
ಬೀದರ್. 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಕರ್ನಾಟಕ ಲೋಕಸೇವಾ ಆಯೋಗ ಪಶು ವೈದ್ಯರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಅವರ ಮತ್ತಷ್ಟು ಅಕ್ರಮಗಳು ಬೆಳಕಿಗೆ ಬಂದಿವೆ. ನೇಮಕಾತಿ ಹಗರಣದಲ್ಲಿ ಸಂಗ್ರಹಿಸಿದ ಅಕ್ರಮ ಹಣವನ್ನು ಆರೋಪಿಯು ತನ್ನ ಖಾಸಗಿ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡಿರುವುದು ಸಿಐಡಿ ತನಿಖೆಯಿಂದ ದೃಢಪಟ್ಟಿದೆ.
ಪರೀಕ್ಷಾರ್ಥಿಗಳಿಂದ ತಲಾ 40 ಲಕ್ಷ ರೂಪಾಯಿವರೆಗೂ ಹಣ ಪಡೆದಿರುವ ಆರೋಪ ಕೇಳಿಬಂದಿದ್ದು, ಈ ಹಣವನ್ನು ಭಾಲ್ಕಿ ಪಟ್ಟಣದ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್ನಲ್ಲಿರುವ ಬಸವರಾಜ್ ಕನ್ನಾಳೆಯವರ ವೈಯಕ್ತಿಕ ಖಾತೆಗೆ ಜಮೆ ಮಾಡುವಂತೆ ಸೂಚಿಸಲಾಗಿತ್ತು. ಅದರಂತೆ, ಅಭ್ಯರ್ಥಿಗಳು ಅದೇ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಸಿಐಡಿ ಮೂಲಗಳು ಮಾಹಿತಿ ನೀಡಿವೆ.
ಸಿಐಡಿ ತಂಡದಿಂದ ಭಾಲ್ಕಿ ಹಾಗೂ ಡೋಣಾಗಾಪೂರ್ನಲ್ಲಿ ತೀವ್ರ ಶೋಧ:
ಬೆಂಗಳೂರಿನಿಂದ ಆಗಮಿಸಿದ ಡಿವೈಎಸ್ಪಿ ಪಾಷಾ ನೇತೃತ್ವದ 10 ಅಧಿಕಾರಿಗಳ ವಿಶೇಷ ಸಿಐಡಿ ತಂಡವು ಭಾಲ್ಕಿಯ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್ಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತು. ಬ್ಯಾಂಕ್ ಖಾತೆಗೆ ಕೋಟ್ಯಾಂತರ ರೂಪಾಯಿ ಜಮೆ ಆಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಕಲೆಹಾಕಿದ ತಂಡವು, ಖಾತೆಯ ಸಂಪೂರ್ಣ ವಿವರಗಳನ್ನು ಪಡೆದುಕೊಂಡಿತು.
ಬಳಿಕ, ಹಗರಣದ ಅಕ್ರಮ ಹಣದ ವಹಿವಾಟು ಹಾಗೂ ಆಸ್ತಿ ವಿವರಗಳ ಕುರಿತು ಮಾಹಿತಿ ಕಲೆಹಾಕಲು ಆರೋಪಿ ಬಸವರಾಜ್ ಕನ್ನಾಳೆ ಅವರ ಸ್ವಗ್ರಾಮ ಡೋಣಾಗಾಪೂರ್ಗೂ ಸಿಐಡಿ ಅಧಿಕಾರಿಗಳು ಭೇಟಿ ನೀಡಿದರು. ಅಲ್ಲಿಯೂ ಸಹ ತೀವ್ರ ತನಿಖೆ ನಡೆಸಿ, ಗ್ರಾಮದಲ್ಲಿರುವ ವಾಣಿಜ್ಯ ಮಳಿಗೆಗಳು ಹಾಗೂ ಆಸ್ತಿಗಳ ಕುರಿತು ಮಾಹಿತಿ ಕಲೆಹಾಕಿದ ನಂತರ ತಂಡವು ಬೆಂಗಳೂರಿಗೆ ಹಿಂತಿರುಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R