
ಬೆಂಗಳೂರು, 03 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ ದೆಹಲಿ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿದ್ದರೆನೋ? ನಾನು ರಾಜ್ಯದ ನೀರಾವರಿ ಸಮಸ್ಯೆಗಳನ್ನು ಚರ್ಚಿಸಲು ಎರಡು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಟಾಂಗ್ ನೀಡಿದರು.
ವಿಧಾನಸೌಧದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಮಂತ್ರಿಯಾಗಿದ್ದರೂ ಸದಾ ಕಾಲ ರಾಜ್ಯದಲ್ಲೇ ಇರುವವರಿಗೆ ಏನು ಗೊತ್ತಿದೆ? ಎರಡುವರೆ ವರ್ಷದಿಂದ ಕೇಂದ್ರ ಮಂತ್ರಿಯಾಗಿ ಅವರೇನು ಕೆಲಸ ಮಾಡಿದ್ದಾರೆ ಎಂಬುದನ್ನು ಮಾಧ್ಯಮಗಳೇ ಹೇಳಲಿ. ಅವರಿಗೆ ಉತ್ತರ ನೀಡಲು ನನಗೆ ಅಸಹ್ಯ ಎನಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯ ಮಂತ್ರಿಯಾಗಿದ್ದವರಿಗೆ ನಾಲಿಗೆ ಹಿಡಿತದಲ್ಲಿರಬೇಕು. ಅವರು ಹೇಗೆ ಮಾತನಾಡಬೇಕು ಎಂಬುದು ಅವರಿಗೂ ಗೊತ್ತಿಲ್ಲ. ದೇಶದ ಅತೀ ದೊಡ್ಡ ಎರಡು ಖಾತೆಗಳನ್ನು ಇಟ್ಟುಕೊಂಡು, ರಾಜ್ಯದಲ್ಲಿ ಸುದ್ದಿಗೋಷ್ಠಿ ನಡೆಸುವುದನ್ನು ಬಿಟ್ಟು ಇನ್ನೇನು ಮಾಡಿದ್ದಾರೆ? ಅಮರಾವತಿ ಚಂದ್ರಬಾಬು ನಾಯ್ಡು ಅವರ ಕೊಡುಗೆ. ಹೀಗಾಗಿ ಪ್ರಧಾನಿಗಳು ಅಲ್ಲಿ ಕುಳಿತಿದ್ದಾರೆ. ಇಲ್ಲಿ ಚಂದ್ರಬಾಬು ನಾಯ್ಡು ಅವರ ಕೊಡುಗೆ ಇದೆ. ಆದರೆ, ಕುಮಾರಸ್ವಾಮಿ ಅವರ ಕೊಡುಗೆ ಏನು ? ಎಂದು ಪ್ರಶ್ನೆಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂಪಾಯಿ ನೀಡಲು ಕೇಂದ್ರದ ಕೈಯಲ್ಲಿ ಆಗಿಲ್ಲ. ಮೊದಲು ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ಅನುದಾನವನ್ನು ಕೊಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಲಿ ಎಂದು ಆಶಿಸಿದರು.
ಎಚ್ ಡಿಕೆಗೆ ಅವರಿಗೆ ರಾತ್ರಿ ಹೊತ್ತು ನಿದ್ರೆ ಬರುತ್ತಿಲ್ಲ. ಒಂದು ಕಡೆ ಮಗ್ಗಲು ಬದಲಿಸಿದರೆ ಸಿಎಂ ಡಿ.ಕೆ. ಶಿವಕುಮಾರ್ ಕಾಣಿಸುತ್ತಾರೆ, ಮತ್ತೊಂದು ಕಡೆ ಹೊರಳಿದರೆ ನಾನು ಮತ್ತು ಬಾಲಕೃಷ್ಣ ಕಾಣುತ್ತೇವೆ. ನಾನು ನೀರಾವರಿ ಸಚಿವನಾಗಿರುವುದು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅವರ ಹೊಟ್ಟೆನೋವಿಗೆ ನಾನು ಔಷಧಿ ನೀಡಲು ಆಗುವುದಿಲ್ಲ ಎಂದರು.
ನಾನು ಕುಮಾರಸ್ವಾಮಿ ಬಗ್ಗೆ ಹೇಳಲು ಶುರು ಮಾಡಿದರೆ, ಅವರಿಗೆ ತಡೆದುಕೊಳ್ಳುವಷ್ಟು ತಾಕತ್ತಿಲ್ಲ. ಅವರಿಗೆ ತಾಕತ್ತಿದ್ದರೆ ವಿಧಾನಸೌಧ ಇಲ್ಲವೇ ಯಾವುದೇ ಟಿವಿ ಚಾನೆಲ್ಗಾದರೂ ಸರಿ ಬರಲಿ, ನಾನು ಚರ್ಚೆ ಮಾಡುತ್ತೇನೆ. ನಾನು ಬೆಳಿಗ್ಗೆ ಐದು ಗಂಟೆಗೆ ಯಾಕೆ ಬಾಗಿಲು ಬಡಿದಿದ್ದೆ ಎಂದು ವಿವರಿಸಿದರೆ ಅವರು ತಡೆದುಕೊಳ್ಳುವುದಿಲ್ಲ.
2006ರಲ್ಲಿ ಸಿಎಂ ಆಗಿದ್ದ ಅವರು ಎರಡು ದಿನ ನಾಪತ್ತೆಯಾಗಿದ್ದರು. ಅವರನ್ನು ಹುಡುಕಿ ಬೆಳಿಗ್ಗೆ ಕ್ಯಾಬಿನೆಟ್ಗೆ ಕರೆತರುವ ಟಾಸ್ಕ್ ಅನ್ನು ದೇವೇಗೌಡರು ನನಗೆ ನೀಡಿದ್ದರು. ಅವರು ನೀಡಿದ್ದ ಟಾಸ್ಕ್ಗಾಗಿ ನಾನು ಬೆಳಿಗ್ಗೆ ಐದು ಗಂಟೆಗೆ ಮನೆ ಬಾಗಿಲು ಬಡಿದಿದ್ದೆ. ನಾನು ಆಗ ಯಾರ ಮನೆ ಬಾಗಿಲು ಬಡಿದಿದ್ದೆ ಎಂಬುದನ್ನು ವಿವರವಾಗಿ ಕೇಳಲು ಅವರಿಗೆ ಆಸೆ ಇದ್ದರೆ ಹೇಳುತ್ತೇನೆ. ನಾನು ಅವರಂತೆ 'ಹಿಟ್ ಅಂಡ್ ರನ್' ಕೆಲಸ ಮಾಡುವುದಿಲ್ಲ. ಅವರಿಗೆ ಗುಂಡಿಗೆ ಇದ್ದರೆ ಬರಲಿ. ನನ್ನ ಬಗ್ಗೆ ಹೇಳಲು ಅವರಿಗೆ ಏನೂ ಇಲ್ಲ, ಬರಿ ಹಿಟ್ ಅಂಡ್ ರನ್ ಅಷ್ಟೇ. ಅವರ ಬಗ್ಗೆ ನಾನು ಸಾವಿರ ಹೇಳುತ್ತೇನೆ ಎಂದು ಬಹಿರಂಗ ಚರ್ಚೆಗೆ ಆಹ್ವಾನಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.