ಪರ್ಭಾನಿ,20 ಏಪ್ರಿಲ್ (ಹಿ.ಸ):ಆ್ಯಂಕರ್: ಗಗನ್ ಯಾನ್ ಯೋಜನೆಯ ಯಶಸ್ಸಿಗೆ ದೇಶದ ಜನತೆ ಕಾತರದಿಂದ ಎದುರು ನೋಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಹಾರಾಷ್ಟ್ರದ ಪರ್ಭಾನಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವುದು ಈ ಚುನಾವಣೆಯ ಧ್ಯೇಯವಾಗಿದೆ ಎಂದು ಹೇಳಿದರು.
ಹಿಂದಿನ ಸರ್ಕಾರದಲ್ಲಿ ನಾವು ಚಂದ್ರಯಾನದ ಯಶಸ್ಸನ್ನು ನೋಡಿದ್ದೇವೆ. ಈಗ ಮುಂದಿನ ಸರ್ಕಾರದಲ್ಲಿ 140 ಕೋಟಿ ದೇಶವಾಸಿಗಳು ಗಗನ್ಯಾನದ ಯಶಸ್ಸನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಿದರು. ಸೇನೆಯಿಂದ ಹಿಡಿದು ಕೊರೊನಾ ಕಾಲದ ಔಷಧಿಗಳವರೆಗೆ ದೇಶದ ಜನತೆ ಸ್ವಾವಲಂಬನೆಯ ಉದಾಹರಣೆಗಳನ್ನು ನೋಡುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕೇವಲ ಹತ್ತು ವರ್ಷಗಳಲ್ಲಿ ದೇಶ ಅಭಿವೃದ್ಧಿಯಲ್ಲಿ ಬಹಳ ದೂರ ಕ್ರಮಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. 2014ರಲ್ಲಿ ನಾನು ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಮಾಧ್ಯಮಗಳಲ್ಲಿ ಪ್ರತಿದಿನ ಉಗ್ರರ ದಾಳಿ, ಬಾಂಬ್ ಸ್ಫೋಟದ ಸುದ್ದಿ ಬರುತ್ತಿತ್ತು. ಆದರೆ 2019ರಿಂದ ಗಡಿಯಾಚೆಯಿಂದ ಭಯೋತ್ಪಾದಕರ ಒಳನುಸುಳುವಿಕೆ ಕೂಡ ಸ್ಥಗಿತಗೊಂಡಿದೆ ಎಂದರು. ಜತೆಗೆ, ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪ್ರಸ್ತಾಪಿಸಿದರು.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಕೇರಳದ ವಯನಾಡ್ನಲ್ಲಿ ಕೂಡ ಜನ ಬೆಂಬಲ ಪಡೆಯುವುದು ಕಷ್ಟವಾಗಲಿದೆ. ಅವರು ಅಲ್ಲಿಂದಲೂ ಪಲಾಯನ ಮಾಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು. ಮಹಾರಾಷ್ಟ್ರದ ನಾಂದೇಡ್ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಯನ್ನು ಶೆಹಜಾದಾ (ರಾಜಕುಮಾರ) ಎಂದು ಉಲ್ಲೇಖಿಸಿದ ಮೋದಿ, ಏಪ್ರಿಲ್ 26 ರಂದು ವಯನಾಡ್ನಲ್ಲಿ ಮತದಾನಕ್ಕಾಗಿ ಕಾಂಗ್ರೆಸ್ ಕಾಯುತ್ತಿದೆ. 2019 ರಲ್ಲಿ ಅಮೇಥಿಯಿಂದ ಓಡಿಹೋದ ರಾಹುಲ್ ಗಾಂಧಿ ಈ ಬಾರಿ ಚುನಾವಣೆ ನಂತರ ವಯನಾಡ್ನಿಂದಲೂ ಓಡಿಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.
ಹಿಂದೂಸ್ತಾನ್ ಸಮಾಚಾರ್