


ಕೊಪ್ಪಳ , 15 ಆಗಸ್ಟ್ (ಹಿ.ಸ.):
ಆ್ಯಂಕರ್ : ದಾಸ್ಯದಿಂದ ಮುಕ್ತರಾಗಿ ಸ್ವಾತಂತ್ರ್ಯ ಪಡೆದು 80ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ದೇಶಕ್ಕಾಗಿ ಪ್ರಾಣ, ಆಸ್ತಿ-ಪಾಸ್ತಿ, ತನು-ಮನ-ಧನವನ್ನು ತ್ಯಾಗ ಮಾಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ನಾವೆಲ್ಲರೂ ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಹೇಳಿದ್ದಾರೆ.
ಶನಿವಾರದಂದು ಜಿಲ್ಲಾಡಳಿತ ಭವನದ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
1600 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಮೂಲಕ ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು, ಭಾರತೀಯರಲ್ಲಿದ್ದ ಭೇದಭಾವದ ಲಾಭ ಪಡೆದು ದೇಶದ ಮೇಲೆ ಆಳ್ವಿಕೆ ಸ್ಥಾಪಿಸಿದರು. 1824ರಿಂದ 1828ರ ಅವಧಿಯಲ್ಲಿ ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಅವರ ಸೇನಾನಿಗಳು ಬ್ರಿಟಿಷ ಅಧಿಕಾರಿ ಠಾಕ್ರೆಯನ್ನು ಕೊಂದು ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿಯಾಗಿ ಹೊರಹೊಮ್ಮಿದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆ, ನಾನಾ ಸಾಹೇಬ್, ಬೇಗಂ ಹಜರತ್ ಮಹಲ್ ಮುಂತಾದವರು ಹೋರಾಡಿದರೂ, ಏಕೀಕೃತ `ರಾಷ್ಟ್ರದ ಪರಿಕಲ್ಪನೆ' ಕೊರತೆಯಿಂದ ಹಿನ್ನಡೆಯಾಯಿತು. 1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೆ ಮುನ್ನ ನಡೆದ ಧಾರ್ಮಿಕ ಮತ್ತು ಸಾಮಾಜಿಕ ಚಳವಳಿಗಳು ಜನರಲ್ಲಿ ರಾಷ್ಟ್ರೀಯತೆಯ ಬೀಜ ಬಿತ್ತಿದವು. ಸೌಮ್ಯವಾದಿಗಳ ಜೊತೆಗೆ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಜ್ಗುರು, ಸುಖ್ದೇವ್, ಖುದೀರಾಮ್ ಬೋಸ್ ಅವರಂತಹ ಕ್ರಾಂತಿಕಾರಿಗಳು ಉಗ್ರ ಹೋರಾಟ ನಡೆಸಿದರು. ಬಾಲಗಂಗಾಧರ ತಿಲಕ್ (ಲಾಲ್-ಪಾಲ್-ಬಾಲ್) ಹಾಗೂ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಚಳವಳಿಗಳು (ಅಸಹಕಾರ, ಶಾಸನಭಂಗ, ಕ್ವಿಟ್ ಇಂಡಿಯಾ) ರೂಪುಗೊಂಡು 1947ರ ಆಗಸ್ಟ್ 14ರ ಮಧ್ಯರಾತ್ರಿ (`ಫ್ರೀಡಂ ಅಟ್ ಮಿಡ್ನೈಟ್') ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವು ಎಂದು ಅವರು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ವಿಶ್ವದ ಶ್ರೇಷ್ಠ ಸಂವಿಧಾನವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ನಿಂತಿದೆ. ಸ್ವಾತಂತ್ರ್ಯ ಬಂದಾಗ ಶೇ. 12ರಷ್ಟಿದ್ದ ಸಾಕ್ಷರತಾ ಪ್ರಮಾಣ ಇಂದು ಶೇ. 78ಕ್ಕಿಂತ ಹೆಚ್ಚಾಗಿದೆ. ಮಾನವನ ಸರಾಸರಿ ಜೀವಿತಾವಧಿ 31 ವರ್ಷದಿಂದ 78 ವರ್ಷಕ್ಕೆ ಏರಿಕೆಯಾಗಿದೆ. ಶೇ. 70-80ರಷ್ಟಿದ್ದ ಬಡತನದ ಪ್ರಮಾಣ ಪ್ರಸ್ತುತ ಶೇ. 2-3ಕ್ಕೆ ಇಳಿಕೆಯಾಗಿದೆ. ಸಮಾಜದಲ್ಲಿ ಜಾತಿ, ಮತ, ಲಿಂಗ ಭೇದದ ಜೊತೆಗೆ ಈಗ `ಪೀಳಿಗೆಗಳ ಅಂತರ/ಭೇದ' ಹೊಸದಾಗಿ ಹುಟ್ಟಿಕೊಂಡಿದೆ. ಯುವಜನತೆಯಲ್ಲಿ ನಿರುದ್ಯೋಗ, ಕ್ರಿಯಾಶೀಲತೆಯ ಕೊರತೆ ಮತ್ತು ಮಾದಕ ದ್ರವ್ಯ (ಡ್ರಗ್ಸ್) ಚಟ ಹೆಚ್ಚಾಗುತ್ತಿದ್ದು, ಮಾನ್ಯ ಮುಖ್ಯಮಂತ್ರಿಗಳ ಕರೆಯಂತೆ ನಶೆ ಮುಕ್ತ ಕರ್ನಾಟಕ, ನಶೆ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕಿದೆ ಎಂದು ಅವರು ಕರೆ ನೀಡಿದರು.
ಈ ವರ್ಷ ತೀವ್ರ ಬರಗಾಲ ಆವರಿಸಿದ್ದು, ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಲು `ಪ್ರಜಾಸೇವೆ' ಮನೋಭಾವದಿಂದ ಕೆಲಸ ಮಾಡಬೇಕಿದೆ. ಜನರಿಗೆ ಉದ್ಯೋಗ ಮತ್ತು ಜೀವನೋಪಾಯ ಕಲ್ಪಿಸುವುದು, ಕುಡಿಯುವ ನೀರು ಪೂರೈಸುವುದು, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡುವುದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ತಲುಪಿಸುವುದು.
ಮುಂದಿನ ಒಂದು ವರ್ಷ ಅತ್ಯಂತ ಸವಾಲಿನದ್ದಾಗಿದ್ದು, ಸರಕಾರದ ಆಶಯ ಮತ್ತು ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಾಧ್ಯಮ ಮಿತ್ರರು ಸಹಕರಿಸಬೇಕೆಂದು ಅವರು ಹೇಳಿದರು.
ಈ ಸಂದರ್ಭ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತಿ ಉಪಕಾರ್ಯದಶೀ ಟಿ.ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್