
ಕೋಲಾರ: ಆಗಸ್ಟ್ ೨೫ (ಹಿ.ಸ.)
ಆ್ಯಂಕರ್ : ಗ್ರಾಮೀಣ ಭಾಗದ ಶ್ರಮಿಕ ವರ್ಗದ ಜನರಿಗೆ ಉದ್ಯೋಗ ಭದ್ರತೆ ಒದಗಿಸುವ ಹಾಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ, 'ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕಾ ಮಿಷನ್ ಗ್ರಾಮೀಣ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಶ್ರೀನಿವಾಸಪುರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಕೆ. ಸರ್ವೇಶ್ ಅಭಿಪ್ರಾಯಟ್ಟರು.
ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಹಾಗೂ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯತಿಗಳಲ್ಲಿ ವಿಬಿಜಿರಾಮ್ಜಿ ಯೋಜನೆಯಡಿ' ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬದಲಿಗೆ 'ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕಾ ಮಿಷನ್ ಗ್ರಾಮೀಣ ಯೋಜನೆ ಜಾರಿಗೆ ಬಂದಿದೆ. ವಿಬಿಜಿರಾಮ್ಜಿ ಯೋಜನೆಯಡಿ ತಾಲ್ಲೂಕಿನಲ್ಲಿ ಜಾಬ್ಕಾರ್ಡ್ ಮೇಳ ಹಮ್ಮಿಕೊಳ್ಳಲಾಗಿದೆ. ಯೋಜನೆಯಡಿ ಸ್ವಗ್ರಾಮದಲ್ಲೇ ಉದ್ಯೋಗಾವಕಾಶಗಳನ್ನು ಕಲ್ಪಿಸಿ, ಜನರು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು. ವೈಯುಕ್ತಿಕ ಕಾಮಗಾರಿಗಳನ್ನು ನೀಡುವ ಮೂಲಕ ಗ್ರಾಮೀಣ ಜನರ ಜೀವನೋಪಾಯವನ್ನು ಒದಗಿಸುವುದು ಮೇಳದ ಮುಖ್ಯ ಉದ್ದೇಶವಾಗಿದೆ ಎಂದರು.
ವಿಬಿಜಿರಾಮ್ಜಿ ಯೋಜನೆಯಡಿ ದಿನಕ್ಕೆ ಕುಲಿಧರವನ್ನು ರೂಪಾಯಿ ೩೮೨/-ಕ್ಕೆ ಏರಿಸಲಾಗಿದ್ದು, ಕುಟುಂಬಕ್ಕೆ ೧೨೫ ದಿನಗಳ ಉದ್ಯೋಗ ಖಾತ್ರಿ ನೀಡಿದೆ. ಕುಟುಂಬವೊ0ದು ವರ್ಷದಲ್ಲಿ ೪೭೭೫೦/- ರೂಪಾಯಿ ಕೂಲಿ ಗಳಿಸಬಹುದು. ವೈಯುಕ್ತಿಕವಾಗಿ ೫ ಲಕ್ಷದವರೆಗೂ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ದನದಶೆಡ್, ಕುರಿ, ಮೇಕೆ ಶೆಡ್. ಕೋಳಿ ಶೆಡ್, ಬಚ್ಚಲುಗುಂಡಿ, ಕೊಳವೆಬಾವಿ ಮರುಪೂರಣ ಘಟಕ, ಗೊಬ್ಬರ ಘಟಕ, ಕೃಷಿಹೊಂಡ ಸೇರಿದಂತೆ ತೋಟಗಾರಿಕೆ ಬೆಳೆ, ರೇಷ್ಮೆ ಬೆಳೆಗೆ ಸಹಾಯಧನ ದೊರೆಯಲಿದೆ. ಪ್ರತಿಯೊಬ್ಬ ಅರ್ಹ ಬಡ ಕುಟುಂಬವೂ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು. ಈ ಜಾಬ್ ಕಾರ್ಡ್ ಮೇಳದ ಅಂಗವಾಗಿ, ಪಂಚಾಯತಿ ವ್ಯಾಪ್ತಿಯ ಹೊಸದಾಗಿ ಅರ್ಜಿ ಸಲ್ಲಿಸಿದ್ದ ೫ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ನೂತನ ಜಾಬ್ ಕಾರ್ಡ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸಹಾಯಕ ನಿರ್ದೇಶಕರಾದ ರಾಮಪ್ಪ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಲ್ಯಾಣಿ, ತಾಲ್ಲೂಕು ಐಇಸಿ ಸಂಯೋಜಕರಾದ ಚೇತನ್ ಡಿ.ವಿ, ಹಾಗೂ ಪಂಚಾಯತಿ ಸಿಬ್ಬಂದಿವರ್ಗ, ಸ್ಥಳೀಯ ಸ್ವಸಹಾಯ ಗುಂಪುಗಳ ಒಕ್ಕೂಟದ ಸದಸ್ಯರು ಹಾಗೂ ನಂಬಿಹಳ್ಳಿ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್