ಬಳ್ಳಾರಿ, 30 ಏಪ್ರಿಲ್ (ಹಿ.ಸ):
ಆ್ಯಂಕರ್ : ಬಳ್ಳಾರಿ ರೈಲ್ವೆ ಪೊಲೀಸರು ಕಳೆದ ಏ.28 ಭಾನುವಾರದಂದು ಮೈಸೂರು-ಹುಬ್ಬಳ್ಳಿ ಮಾರ್ಗದ ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ 06 ಕೆ.ಜಿ. ಗಾಂಜಾ ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿ, ಓರ್ವ ಆರೋಪಿಯನ್ನು ಗಾಂಜಾ ಸಮೇತ ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ
ಆರೋಪಿಯನ್ನು ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆ ಗುಂತಕಲ್ನ ತಿಲಕ್ ನಗರದ ವಾಸಿ 38 ವರ್ಷ ವಯಸ್ಸಿನ ರಘು ಶಂಕರ್ ಎಂದು ಗುರುತಿಸಲಾಗಿದ್ದು, ಆರೋಪಿಯು ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿ ತಲಾ 01 ಕೆ.ಜಿ. ತೂಕದ 06 ಪಾಕೆಟ್ ಅಂದರೆ ಒಟ್ಟು 06 ಕೆ.ಜಿ. ಯಷ್ಟು ಗಾಂಜಾ ಸಾಗಿಸುತ್ತಿದ್ದುದನ್ನು ಬಳ್ಳಾರಿ ರೈಲ್ವೆ ಪೊಲೀಸರು ಪತ್ತೆಹಚ್ಚಿದ್ದಾರೆ. 06 ಕೆ.ಜಿ. ಗಾಂಜಾದ ಮೌಲ್ಯ 06 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ. ಆರೋಪಿಯನ್ನು ಬಂಧಿಸಿ, ನಿಯಮಾನುಸಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣ ಕುರಿತು ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಡಿವಿಜನಲ್ ಸೆಕ್ಯುರಿಟಿ ಕಮಿಷನರ್, ಅವರು ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗದ ಚುನಾವಣಾ ಶಾಖೆಗೆ ವರದಿ ಸಲ್ಲಿಸಿದ್ದಾರೆ.