ಕೊಪ್ಪಳ, 02 ಮೇ (ಹಿ.ಸ):
ಆ್ಯಂಕರ್ : ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಅಂಗವಾಗಿ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೊಪ್ಪಳ ತಾಲೂಕ ಸ್ವೀಪ್ ಸಮಿತಿಯಿಂದ ಗುರುವಾರದಂದು ಎತ್ತಿನ ಬಂಡಿ ಜಾಥಾ ನಡೆಯಿತು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ತಳಿರು ತೋರಣಗಳಿಂದ ಸಿಂಗಾರಗೊಳಿಸಿದ್ದ ಗ್ರಾಮೀಣ ಬದುಕಿನ ಸೊಗಡಾದ ಎತ್ತಿನ ಬಂಡಿಯನ್ನು ಏರಿ ಗ್ರಾಮದ ಮುಖ್ಯರಸ್ತೆಯ ಮೂಲಕ ಮತದಾನ ಜಾಗೃತಿ ಮೂಡಿಸಿದ್ದು ಎಲ್ಲರ ಗಮನ ಸೆಳೆಯಿತು.
ಎತ್ತಿನ ಬಂಡಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು, ಚುನಾವಣೆಯು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಈ ಹಬ್ಬದಲ್ಲ್ಲಿ ಎಲ್ಲರೂ ಭಾಗವಹಿಸಿ ತಪ್ಪದೇ ಮತ ಚಲಾಯಿಸಿರಿ. ಸದೃಢ ಪ್ರಜಾಪ್ರಭುತ್ವ ನಿರ್ಮಾಣವಾಗಬೇಕಾದರೆ ನಾವೆಲ್ಲರೂ ಮತದಾನದಿಂದ ಹೊರಗುಳಿಯದೇ ಮತ ಚಲಾಯಿಸಬೇಕು. ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆ ಅಂಗವಾಗಿ ಉತ್ತಮ ಭವಿಷ್ಯಕ್ಕಾಗಿ ನಮಗಿರುವ ಅಮೂಲ್ಯವಾದ ಮತದಾನದ ಹಕ್ಕನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಯಲ್ಲಿ ಸಹಭಾಗಿತ್ವ, ಮತದಾನ ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸಿ ಗಟ್ಟಿಗೊಳಿಸಲು ಪ್ರಜೆಗಳ ಪ್ರತ್ಯಕ್ಷ ಪಾಲ್ಗೊಳ್ಳುವಿಕೆ ನಿರಂತರವಾಗಿ ಇರಬೇಕು. ಚುನಾವಣೆ ನಡೆದಾಗ ಮತಗಟ್ಟೆಗೆ ಬಂದು ಮತದಾನ ಮಾಡುವುದು, ಅದರಲ್ಲಿ ಕಣ್ಣಿಗೆ ಕಾಣುವ ಒಂದು ಸಣ್ಣ ಸಂಕೇತ. ಇದರ ಪರಿಣಾಮ ಮಾತ್ರ ಬಹಳ ದೊಡ್ಡದು ಎಂದು ಹೇಳಿದರು.
ಜಿಲ್ಲಾ ಪೆÇೀಲಿಸ್ ವರಿμÁ್ಠಧಿಕಾರಿಗಳಾದ ಯಶೋಧ ವಂಟಗೋಡಿ ಅವರು ಮಾತನಾಡಿ, ಬಿಸಿಲು ಬಹಳಷ್ಟು ಇರುವುದರಿಂದ ಚುನಾವಣೆ ದಿನದಂದು ಮುಂಜಾನೆಯ ಅವಧಿಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಚುನಾವಣಾ ಆಯೋಗದ ನೀರಿಕ್ಷೆಯನ್ನು ಸಫಲಗೊಳಿಸೋಣ ಎಂದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ರವರು ಮಾತನಾಡಿ, ಮತದಾನದಿಂದ ಯಾರೂ ಕೂಡಾ ದೂರ ಉಳಿಯದೇ ಕಡ್ಡಾಯವಾಗಿ ಮತದಾನ ಮಾಡಬೇಕೆಂದರು. ದೇಶದಲ್ಲಿ ಸುಭದ್ರ ಸರ್ಕಾರ ರಚಿಸುವಲ್ಲಿ ಮತದಾರರ ಪ್ರಮುಖ ಪಾತ್ರ ಇದೆ ಎಂದರು.
ಪ್ರತಿಜ್ಞಾ ವಿಧಿ ಸ್ವೀಕಾರ: ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ್ ರತ್ನಂ ಪಾಂಡೆಯ ರವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ವೇಳೆ ನೆರೆದಿದ್ದ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಜಿಲ್ಲಾ ಚುನಾವಣಾ ರಾಯಭಾರಿಗಳಾದ ಡಾ||ಶಿವಕುಮಾರ ಮಾಲಿಪಾಟೀಲ್ ಅವರು ಮಾತನಾಡಿ, ಮೇ-7 ರಂದು ಜರುಗುವ ಚುನಾವಣೆಯಲ್ಲಿ ವಿಳಂಬ ಮಾಡದೇ ಮತಗಟ್ಟೆಗೆ ಹೋಗಿ ಮತ ಚಲಾಯಿಸಿರೆಂದು ಕರೆ ನೀಡಿದರು. ಅವಿದ್ಯಾವಂತರಿಗಿಂತ ವಿದ್ಯಾವಂತ ವರ್ಗವೇ ಮತದಾನದಿಂದ ದೂರ ಉಳಿಯುತ್ತಾರೆ ಎಂಬ ಅಪವಾದ ಇದೆ. ಇದನ್ನು ತೆಗೆದುಹಾಕಿ ಮೇ 7 ರಂದು ಕೇವಲ ಐದು ನಿಮಿಷ ಮತಗಟ್ಟೆಗೆ ಬಂದು ನಿರ್ಭೀತಿಯಿಂದ, ಪ್ರಾಮಾಣಿಕವಾಗಿ ಮತ ಚಲಾಯಿಸೋಣ. ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡೋಣ. ಈ ಮೂಲಕ ನಮ್ಮ ದೇಶದ ಬಹುದೊಡ್ಡ ವ್ಯವಸ್ಥೆಯಾದ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಿಯೋಣ ಎಂದರು.
ಜಿಲ್ಲಾ ಚುನಾವಣಾ ರಾಯಭಾರಿಗಳಾದ ರಮ್ಯ ಮಾತನಾಡಿ, ಇದೀಗ ದೇಶ ಸೇವೆ ಮಾಡುವ ಅವಕಾಶ ಒದಗಿ ಬಂದಿದೆ. ಮತದಾರರು ಯಾವುದೇ ಆಸೆ, ಆಮೀಷಕ್ಕೆ ಬಲಿಯಾಗದೆ ಮತದಾನ ಮಾಡಬೇಕು. ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂದರು.
ಜಿಲ್ಲಾ ಚುನಾವಣಾ ರಾಯಭಾರಿ ಮೆಹಬೂಬ ಕಿಲ್ಲೆದಾರ ಮತದಾನ ಪ್ರಮಾಣ ಹೆಚ್ಚಳವಾಗಲು ಶ್ರಮಿಸುವಂತೆ ಮತದಾನ ಜಾಗೃತ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಕಿರುಚಿತ್ರ ಬಿಡುಗಡೆ:-ಮತದಾನ ಜಾಗೃತಿ ಮೂಡಿಸಲು ಸುರೇಶ ಕಂಬಳಿ, ಹನಮಂತಪ್ಪ ಕುರಿ ಇವರು ತಯಾರಿಸಿದ 02 ನಿಮಿಷದ ಒಂದು ಕಿರು ಚಿತ್ರ ವಿಡಿಯೋವನ್ನು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಮತದಾನ ಜಾಗೃತಿಯ ಪೆÇೀಸ್ಟರ್ ಬಿಡುಗಡೆ:-ಜಿಲ್ಲಾ ಚುನಾವಣಾ ರಾಯಭಾರಿಗಳನ್ನು ಒಳಗೊಂಡ ಮತದಾನ ಜಾಗೃತಿಯ ಪೆÇೀಸ್ಟರ್ ಗಳನ್ನು ಬಿಡುಗಡೆಗೊಳಿಸಿದರು.
ಮೆರುಗು ತಂದ ಎತ್ತಿನ ಬಂಡಿ ಜಾಥಾ ಹಾಗೂ ಮಹಿಳೆಯರಿಂದ ಪೂರ್ಣ ಕುಂಭ ಮೆರವಣಿಗೆ:- ಅಳವಂಡಿ ಗ್ರಾಮದಲ್ಲಿ ಎತ್ತಿನ ಬಂಡಿಗಳಿಗೆ ತಳಿರು ತೋರಣ, ವಿವಿಧ ಬಣ್ಣವನ್ನು ಎತ್ತುಗಳಿಗೆ ಹಚ್ಚಿ ಕಾರ ಹುಣ್ಣಿಮೆಯಲ್ಲಿ ಸಿಂಗರಿಸಿದಂತೆ 20 ಎತ್ತಿನ ಬಂಡಿಗಳಿಗೆ ಅಲಂಕಾರಗೊಳಿಸಿ ಜಾಥಾ ನಡೆಸಲಾಗಿದ್ದು, ಜಾಥಾ ನೋಡುಗರ ಗಮನ ಸೆಳೆಯಿತು. ಸಂಜೀವಿನಿ ಯೋಜನೆಯ 150ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಪೂರ್ಣ ಕುಂಭದೊಂದಿಗೆ ಸಾಥ್ ನೀಡಿದರು.
ಎತ್ತಿನ ಬಂಡಿ ಜಾಥಾವು ಗ್ರಾಮದ ಪದವಿ ಪೂರ್ವ ಕಾಲೇಜಿನಿಂದ ಪ್ರಾರಂಭವಾಗಿ ಬಸ್ ಸ್ಟ್ಯಾಂಡ್ ಸರ್ಕಲ್, ಅಗಸಿ ಮೂಲ ಸಾಗಿ, ಕಲ್ಗುಡಿಯವರ ಓಣಿ ಮೂಲಕ ಬನ್ನಿಕಟ್ಟಿವರೆಗೆ ತಲುಪಿ ಮುಕ್ತಾಯಗೊಂಡಿತು.