮ್ಮಿಕೊಳ್ಳಲಿದ್ದೇವೆ ಎಂದರು.
ಈ ಕಾರ್ಯಕ್ರಮದ ಯಶಸ್ಸು ಎಂದರೆ ಅದು ಯುವಜನರನ್ನು ಒಳಗೊಳ್ಳುವುದಾಗಿದೆ. ಹೆಚ್ಚಿನ ಕಾರ್ಯಕ್ರಮಗಳನ್ನು ಯೋಜಿಸುವಲ್ಲಿ ಪಾಲಿಕೆ ಮತ್ತು ಇತರೆ ಸಂಸ್ಥೆಗಳನ್ನು ಪೆÇ್ರೀತ್ಸಾಹಿಸುವುದಾಗಿದೆ. ಭವಿಷ್ಯದಲ್ಲಿ ಕ್ರಿಕೆಟ್, ವಿಜ್ಞಾನ ಪ್ರದರ್ಶನ, ಸ್ವಚ್ಛತಾ ಅಭಿಯಾನ, ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲು ಯೋಜನೆಗಳಿವೆ ಎಂದರು.
ಯುವಕರು ದುಶ್ಚಟಗಳಿಗೆ ಬಲಿಯಾಗಿ ಆಯಸ್ಸನ್ನು ಕಳೆದುಕೊಳ್ಳದೆ, ಉತ್ತಮ ರೀತಿಯಲ್ಲಿ ಜೀವನ ಸಾಗಿಸಿ ಸಾಧನೆ ಮಾಡುವ ಕಡೆ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಮಾತನಾಡಿ, ಆರೋಗ್ಯಕರ ಜೀವನಶೈಲಿ ಮತ್ತು ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ. ಈ ರೀತಿಯ ಸಮುದಾಯ ಕಾರ್ಯಕ್ರಮಗಳು ಆರೋಗ್ಯ ಮತ್ತು ಜಾಗೃತಿಯ ಸಂದೇಶವನ್ನು ತಲುಪಿಸಲು ಈ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿದೆ ಎಂದರು.
ವಿಜೇತರಿಗೆ ಪ್ರಶಸ್ತಿ ವಿತರಣೆ: 17ರಿಂದ 35ರ ವರ್ಷದವರೆಗಿನ ಯುವಕರು ಮತ್ತು ಮಹಿಳೆಯರಿಗಾಗಿ 5 ಕಿಲೋಮೀಟರ್ ಮ್ಯಾರಥಾನ್ ಸ್ಪರ್ಧೆಯು ನಗರದ ಅಂಬೇಡ್ಕರ್ ವೃತ್ತದಿಂದ ಸ್ಟೇಷನ್ ವೃತ್ತದವರೆಗೆ ಮತ್ತು ನವೀನ್ ಆಸ್ಪತ್ರೆಯಿಂದ ಮಹ್ಮತಗಾಂಧಿ ಕ್ರೀಡಾಂಗಣದವರೆಗೆ ಮಾರಥಾನ್ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನವನ್ನು ಪುರುಷರ ವಿಭಾಗದಲ್ಲಿ ದೇವದುರ್ಗ ತಾಲೂಕಿನ ಜಾಲಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ನಿಂಗಣ್ಣ, ಮಹಿಳಾ ವಿಭಾಗದಲ್ಲಿ ದೇವಸೂಗೂರಿನ ಯಲ್ಲಮ್ಮ, ದ್ವಿತೀಯ ಬಹುಮಾನವನ್ನು ಪುರುಷರ ವಿಭಾಗದಲ್ಲಿ ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ತಾಯಪ್ಪ, ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿ ಭೂಮಿಕಾ, ತೃತೀಯ ಬಹುಮಾನವನ್ನು ರಾಯಚೂರಿನ ಸನ್ರೈಸ್ ಕಾಲೇಜಿನ ವಿದ್ಯಾರ್ಥಿ ತಿಮ್ಮಪ್ಪ, ಎಲ್ವಿಡಿ ಕಾಲೇಜಿನ ಶೃತಿ ಅವರಿಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರೇಶ್ ನಾಯಕ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್ ಕುಮಾರ್, ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಎಂ.ಡಿ.ಶಾಕೀರ್ ಸೇರಿದಂತೆ ಪಾಲಿಕೆಯ ವಿಭಾಗ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್