ಹಣ ಮಾಡುವುದೇ ವೈದ್ಯರ ಉದ್ದೇಶವಾಗಬಾರದು-ಡಾ. ಸುದರ್ಶನ್ ಸಲಹೆ
ಕೋಲಾರ, ೦೪ ಮೇ (ಹಿ.ಸ) : ಆ್ಯಂಕರ್ : ವೈದ್ಯ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿದೆ. ವೈದ್ಯರು ಮಾನವೀಯ ಸ್ಪಂಧನ ವ
ಕೋಲಾರ ನಗರ ಹೊರ ವಲಯದ ದೇವರಾಜ ಅರಸು ವೈದ್ಯಕೀಯ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ  ಯಳಂದೂರು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಹಾಗೂ ಕರುಣಾ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಸುದರ್ಶನ್ ಪದವಿ ಪ್ರದಾನ ಮಾಡಿದರು.


ಡಾ.ಹೆಚ್.ಸುದರ್ಶನ್ ಘಟಿಕೋತ್ಸವ ಭಾಷಣ ಮಾಡಿದರು.


ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪಡೆದು ನಗೆ ಬೀರಿದ ವಿದ್ಯಾರ್ಥಿಗಳು


ಕೋಲಾರ, ೦೪ ಮೇ (ಹಿ.ಸ) :

ಆ್ಯಂಕರ್ : ವೈದ್ಯ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿದೆ. ವೈದ್ಯರು ಮಾನವೀಯ ಸ್ಪಂಧನ ವ್ಯಕ್ತಿಗಳು ಆಗಬೇಕು. ತಮ್ಮ ಸ್ಪರ್ಷದಿಂದಲೇ ರೋಗಿಯ ಕಾಯಿಲೆಯನ್ನು ವಾಸಿ ಮಾಡಬೇಕು. ಆದರೆ ಇಂದು ವೈದ್ಯಕೀಯ ವೃತ್ತಿ ವ್ಯಾಪಾರವಾಗಿದೆ. ಹಣ ಇಲ್ಲದೆ ಸೇವೆ ಇಲ್ಲ. ‘ವೈದ್ಯಕೀಯ ಕೋರ್ಸ್ ಓದಿದವರು ಯುಪಿಎಸ್ಸಿ ಪರೀಕ್ಷೆ ಬರೆದು ಅಧಿಕಾರಿಗಳಾಗುತ್ತಿದ್ದಾರೆ. ಐಎಎಸ್ ಅಧಿಕಾರಿಯಾಗಿ ಆರೋಗ್ಯ ಇಲಾಖೆಯ ಅಭಿವೃದ್ಧಿ ಮಾಡಲು ಸಾಧ್ಯ. ಆದರೆ, ಕೆಲವರು ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳಾಗುತ್ತಿದ್ದಾರೆ. ಅವರ ಉದ್ದೇಶವೇ ಬೇರೆ. ವೈದ್ಯಕೀಯ ಓದಿಗೂ ಮಾಡುವ ಕೆಲಸಕ್ಕೂ ಸಂಬ0ಧವೇ ಇಲ್ಲದಂತಾಗಿದೆ. ಈ ರೀತಿ ಆಗಬಾರದು’ ಎಂದು ಯಳಂದೂರು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಹಾಗೂ ಕರುಣಾ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಸುದರ್ಶನ್ ತಿಳಿಸಿದರು.

ಕೋಲಾರ ನಗರ ಹೊರವಲಯದ ಟಮಕದಲ್ಲಿ ಶನಿವಾರ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ೧೪ನೇ ವಾರ್ಷಿಕ ಘಟಿಕೋತ್ಸವ ಭಾಷಣ ಮಾಡಿದರು.

‘ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಬಹಳ ಕಡಿಮೆ ಖರ್ಚು ಮಾಡುತ್ತಿವೆ. ಮಹತ್ವದ ಕ್ಷೇತ್ರ ಇದಾಗಿದ್ದು, ಬಜೆಟ್ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು’

‘ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಆರೋಗ್ಯಕ್ಕೆ ಕ್ಷೇತ್ರಕ್ಕೆ ಶೇ ೫ರಷ್ಟು ಹಣ ಮೀಸಲಿಡಲಾಗುತಿತ್ತು. ಈ ಬಾರಿ ಕೇವಲ ಶೇ ೩.೪ರಷ್ಟು ಅನುದಾನ ಇಟ್ಟಿದ್ದಾರೆ. ಕೇರಳ ರಾಜ್ಯದಲ್ಲಿ ಶೇ ೭ರಷ್ಟು ಅನುದಾನ ಮೀಸಲಿಡುತ್ತಾರೆ’. ‘ಯಾವುದೇ ವೃತ್ತಿ ಇರಲಿ ಬಡವರ ಬಗ್ಗೆ ಕಾಳಜಿ ಇರಲಿ. ಭ್ರಷ್ಟಾಚಾರ ಬೇಡ; ಮಾನವೀಯತೆ ಇರಲಿ. ಬೇಕಾದರೆ ಶ್ರೀಮಂತರಿ0ದ ಹೆಚ್ಚಿಗೆ ಹಣ ಪಡೆದು ಬಡವರಿಗೆ ಸಹಾಯ ಮಾಡಿ’ ಎಂದು ಸಲಹೆ ನೀಡಿದರು.

‘ವೈದ್ಯಕೀಯ ವೃತ್ತಿಗೆ ತನ್ನದೇ ಆದ ಗೌರವವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ ವಾಣಿಜ್ಯೀಕರಣಗೊಂಡಿದೆ, ಅನೈತಿಕಗೊಂಡಿದೆ. ಗೌರವಾನ್ವಿತ ವೃತ್ತಿ ಯಾವತ್ತೂ ರಾಜೀ ಆಗಬಾರದು. ಪಡೆದ ಜ್ಞಾನವನ್ನು ಸಮಾಜಕ್ಕೆ ವಾಪಸ್ ಕೊಡಿ’ ಎಂದರು.

‘ವೈದ್ಯಕೀಯ ವೃತ್ತಿ ನನಗೆ ಲೈಫ್ ಮಿಷನ್ ಇದ್ದಂತೆ. ತಂದೆ ಹೃದಯಾಘಾತದಿಂದ ಮೃತರಾದರು. ಅಂದು ನಾನು ಅಸಹಾಯಕನಾಗಿದ್ದೆ. ಆದರೆ, ಅಳಲಿಲ್ಲ. ಬದಲಾಗಿ ವೈದ್ಯನಾಗಬೇಕೆಂದು ಅಂದೇ ನಿರ್ಧರಿಸಿದೆ. ಆ ಆಸೆ ಈಡೇರಿತು. ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಬಾಲ್ಯವನ್ನು ನೆನಪಿಸಿಕೊಂಡರು.

‘ಖಾಸಗಿ ಸಂಸ್ಥೆಗಳು ಇರುವುದು ಹಣ ಮಾಡಲು ಎಂಬ ಮಾತಿದೆ. ಅಲ್ಲೂ ಹೃದಯವಂತರು ಇದ್ದಾರೆ. ಸರ್ಕಾರದಲ್ಲಿ ಇರುವವರೆಲ್ಲಾ ಭ್ರಷ್ಟರಲ್ಲ. ಅಹಂಕಾರ ಬಿಟ್ಟರೆ ಖಂಡಿತ ಯಾವುದೇ ಕೆಲಸದಲ್ಲಿ ಒತ್ತಡ ಕಡಿಮೆಯಾಗುತ್ತದೆ’ ಎಂದರು.

ಶ್ರೀ ದೇವರಾಜ ಅರಸು ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಾಧಿಪತಿ ಜಿ.ಎಚ್.ನಾಗರಾಜ್ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡಿದರು.

ಸಂಸ್ಥೆಯ ಕುಲಪತಿ ಡಾ.ಬಿ.ವೆಂಗಮ್ಮ ವಾರ್ಷಿಕ ವರದಿ ವಾಚಿಸಿದರು. ಕುಲಸಚಿವ ಡಾ.ಡಿ.ವಿ.ಎಲ್.ಎನ್.ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಸಿ.ಮುನಿನಾರಾಯಣ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಮಧ್ಯಾಹ್ನ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಗ್ರ್ಯಾಜುಯೇಷನ್ ದಿನಾಚರಣೆ ನಡೆಯಿತು.

ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಟ್ರಸ್ಟಿಗಳಾದ ಡಾ.ಎಂ.ವಿಜಯಕುಮಾರ್, ರಾಜೇಶ್ ಜಗದಾಳೆ, ಸಲಹೆಗಾರ ಎಸ್.ಚಂದ್ರಶೇಖರ್ ಶೆಟ್ಟಿ, ಡೀನ್ಗಳಾದ ಡಾ.ಪ್ರಭಾಕರ್, ಡಾ.ದಯಾನಂದ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಜೆ.ಕೃಷ್ಣಪ್ಪ, ವಿಜಯಲಕ್ಷ್ಮಿ ಭಟ್ ಇದ್ದರು.

೩೨೧ ವಿದ್ಯಾರ್ಥಿಗೆ ಪದವಿ; ೧೪ ಮಂದಿಗೆ ಚಿನ್ನ

ಸಂಸ್ಥೆಯ ಒಟ್ಟು ೩೨೧ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿಪೂರ್ವ (ಎಂಬಿಬಿಎಸ್) ಹಾಗೂ ಅಲೈಡ್ ಹೆಲ್ತ್ ಅಂಡ್ ಬೆಸಿಕ್ ಸೈನ್ಸಸ್ (ಬಿಎಸ್ಸಿ ಹಾಗೂ ಎಂಎಸ್ಸಿ) ಕೋರ್ಸ್ಗಳಲ್ಲಿ ಸಂಸ್ಥಾಪಕ ಅಧ್ಯಕ್ಷರ ಹೆಸರಲ್ಲಿ ೧೪ ಚಿನ್ನದ ಪದಕಗಳನ್ನು ನೀಡಲಾಯಿತು.

ಡಾ.ರಾಹಿಲ್ ಮಹಮ್ಮದ್ ರಹಮತುಲ್ಲಾ ಮೂರು ಚಿನ್ನದ ಪದಕಗಳಿಗೆ ಭಾಜನರಾದರು. ಡಾ.ಮೆನಾಲಿ ಉತ್ಪಲ ದಿಸಾನಾಯಕ್ ಹಾಗೂ ಸನಾ ಚಂದರ್ ತಲಾ ಎರಡು ಚಿನ್ನದ ಪದಕ ಪಡೆದರು.

ಚಿತ್ರಗಳು :

೧) ಕೋಲಾರ ನಗರ ಹೊರ ವಲಯದ ದೇವರಾಜ ಅರಸು ವೈದ್ಯಕೀಯ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಯಳಂದೂರು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಹಾಗೂ ಕರುಣಾ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಸುದರ್ಶನ್ ಪದವಿ ಪ್ರದಾನ ಮಾಡಿದರು.

೨) ಡಾ.ಹೆಚ್.ಸುದರ್ಶನ್ ಘಟಿಕೋತ್ಸವ ಭಾಷಣ ಮಾಡಿದರು.

೩) ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪಡೆದು ನಗೆ ಬೀರಿದ ವಿದ್ಯಾರ್ಥಿಗಳು


 rajesh pande