ಕೊಟ್ಟೂರು, 18 ಏಪ್ರಿಲ್ (ಹಿ.ಸ):
ಆ್ಯಂಕರ್: ವಿಜಯನಗರ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಗ್ರಾಮೀಣ ಭಾಗದಲ್ಲಿ ಬುಧವಾರ ಪ್ರವಾಸ ಕೈಗೊಂಡು ಮತದಾನದ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಗುರುತಿಸಿರುವ ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು.
ಮೊದಲಿಗೆ ಚಿಕ್ಕಜೋಗಿಹಳ್ಳಿ ತಾಂಡಾಕ್ಕೆ ಬಳಿಕ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಟ್ಟೂರ ತಾಲೂಕಿನ ಕಾಳಾಪುರ ಗ್ರಾಮಕ್ಕೆ ಭೇಟಿ ನೀಡಿದರು. ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಲೋಕಸಭಾ ಚುನಾವಣೆಯ ಮತದಾನವು ಮೇ 7ರಂದು ನಡೆಯಲಿದೆ. ಅಂದು ಅರ್ಹರೆಲ್ಲರೂ ತಪ್ಪದೇ ಮತದಾನ ಮಾಡಬೇಕು. ಮತದಾನ ಮಾಡುವ ವಿಚಾರದಲ್ಲಿ ಯಾರು ಕೂಡ ಹೆದರಬಾರದು. ಶಾಂತಿಯುತ ಮತದಾನಕ್ಕೆ ವಿಜಯನಗರ ಜಿಲ್ಲಾಡಳಿತವು ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಿದೆ. ಜನರು ನಿರ್ಭಯದಿಂದ ಮತದಾನ ಮಾಡಬೇಕು. ಸಾರ್ವಜನಿಕರೊಂದಿಗೆ ಜಿಲ್ಲಾಡಳಿತವು ಸದಾಕಾಲ ಇರಲಿದೆ ಎಂದು ಜಿಲ್ಲಾಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿ ಅವರಲ್ಲಿ ವಿಶ್ವಾಸ ಮೂಡಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಡಾ.ಹೆಚ್.ಎನ್.ರಘು., ಕೂಡ್ಲಿಗಿ ಡಿವೈಎಸ್ಪಿ., ಕೊಟ್ಟೂರ ತಹಸೀಲ್ದಾರ ಅಮರೇಶ ಜಿ.ಕೆ., ಕೊಟ್ಟೂರ ಪಿಎಸ್ಐ ಗೀತಾಂಜಲಿ, ಹೊಸಳ್ಳಿ ಪಿಎಸ್ಐ ಈರಪ್ಪ ಅಂಗಡಿ ಸೇರಿದಂತೆ ಇನ್ನೀತರರು ಇದ್ದರು.