
ಕೋಲಾರ,29 ಆಗಸ್ಟ್ (ಹಿ.ಸ)
ಆ್ಯಂಕರ್ : ಶ್ರಾವಣ ಮಾಸದ ಮೂರನೇ ಶನಿವಾರ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷಪೂಜೆ ನಡೆದಿದ್ದು, ಜಿಲ್ಲೆಯ ವೆಂಕಟರಮಣಸ್ವಾಮಿ,ಆಂಜನೇಯ, ಶ್ರೀರಾಮ, ಶನೇಶ್ವರಸ್ವಾಮಿ ದೇವಾಲಯಗಳತ್ತ ಭಕ್ತಸಾಗರ ಹರಿದು ಬಂದಿದ್ದು, ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮೂರನೇ ಶನಿವಾರ ಇಡೀ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಸಾಗರ ಸಾಲುಗಟ್ಟಿ ನಿಂತು ಸ್ವಾಮಿಯ ದರ್ಶನ ಪಡೆದಿದ್ದು ಕಂಡು ಬಂತು. ದೇವಾಲಯಗಳಲ್ಲಿ ವಿಶಿಷ್ಟ ರೀತಿಯಲ್ಲಿ ಅಲಂಕರಿಸಲಾಗಿದ್ದು, ವಿಶೇಷ ಅಲಂಕಾರದ ವೈಭವ ನಡೆದಿದೆ.
ಶ್ರಾವಣ ಶನಿವಾರದ ಪ್ರಮುಖ ಅದಿದೇವತೆಯಾದ ಬಾಲಾಜಿ, ವೆಂಕಟೇಶ್ವರಸ್ವಾಮಿಯ ದೇವಾಲಯಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದು, ಮುಂಜಾನೆ ೪ ಗಂಟೆಯಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭಗೊಂಡವು.
ದೇವಾಲಯದ ರಾಜಗೋಪುರ,ಮುಖದ್ವಾರದಲ್ಲಿ ವಿದ್ಯುತ್ ದೀಪಗಳ ಜತೆ ವಿಶಿಷ್ಟ ರೀತಿಯ ಹೂಗಳಿಂದ ಅಲಂಕರಿಸಲಾಗಿತ್ತು. ಮುಂಜಾನೆ ಸ್ವಾಮಿಗೆ ಕ್ಷೀರಾಭಿಷೇಕ ಮಾಡಿದ್ದು, ಬೆಳಗ್ಗೆ ೫ ಗಂಟೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತು ಸ್ವಾಮಿಯ ದರ್ಶನ ಪಡೆದರು.
ಮೂರನೇ ಶ್ರಾವಣ ಶನಿವಾರದ ಅಂಗವಾಗಿ ದೇವಾಲಯಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆಗಮಿಸಿ ದೇವರ ದರ್ಶನ ಪಡೆದರು. ದೇವಾಲಯದ ಪ್ರಧಾನ ಶ್ರೀನಿವಾಸಾಚಾರ್ ಮತ್ತಿತರರು ಪೂಜೆಯ ನೇತೃತ್ವ ವಹಿಸಿದ್ದರು.ಕೋಲಾರದ ನಗರದ ಶನೇಶ್ವರಸ್ವಾಮಿ ದೇವಾಲಯಗಳಲ್ಲಿ ಶ್ರಾವಣದ ೩ನೇ ಶನಿವಾರದ ಅಂಗವಾಗಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಿದ್ದು, ನಗರದ ಸರ್ವಜ್ಞ ಪಾರ್ಕಿನಲ್ಲಿರುವ ಶನೇಶ್ವರ ಸ್ವಾಮಿ ದೇವಾಲಯಕ್ಕೆ ಜನಸಾಗರವೇ ಹರಿದು ಬಂತು.ಸ್ವಾಮಿಯನ್ನು ವಿಶೀಷ್ಟರೀತಿಯಲ್ಲಿ ಅಲಂಕರಿಸಿದ್ದು, ಮೊದಲ ಶನಿವಾರ ದರ್ಶನ ಪಡೆಯುವ ಉತ್ಸಾಹ,ಭಕ್ತಿಯಲ್ಲಿ ತೇಲಿಹೋದ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಶ್ರೀನಿವಾಸ,ಶನೇಶ್ವರ ಸ್ವಾಮಿಯ ಜತೆಗೆ ನಗರ ಮತ್ತು ಜಿಲ್ಲೆಯಲ್ಲಿ ಶ್ರಾವಣ ಶನಿವಾರದ ಪೂಜೆ ಶ್ರೀರಾಮ, ಆಂಜನೇಯಸ್ವಾಮಿ ದೇವಾಲಯಗಳಲ್ಲಿಯೂ ಕಂಡು ಬಂತು. ಶನೇಶ್ವರ ಸ್ವಾಮಿಯ ದರ್ಶನ ಪಡೆದ ನಂತರ ಆಂಜನೇಯನ ದರ್ಶನ ಪಡೆಯಲೇಬೇಕು ಎಂಬ ಪ್ರತೀತಿ ಭಕ್ತರಲ್ಲಿ ಇರುವುದರಿಂದ ಹನುಮನ ದೇಗುಲಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು.ನಗರದ ಕೋಟೆ ಪಂಚಮುಖಿ ಆಂಜನೇಯ, ಪಾಲಸಂದ್ರ ಭಕ್ತ ಹನುಮ, ಶಾರದಾಚಿತ್ರಮಂದಿರ ರಸ್ತೆಯ ವಕ್ಕಲೇರಿ ಆಂಜನೇಯಸ್ವಾಮಿ, ಬ್ರಾಹ್ಮಣರ ಬೀದಿಯ ದೊಡ್ಡ ಆಂಜನೇಯಸ್ವಾಮಿ, ಕುರುಬರಪೇಟೆ ಪಂಚಮುಖಿ ಹನುಮ, ಪಿಸಿ ಬಡಾವಣೆಯ ಕೋದಂಡರಾಮಸ್ವಾಮಿ,ಕಿಲಾರಿಪೇಟೆಯ ವೇಣುಗೋಪಾಲಸ್ವಾಮಿ, ಅಮ್ಮವಾರಿಪೇಟೆಯ ವರದರಾಜಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಹನುಮ, ಶ್ರೀನಿವಾಸನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್