ಬೆಂಗಳೂರು, 9 ಮೇ (ಹಿ.ಸ):ಆ್ಯಂಕರ್:ದಶಕಗಳ ಹಿಂದೆ ರಾಜ್ಯ ರಾಜಧಾನಿಯ ಜನರ ಜಲದಾಹ ತೀರಿಸಿದ್ದ ಕೆರೆಗಳು ಅಳಿವಿನ ಅಂಚಿಗೆ ತಲುಪಿಬಿಟ್ಟಿವೆ. ಬೇಸಿಗೆ ಬೇಗೆ ಜೊತೆಗೆ ಸರಿಯಾದ ಪ್ರಮಾಣದಲ್ಲಿ ಬಾರದೆ ಕೈಕೊಟ್ಟ ಮಳೆಯಿಂದ ನಗರದ ಕೆರೆಗಳು ಇಂಗಿಹೋಗಿವೆ. ಬಿಸಿಲ ಬೇಗೆಗೆ ಕೆರೆಗಳು ಬೆಂಗಾಡಾಗಿ ಪರಿವರ್ತನೆಯಾಗಿದ್ದು, ಜಲಚರಗಳ ಆಶ್ರಯತಾಣವಾಗಿದ್ದ ಕೆರೆಗಳು ಮೈದಾನಗಳಂತಾಗಿವೆ. ಕಳೆದ 2 ದಿನದಿಂದ ನಗರದಲ್ಲಿ ಮಳೆಯಾಗುತ್ತಿದ್ದು ಕೆರೆಗಳು ಮಾತ್ರ ಇನ್ನೂ ತುಂಬಿಲ್ಲ. ಕೆರೆಗಳಿಗೆ ಈ ಗತಿ ಬರಲು ಕಾರಣ ಏನು ಎಂಬ ಬಗ್ಗೆ ಈ ಸುದ್ದಿಯಲ್ಲಿ ಓದಿ.
ಕೆರೆಗಳಿಗೆ ಕಂಟಕ ತಂದವರು ಯಾರು?
ದಶಕಗಳ ಹಿಂದೆ 1 ಸಾವಿರದಷ್ಟಿದ್ದ ಕೆರೆಗಳು, 1960ರ ಹೊತ್ತಿಗೆ 280ಕ್ಕೆ ಇಳಿಕೆ ಕಂಡಿತ್ತು. ಆದರೆ ಜನಸಂಖ್ಯೆ ಹೆಚ್ಚಿದ್ದಂತೆಲ್ಲ ಕೆರೆಗಳನ್ನ ಮುಚ್ಚಿ ಹೊಸ ಹೊಸ ಲೇಔಟ್, ಅಪಾರ್ಟ್ ಮೆಂಟ್ಗಳು ತಲೆ ಎತ್ತಿದ್ದರಿಂದ ಅಂತರ್ಜಲದ ಶಕ್ತಿಯಂತಿದ್ದ ನೂರಾರು ಕೆರೆಗಳು ಕಣ್ಮರೆಯಾಗಿಬಿಟ್ಟಿವೆ. ಇತ್ತ ಕೆರೆಗಳ ಸುತ್ತಮುತ್ತಲಿನ ಜಾಗ, ಕೆರೆಗೆ ನೀರು ಸಾಗ್ತಿದ್ದ ಜಾಗಗಳು ಕೂಡ ಒತ್ತುವರಿಯಾಗಿದ್ದು, ಸರ್ಕಾರ ಈಗಲಾದ್ರೂ ಕೆರೆಗಳ ಸುತ್ತಮುತ್ತಲಿನ ಒತ್ತುವರಿ ತೆರವು ಮಾಡಿ ಅಳಿದುಳಿದ ಕೆರೆಗಳನ್ನ ರಕ್ಷಿಸಬೇಕಿದೆ ಅಂತಾ ಪರಿಸರ ತಜ್ಞ ಕೃಷ್ಣ ಆನಂದ್ ಕಾಮಾತ್ ಆಗ್ರಹಿಸಿದ್ದಾರೆ.
ಸದ್ಯ ಬೆಂಗಳೂರಿನ ಕೆರೆಗಳ ಸ್ಥಿತಿ ಹೇಗಿದೆ ಅನ್ನೋದರ ಬಗ್ಗೆ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ರಾಜಧಾನಿಯ ಕೆರೆಗಳ ದುಸ್ಥಿತಿ ಸೆರೆಯಾಗಿದೆ. ಐತಿಹಾಸಿಕ ಕೆರೆಗಳು, ವಿಶಾಲವಾಗಿದ್ದ ಕೆರೆಗಳು ನೀರಿಲ್ಲದೇ ಸೊರಗುತ್ತಿದ್ದು, ಒಂದೊಂದು ಕೆರೆಯು ಒಂದೊಂದು ಕತೆ ಹೇಳ್ತಿದೆ.
ಹಲಗೆವಡೇರಹಳ್ಳಿ ಕೆರೆ:
ಹಲವು ವರ್ಷಗಳ ಕಾಲ ರಾಜರಾಜೇಶ್ವರಿನಗರದ ಸುತ್ತಮುತ್ತಲಿನ ಜಲದಾಹ ತೀರಿಸಿದ್ದ 17 ಎಕರೆ ವಿಸ್ತೀರ್ಣದ ಈ ಕೆರೆ ಇದೀಗ ನೀರಿಲ್ಲದೇ ಒಣಗಿ ನಿಂತಿದೆ. ಸದಾ ನೀರು ತುಂಬಿರುತ್ತಿದ್ದ ಈ ಕೆರೆ 35 ಪ್ರಭೇದದ ಪಕ್ಷಿಗಳನ್ನ ಆಕರ್ಷಿಸುತ್ತಿತ್ತು, ಇದೀಗ ನೀರಿಲ್ಲದೇ ಬಾಯ್ತೆರೆದು ನಿಂತಿದೆ.
ಮಲ್ಲತಹಳ್ಳಿ ಕೆರೆ:
ಸುಮಾರು 71 ಎಕರೆ ವಿಸ್ತೀರ್ಣ ಇರೋ ಮಲ್ಲತಹಳ್ಳಿ ಕೆರೆ ನೀರಿಲ್ಲದೇ ಬಾಯ್ತೆರೆದಿದೆ. ಕೊಕ್ಕರೆ, ಮೀನು, ಏಡಿಯಂತ ಜೀವರಾಶಿಗಳ ಆಶ್ರಯತಾಣವಾಗಿದ್ದ ಈ ಕೆರೆ ಇದೀಗ ಸಂಪೂರ್ಣ ಬತ್ತಿಹೋಗಿದೆ. ಕೆರೆಯಂಗಳದಲ್ಲಿ ನಿಂತಿರೋ ಅಲ್ಪಸ್ವಲ್ಪ ನೀರಲ್ಲೇ ಇಂದಿಗೂ ಪ್ರಾಣಿ-ಪಕ್ಷಿಗಳ ದಾಹ ತೀರಿಸ್ತಿರೋ ಈ ಕೆರೆ ನೀರಿಲ್ಲದೇ ಸೊರಗಿ ಹೋಗಿದೆ. ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಈ ಕೆರೆ ಅಭಿವೃದ್ಧಿಗೆ 81 ಕೋಟಿ ಅನುದಾನ ನೀಡಿದ್ರು, ಆದ್ರೆ ಇದೀಗ ಈ ಕೆರೆ ಸಂಪೂರ್ಣ ಖಾಲಿಯಾಗಿ ನೀರಿಲ್ಲದೇ ಬಣಗುಡುತ್ತಿದೆ.
ಹಿಂದೂಸ್ತಾನ್ ಸಮಾಚಾರ್