
ಗದಗ, 11 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಅರಣ್ಯ ರಕ್ಷಕರು ದೇಶದ ಸೈನಿಕರಿದ್ದಂತೆ, ದೇಶದ ಗಡಿಯನ್ನು ಕಾಯಲು ಸೈನಿಕರಿರುವಂತೆ, ನಾಡಿನ ಪ್ರಾಕೃತಿಕ ಸಂಪತ್ತನ್ನು ಕಾಯುವ ಗುರುತರ ಜವಾದ್ಬಾರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎಂದು ಹಿರಿಯ ದಿವಾಣಿ ನ್ಯಾಯದೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ತಿಳಿಸಿದರು.
ಗದಗ ತಾಲ್ಲೂಕಿನ ಬಿಂಕದಕಟ್ಟಿಯ ಸಾಲು ಮರದ ತಿಮ್ಮಕ್ಕ ಸಸ್ಯೋಧ್ಯಾನದಲ್ಲಿಂದು ನಾಡಿನ ಅರಣ್ಯ ಸಂಪತ್ತನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಕರ್ನಾಟಕ ಅರಣ್ಯ ಇಲಾಖೆಯ ಹುತಾತ್ಮರಿಗೆ ಶ್ರದ್ದಾಂಜಲಿ ಅಂಗವಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ ನೈಜ ಬಲ ಬಂದದ್ದು ಸುಪ್ರೀಂ ಕೋರ್ಟ್ನ 'ಟಿ.ಎನ್. ಗೋ ದಾವರ್ಮನ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ' ಪ್ರಮುಖ ಪ್ರಕರಣದ ತೀರ್ಪಿನ ನಂತರ. ಈ ತೀರ್ಪು ಅರಣ್ಯ ಇಲಾಖೆಗೆ ಅತ್ಯಂತ ಶಕ್ತಿಯುತ ಬೆಂಬಲವಾಗಿ ನಿಂತಿದೆ. ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 62ರ ಅಡಿಯಲ್ಲಿ ಅರಣ್ಯ ಅಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳಂತೆಯೇ ಅಧಿಕಾರ ಮತ್ತು ರಕ್ಷಣೆ ನೀಡಲಾಗಿದೆ. ಸರ್ಕಾರಿ ದಾಖಲೆಗಳಲ್ಲಿ 'ಅರಣ್ಯ' ಎಂದು ನಮೂದಾಗಿರುವ ಯಾವುದೇ ಜಾಗವನ್ನು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ಅನ್ಯ ಉದ್ದೇಶಕ್ಕೆ ಬಳಸಲು ಸಾಧ್ಯವಿಲ್ಲ ಎಂದರು.
ಅರಣ್ಯ ರಕ್ಷಣೆ ಮತ್ತು ಕಳ್ಳಸಾಗಣೆ ತಡೆಯುವಂತಹ ಅಪಾಯಕಾರಿ ಸಂದರ್ಭಗಳಲ್ಲಿ ಪ್ರಾಣ ತೆತ್ತ ಹುತಾತ್ಮರ ಕುಟುಂಬಗಳಿಗೆ ಸೂಕ್ತ ಪರಿಹಾರ, ಬೆಂಬಲ ಹಾಗೂ ಪುನರ್ವಸತಿ ಕಲ್ಪಿಸುವುದು ಮತ್ತು ಅವರೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ದಿವಾಣಿ ನ್ಯಾಯದೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ತಿಳಿಸಿದರು.
ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಮಾತನಾಡಿ ನಾಡಿನ ಪ್ರಾಕೃತಿಕ ಹಾಗೂ ಅರಣ್ಯ ಸಂಪತ್ತನ್ನು ರಕ್ಷಿಸುವ ಕಾಯಕದಲ್ಲಿ ತಮ್ಮ ಜೀವವನ್ನೇ ಬಲಿಕೊಟ್ಟ ಕರ್ನಾಟಕ ಅರಣ್ಯ ಇಲಾಖೆಯ ವೀರ ಸಿಬ್ಬಂದಿ ಹಾಗೂ ಅಧಿಕಾರಿಗಳ ನೆನಪಿನಲ್ಲಿ 'ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ' ಕಾರ್ಯಕ್ರಮವನ್ನು ಅರಣ್ಯ ಸಂರಕ್ಷಣೆಗೆ ಪ್ರಾಣತ್ಯಾಗ ಮಾಡಿದ ಹುತಾತ್ಮರ ತ್ಯಾಗ ಅಪಾರ ಎಂದು ತಿಳಿಸಿದರು.
ನಾಡಿನ ಭವಿಷ್ಯಕ್ಕಾಗಿ ಹಾಗೂ ಮುಂದಿನ ಪೀಳಿಗೆಗೆ ಅರಣ್ಯ ಉಳಿಯಬೇಕು ಎಂಬ ಏಕೈಕ ಉದ್ದೇಶದಿಂದ ಅರಣ್ಯ ಸಿಬ್ಬಂದಿ ತಮ್ಮ ಪ್ರಾಣವನ್ನೇ ತೃಣಕ್ಕೆ ಸಮಾನವಾಗಿ ತ್ಯಾಗ ಮಾಡಿದ್ದಾರೆ. ಕರ್ತವ್ಯ ನಿಷ್ಠೆಯಿಂದ ಕಾಡಿನಲ್ಲಿ ಕಾರ್ಯನಿರ್ವಹಿಸುವಾಗ ಎದುರಾಗುವ ಭಯ ಮತ್ತು ಸವಾಲುಗಳನ್ನು ಬದಿಗಿಟ್ಟು, ಕರ್ತವ್ಯವೇ ಮುಖ್ಯವೆಂದು ಹೋರಾಡಿದ ಅವರ ಬಲಿದಾನ ಸ್ಮರಣೀಯ ಎಂದು ಬಣ್ಣಿಸಿದರು.
ಅರಣ್ಯ ಕ್ಷೇತ್ರದಲ್ಲಿ ಎದುರಾಗುವ ಅಪಾಯಗಳ ನಡುವೆಯೂ, ಸಿಬ್ಬಂದಿಗೆ ನೀಡಲಾಗುವ ತರಬೇತಿಯು ಅವರಲ್ಲಿ ಕರ್ತವ್ಯ ನಿಷ್ಠೆ ಮತ್ತು ಆತ್ಮಧೈರ್ಯ ತುಂಬಿ ನಿರ್ಭೀತವಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತದೆ. ಇಂತಹ ಧೀರ ಸಿಬ್ಬಂದಿಯನ್ನು ಕಳೆದುಕೊಳ್ಳುವುದು ದೇಶ ಮತ್ತು ಇಲಾಖೆಗೆ ತುಂಬಲಾರದ ನಷ್ಟವಾಗಿದೆ ಎಂದರು.
ಸರ್ವೋಚ್ಚ ನ್ಯಾಯಾಲಯದ ಪ್ರಮುಖ ತೀರ್ಪುಗಳು ( ಗೋದಾವರ್ಮನ್ ಪ್ರಕರಣ) ಅರಣ್ಯ ಸಂರಕ್ಷಣೆಗೆ ಸೂಕ್ತ ಬಲ ಮತ್ತು ಅಧಿಕಾರವನ್ನು ನೀಡಿವೆ. ಈ ದೇಶದ ಕಾನೂನು ಹಾಗೂ ಪ್ರಕೃತಿಯನ್ನು ರಕ್ಷಿಸುವ ಕಾಯಕದಲ್ಲಿ ಹುತಾತ್ಮರಾದವರ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗಡಿಯಲ್ಲಿ ಕಾಯುವ ಯೋಧರಂತೆ, ಕಾಡು ಮತ್ತು ಮಾನವ ವಸತಿ ಪ್ರದೇಶಗಳ ನಡುವಿನ ಸೂಕ್ಷ್ಮ ಗಡಿಯಲ್ಲಿ ಅರಣ್ಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ ಕೆಂಚಪ್ಪನವರ ಮಾತನಾಡಿ ಅರಣ್ಯ ಸಂರಕ್ಷಣೆ ಎಂಬುದು ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಷ್ಟೇ ಅಲ್ಲ, ಸಾರ್ವಜನಿಕರು ಹಾಗೂ ಇತರ ಇಲಾಖೆಗಳು ಒಗ್ಗೂಡಿ ಶ್ರಮಿಸಿದಾಗ ಮಾತ್ರ ಕಾಡನ್ನು ಉಳಿಸಲು ಸಾಧ್ಯ ಎಂದು ತಿಳಿಸಿದರು.
ರಾಜಸ್ಥಾನದ ಖೇಜರ್ಲಿಯಲ್ಲಿ ಮರಗಳನ್ನು ರಕ್ಷಿಸಲು ಗ್ರಾಮಸ್ಥರು ಮಾಡಿದ ಬಲಿದಾನ ಹಾಗೂ ಕರ್ನಾಟಕದಲ್ಲಿ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಐ ಎಪ್ ಎಸ್ ಅಧಿಕಾರಿ ಶ್ರೀನಿವಾಸ್ ಅವರಂತಹ ಅಧಿಕಾರಿಗಳ ತ್ಯಾಗದ ನೆನಪಿನಲ್ಲಿ ಈ ಹುತಾತ್ಮರ ದಿನಾಚರಣೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಅರಣ್ಯ ಸಂರಕ್ಷಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ:
ಅರಣ್ಯದ ಅಂಚಿನಲ್ಲಿರುವ ಹಳ್ಳಿಗಳ ಸಾರ್ವಜನಿಕರು ಹಾಗೂ ಗ್ರಾಮಸ್ಥರನ್ನು ಒಳಗೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಅರಣ್ಯ ರಕ್ಷಣೆ ಪರಿಣಾಮಕಾರಿಯಾಗಲಿದೆ. ಕಾಡು ನನ್ನದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕು. ಈ ಹಿಂದೆ ಕಳ್ಳಸಾಗಣೆ ಹಾಗೂ ಕಾಡುಗಳ್ಳರ ದಾಳಿಯಿಂದ ಹುತಾತ್ಮರಾಗುವವರ ಸಂಖ್ಯೆ ಹೆಚ್ಚಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇಲಾಖೆಯ ಸಂರಕ್ಷಣಾ ಪ್ರಯತ್ನಗಳಿಂದಾಗಿ ವನ್ಯಜೀವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಭಾರತ ದೇಶದಲ್ಲೇ ಅತಿ ಹೆಚ್ಚು ಆನೆಗಳು, ಎರಡನೇ ಅತಿ ಹೆಚ್ಚು ಹುಲಿಗಳು ಹಾಗೂ ಮೂರನೇ ಅತಿ ಹೆಚ್ಚು ಚಿರತೆಗಳು ಕರ್ನಾಟಕದಲ್ಲಿವೆ ಎಂದರು.
ಹುತಾತ್ಮರಿಗೆ ಶ್ರದ್ಧಾಂಜಲಿ ನಮನ:
ವನ್ಯಜೀವಿಗಳ ದಾಳಿ ಹಾಗೂ ಅರಣ್ಯ ರಕ್ಷಣೆಯ ಕಠಿಣ ಸವಾಲುಗಳ ನಡುವೆ ಪ್ರಾಣ ತೆತ್ತ ಇಲಾಖೆಯ ವೀರ ಹುತಾತ್ಮರ ತ್ಯಾಗವನ್ನು ಸ್ಮರಿಸಿ, ಅವರ ಕುಟುಂಬದೊಂದಿಗೆ ಇಲಾಖೆ ಸದಾ ಇರಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ಕುಮಾರ್ ಕೆಂಚಪ್ಪನವರ ಭರವಸೆ ನೀಡಿದರು.
ಹಿರಿಯ ದಿವಾಣಿ ನ್ಯಾಯಧೀಶ ಸಿ.ಎಸ್. ಶಿವನಗೌಡ್ರ ಹಾಗೂ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಗದಗ ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಚಂದ್ರಹಾಸ ವರ್ಣೇಕರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಗದಗ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ್ ಪೊಲೀಸ್ ಪಾಟೀಲ್, ಗದಗ ಸಾಮಾಜಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಮನ್ ನಾಯಕ, ಗದಗ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ವಿರೇಂದ್ರ ಮರಿಬಸಣ್ಣವರ, ಮುಂಡರಗಿ ಕಪ್ಪತ್ತ್ ಹಿಲ್ಸ್ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಮಂಜುನಾಥ ಆರ್. ಮೇಗಲಮನಿ, ಶಿರಹಟ್ಟಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಶ್ರೀಮತಿ ರೇಣುಕಮ್ಮ. ಎ, ಗದಗ ವಿಭಾಗದ ಐ.ಸಿ.ಟಿ ವಲಯದ ಅರಣ್ಯ ಅಧಿಕಾರಿ ರವೀಂದ್ರ ಕರ್ನಾಳ, ಸೇರಿದಂತೆ ಅರಣ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP