ಭಾರತದ ಬೆಳವಣಿಗೆ ತ್ವರಿತ ಮತ್ತು ಸುಸ್ಥಿರವಾಗಿದೆಃ ಪ್ರಧಾನಿ
ನವದೆಹಲಿ, 19 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಭಾರತ ತನ್ನ ಪ್ರಾಚೀನ ಪರಿಸರ ಚಿಂತನೆಗಳನ್ನು ಆಧುನಿಕ ದೃಷ್ಟಿಕೋನದೊಂದಿಗೆ ಸಂಯೋಜಿಸಿಕೊಂಡು ಹವಾಮಾನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುತ್ತಿದೆ. ಭಾರತದ ಅಭಿವೃದ್ಧಿ ವೇಗವೂ ಆಗಿದೆ, ಸುಸ್ಥಿರವೂ ಆಗಿದೆ. ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಭಾರತದ ಪ್ರಯತ್ನಗ
प्रधानमंत्री नरेन्द्र मोदी शनिवार को विज्ञान भवन में आयोजित अंतरराष्ट्रीय सम्मेलन ‘द फ्यूचर ऑफ एनवायरनमेंट एंड क्लाइमेट डायनेमिक्स’ को संबोधित करते हुए


ನವದೆಹಲಿ, 19 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಭಾರತ ತನ್ನ ಪ್ರಾಚೀನ ಪರಿಸರ ಚಿಂತನೆಗಳನ್ನು ಆಧುನಿಕ ದೃಷ್ಟಿಕೋನದೊಂದಿಗೆ ಸಂಯೋಜಿಸಿಕೊಂಡು ಹವಾಮಾನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುತ್ತಿದೆ. ಭಾರತದ ಅಭಿವೃದ್ಧಿ ವೇಗವೂ ಆಗಿದೆ, ಸುಸ್ಥಿರವೂ ಆಗಿದೆ. ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಭಾರತದ ಪ್ರಯತ್ನಗಳು ಕೇವಲ ದೇಶದ ಅಭಿವೃದ್ಧಿಯ ಅಂಕಿ-ಅಂಶಗಳಲ್ಲ, ಮಾನವತೆಯ ಭವಿಷ್ಯಕ್ಕೆ ಭಾರತದ ಕೊಡುಗೆಯ ಪ್ರತೀಕಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆಯೋಜಿಸಿದ್ದ ‘ಪರಿಸರ ಮತ್ತು ಹವಾಮಾನ ಚಲನಶೀಲತೆಯ ಭವಿಷ್ಯ’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಕೃತಿ ಮತ್ತು ಪರಿಸರದ ವಿಚಾರದಲ್ಲಿ ಭಾರತ ಶತಮಾನಗಳಿಂದಲೂ ಜಗತ್ತಿಗೆ ಮಾರ್ಗದರ್ಶನ ನೀಡಿದೆ. ತನ್ನ ಪರಂಪರೆ ಹಾಗೂ ಸಾಂಸ್ಕೃತಿಕ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಭಾರತ ಆಧುನಿಕ ಹವಾಮಾನ ಸವಾಲುಗಳಿಗೆ ಪರಿಹಾರಗಳನ್ನು ನೀಡುತ್ತಿದೆ. ಜತೆಗೆ ಮಾನವತೆಯ ಸಾಮೂಹಿಕ ಪ್ರಯತ್ನಗಳಿಗೆ ಕರೆ ನೀಡುತ್ತಿದೆ. ಸಮ್ಮೇಳನ ಆಯೋಜಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪದಾಧಿಕಾರಿಗಳು ಹಾಗೂ ಸಂಬಂಧಪಟ್ಟ ಎಲ್ಲರಿಗೂ ಪ್ರಧಾನಿ ಅಭಿನಂದನೆ ಸಲ್ಲಿಸಿದರು.

ಕಾರ್ಬನ್ ಹೊರಸೂಸುವಿಕೆಯ ಹೊಣೆಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ತಪ್ಪಾಗಿ ಹೊರಿಸುವ ಪ್ರಯತ್ನಗಳು ನಡೆಯುತ್ತಿವೆ. ಐತಿಹಾಸಿಕ ವಾಸ್ತವವೆಂದರೆ ಇಂದಿಗೂ ತಲಾವಾರು ಕಾರ್ಬನ್ ಹೊರಸೂಸುವಿಕೆಯಲ್ಲಿ ಭಾರತದ ಕೊಡುಗೆ ಜಾಗತಿಕ ಸರಾಸರಿಯ ಅರ್ಧಕ್ಕಿಂತಲೂ ಕಡಿಮೆಯಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಭಾರತದ ಹೋಲಿಕೆಯಲ್ಲಿ ತಲಾವಾರು ಕಾರ್ಬನ್ ಹೊರಸೂಸುವಿಕೆ ಸುಮಾರು ಆರು ಪಟ್ಟು ಹೆಚ್ಚಾಗಿದೆ. ಭಾರತ ಈ ವಾಸ್ತವವನ್ನು ಜಾಗತಿಕ ವೇದಿಕೆಗಳಲ್ಲಿ ಬಲವಾಗಿ ಪ್ರಸ್ತಾಪಿಸುತ್ತಿದೆ ಎಂದು ಮೋದಿ ಹೇಳಿದರು.

ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಜಗತ್ತನ್ನು ಒಗ್ಗೂಡಿಸಿಕೊಂಡು ಭಾರತ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ. ‘ಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್’, ಅಂತಾರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ನಿರೋಧಕ ಮೂಲಸೌಕರ್ಯಕ್ಕಾಗಿ ಒಕ್ಕೂಟ, ಜಾಗತಿಕ ಜೈವಿಕ ಇಂಧನ ಒಕ್ಕೂಟ, ಅಂತಾರಾಷ್ಟ್ರೀಯ ದೊಡ್ಡ ಬೆಕ್ಕುಗಳ ಒಕ್ಕೂಟ ಹಾಗೂ ‘ಮಿಷನ್ ಲೈಫ್’ನಂತಹ ವೇದಿಕೆಗಳು ಹವಾಮಾನ ಮತ್ತು ಪರಿಸರದ ಬಗ್ಗೆ ಭಾರತದ ಬದ್ಧತೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿವೆ ಎಂದರು.

ಕಳೆದ 12 ವರ್ಷಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. 12 ವರ್ಷಗಳ ಹಿಂದೆ ದೇಶದ ಸೌರಶಕ್ತಿ ಸಾಮರ್ಥ್ಯ ಸುಮಾರು 2 ಗಿಗಾವ್ಯಾಟ್‌ನಷ್ಟಿತ್ತು. ಇದೀಗ ಅದು 160 ಗಿಗಾವ್ಯಾಟ್‌ಗಿಂತ ಹೆಚ್ಚಾಗಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ 50 ಲಕ್ಷಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಪ್ರಧಾನಮಂತ್ರಿ ಕುಸುಮ್ ಯೋಜನೆಯಡಿ 30 ಲಕ್ಷ ರೈತರ ಹೊಲಗಳಲ್ಲಿ ಸೌರ ಪಂಪ್‌ಗಳನ್ನು ಅಳವಡಿಸಲಾಗಿದೆ. ಸೌರಶಕ್ತಿಯೊಂದರ ಮೂಲಕವೇ ಸುಮಾರು 20 ಕೋಟಿ ಟನ್‌ಗಳಷ್ಟು ಕಾರ್ಬನ್ ಹೊರಸೂಸುವಿಕೆಯನ್ನು ತಡೆಯಲು ಯಶಸ್ವಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಕಳೆದ 12 ವರ್ಷಗಳಲ್ಲಿ ದೇಶದ ಪವನಶಕ್ತಿ ಸಾಮರ್ಥ್ಯ ಮೂರು ಪಟ್ಟು ಹೆಚ್ಚಾಗಿದೆ. ಜಲವಿದ್ಯುತ್ ಸಾಮರ್ಥ್ಯವೂ ವೃದ್ಧಿಯಾಗಿದೆ. ಪಳೆಯುಳಿಕೆ ಇಂಧನವಲ್ಲದ ಇಂಧನ ಸಾಮರ್ಥ್ಯ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಕಲ್ಲಿದ್ದಲಿನ ಹೆಚ್ಚು ಸ್ವಚ್ಛ ಬಳಕೆಗಾಗಿ ಕಲ್ಲಿದ್ದಲು ಅನಿಲೀಕರಣ ಸೇರಿದಂತೆ ವಿವಿಧ ತಂತ್ರಜ್ಞಾನಗಳಿಗೆ ಭಾರತ ಉತ್ತೇಜನ ನೀಡುತ್ತಿದೆ. ಪರಮಾಣು ಶಕ್ತಿ ಕ್ಷೇತ್ರದಲ್ಲಿಯೂ ವೇಗವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ಸ್ವಚ್ಛ ಸಾರಿಗೆ ಮತ್ತು ಹಸಿರು ಜಲಜನಕ ಕ್ಷೇತ್ರದಲ್ಲಿಯೂ ಭಾರತ ವೇಗವಾಗಿ ಮುನ್ನಡೆಯುತ್ತಿದೆ. ದೇಶದ ಮೊದಲ ಜಲಜನಕ ರೈಲು ಆರಂಭವಾಗಿದೆ. ಕಳೆದ 12 ವರ್ಷಗಳಲ್ಲಿ ವಿದ್ಯುತ್ ವಾಹನಗಳ ಮಾರಾಟದಲ್ಲಿ ಸುಮಾರು 950 ಪಟ್ಟು ಹೆಚ್ಚಳವಾಗಿದೆ. 2014ಕ್ಕೂ ಮೊದಲು ಒಂದು ವರ್ಷದಲ್ಲಿ 3,000ಕ್ಕಿಂತ ಕಡಿಮೆ ವಿದ್ಯುತ್ ವಾಹನಗಳು ಮಾರಾಟವಾಗುತ್ತಿದ್ದರೆ, ಕಳೆದ ವರ್ಷ ಸುಮಾರು 25 ಲಕ್ಷ ವಿದ್ಯುತ್ ವಾಹನಗಳು ಮಾರಾಟವಾಗಿವೆ ಎಂದು ಮೋದಿ ತಿಳಿಸಿದರು.

2014ರವರೆಗೆ ಐದು ನಗರಗಳಲ್ಲಿ ಸುಮಾರು 250 ಕಿಲೋಮೀಟರ್‌ನಷ್ಟು ಮೆಟ್ರೊ ಜಾಲವಿತ್ತು. ಇದೀಗ 20ಕ್ಕೂ ಹೆಚ್ಚು ನಗರಗಳಲ್ಲಿ ಮೆಟ್ರೊ ಸಂಚಾರ ನಡೆಯುತ್ತಿದ್ದು, ದೇಶದ ಮೆಟ್ರೊ ಜಾಲ 1,000 ಕಿಲೋಮೀಟರ್‌ಗಿಂತ ಹೆಚ್ಚಾಗಿದೆ. ರೈಲ್ವೆಯ ಸುಮಾರು ಶೇ.100ರಷ್ಟು ವಿದ್ಯುದೀಕರಣದಿಂದ ಕೋಟ್ಯಂತರ ಲೀಟರ್ ಡೀಸೆಲ್ ಬಳಕೆಯನ್ನು ಉಳಿಸಲಾಗಿದೆ. ಸುಮಾರು 3,000 ಕಿಲೋಮೀಟರ್ ಉದ್ದದ ಸಮರ್ಪಿತ ಸರಕು ಸಾಗಣೆ ಮಾರ್ಗದಲ್ಲಿ ಸಂಚರಿಸುವ ಸರಕು ರೈಲುಗಳು ಒಂದೇ ಬಾರಿಗೆ ನೂರಾರು ಸರಕು ಸಾಗಣೆ ವಾಹನಗಳಿಗೆ ಸಮಾನ ಪ್ರಮಾಣದ ಸರಕು ಸಾಗಿಸುತ್ತಿವೆ. ಸುಮಾರು 5,000 ಕಿಲೋಮೀಟರ್ ಉದ್ದದ ಜಲಮಾರ್ಗಗಳಲ್ಲಿಯೂ ಸಾರಿಗೆ ಆರಂಭವಾಗಿದೆ ಎಂದರು.

ಜಲ ಸಂರಕ್ಷಣೆ ಕ್ಷೇತ್ರದಲ್ಲಿ ದೇಶದಲ್ಲಿ 70,000ಕ್ಕೂ ಹೆಚ್ಚು ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ. ‘ಮಳೆ ನೀರನ್ನು ಹಿಡಿಯಿರಿ’ ಅಭಿಯಾನದಡಿ ಸುಮಾರು ಒಂದೂವರೆ ಕೋಟಿ ಜಲಸಂಗ್ರಹಣಾ ವ್ಯವಸ್ಥೆಗಳನ್ನು ನಿರ್ಮಿಸಲಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಮೂಲಕ ಎರಡು ಕೋಟಿಗೂ ಹೆಚ್ಚು ರೈತರು ಆಧುನಿಕ ನೀರಾವರಿ ಸೌಲಭ್ಯಗಳಿಗೆ ಸಂಪರ್ಕಗೊಂಡಿದ್ದಾರೆ. ‘ಪ್ರತಿ ಹನಿಗೂ ಹೆಚ್ಚು ಬೆಳೆ’ ಅಭಿಯಾನದ ಮೂಲಕ ನೀರಿನ ಉಳಿತಾಯವಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಶ್ರೀ ಅನ್ನ ಬೆಳೆಗಳು ಕಡಿಮೆ ನೀರಿನ ಬಳಕೆಯನ್ನು ಹೊಂದಿವೆ. ಭಾರತದಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ರಫ್ತು ಹೆಚ್ಚಾಗಿದೆ. ಇದರ ರಫ್ತು ಸುಮಾರು ಒಂದೂವರೆ ಲಕ್ಷ ಟನ್‌ಗಳಿಗೆ ತಲುಪಿದೆ. ಭಾರತದ ಪ್ರಯತ್ನಗಳ ಹಿನ್ನೆಲೆಯಲ್ಲಿ 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿ ಆಚರಿಸಲಾಯಿತು ಎಂದರು.

ನೈಸರ್ಗಿಕ ಕೃಷಿಗೂ ಉತ್ತೇಜನ ನೀಡಲಾಗುತ್ತಿದೆ. ದೇಶದಲ್ಲಿ ನೈಸರ್ಗಿಕ ಕೃಷಿಯ 24,000ಕ್ಕೂ ಹೆಚ್ಚು ಸಮೂಹಗಳನ್ನು ರಚಿಸಲಾಗಿದೆ. ಹವಾಮಾನಕ್ಕೆ ಹೊಂದಿಕೊಳ್ಳುವ ಬೆಳೆಗಳ ಸುಮಾರು 3,000 ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕಳೆದ 12 ವರ್ಷಗಳಲ್ಲಿ ಅತಿ ದಟ್ಟ ಅರಣ್ಯ ಪ್ರದೇಶದಲ್ಲಿ ಶೇ.22ಕ್ಕಿಂತಲೂ ಹೆಚ್ಚಿನ ಹೆಚ್ಚಳವಾಗಿದೆ. ‘ತಾಯಿಯ ಹೆಸರಿನಲ್ಲಿ ಒಂದು ಮರ’ ಅಭಿಯಾನದಡಿ ಕೋಟ್ಯಂತರ ಮರಗಳನ್ನು ನೆಡಲಾಗಿದೆ ಎಂದು ಮೋದಿ ತಿಳಿಸಿದರು.

ಏಕಬಳಕೆಯ ಪ್ಲಾಸ್ಟಿಕ್ ಮೇಲೆ ಭಾರತ ನಿಷೇಧ ಹೇರಿದ್ದು, ಕಡಿಮೆ ಬಳಕೆ, ಮರುಬಳಕೆ ಮತ್ತು ಮರುಸಂಸ್ಕರಣೆಯ ಮಂತ್ರದೊಂದಿಗೆ ಚಕ್ರೀಯ ಆರ್ಥಿಕತೆಯನ್ನು ಉತ್ತೇಜಿಸುತ್ತಿದೆ. ಗೋವರ್ಧನ ಯೋಜನೆಯ ಮೂಲಕ ಗ್ರಾಮಗಳಲ್ಲಿ ಗೋಮಯ ಮತ್ತು ಇತರ ಜೈವಿಕ ತ್ಯಾಜ್ಯವನ್ನು ಉಪಯುಕ್ತ ಸಂಪನ್ಮೂಲವಾಗಿ ಪರಿವರ್ತಿಸಲಾಗುತ್ತಿದೆ ಎಂದರು.

ಭಾರತದ ಸಾಂಸ್ಕೃತಿಕ ಚಿಂತನೆಯಲ್ಲಿ ಭೂಮಿಯನ್ನು ತಾಯಿಯಾಗಿ ಪರಿಗಣಿಸಲಾಗಿದೆ. ಇದೇ ಭಾವನೆಯೊಂದಿಗೆ ಜವಾಬ್ದಾರಿಯುತ ಹಾಗೂ ಸುಸ್ಥಿರ ಭವಿಷ್ಯ ನಿರ್ಮಾಣಕ್ಕಾಗಿ ಭಾರತ ಕಾರ್ಯನಿರ್ವಹಿಸುತ್ತಿದೆ. ಸಮ್ಮೇಳನದಲ್ಲಿ ನಡೆಯುವ ಚರ್ಚೆಗಳಿಂದ ಹೊರಹೊಮ್ಮುವ ಹೊಸ ಆಲೋಚನೆಗಳು ಮತ್ತು ಪರಿಹಾರಗಳು ಮುಂದಿನ ಪೀಳಿಗೆಗೆ ಆಧಾರವಾಗಲಿವೆ ಎಂಬ ವಿಶ್ವಾಸವಿದೆ ಎಂದು ಪ್ರಧಾನಿ ಹೇಳಿದರು.

ಕಾರ್ಯಕ್ರಮದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್, ಭಾರತದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಎರಡು ದಿನಗಳ ಸಮ್ಮೇಳನದಲ್ಲಿ ಪರಿಸರ ತಜ್ಞರು, ಉಚ್ಚತಮ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಧೀಶರು, ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಹಾಗೂ 17 ದೇಶಗಳ ನ್ಯಾಯಾಂಗ ಪ್ರತಿನಿಧಿಗಳು ಭಾಗವಹಿಸಿದ್ದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande