
ಬೆಂಗಳೂರು, 14 ಆಗಸ್ಟ್ (ಹಿ.ಸ.):
ಆ್ಯಂಕರ್:
ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪತ್ರ ಬರೆದಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.
ಎಕ್ಸ್ನಲ್ಲಿ ಕಿಡಿಕಾರಿರುವ ವಿಜಯೇಂದ್ರ, ಚುನಾವಣೆ ಮತ್ತು ಪಕ್ಷದ ಕೆಲಸಗಳ ನೆಪ ಹೇಳಿ ರಾಷ್ಟ್ರಧ್ವಜಾರೋಹಣದಿಂದ ಹಿಂದೆ ಸರಿಯುವುದು ಸಚಿವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ತ್ರಿವರ್ಣ ಧ್ವಜ ಯಾವುದೇ ಸಾಮಾನ್ಯ ಸರ್ಕಾರಿ ಕಾರ್ಯಕ್ರಮವಲ್ಲ. ಅದು ದೇಶದ ಗೌರವ, ಸ್ವಾಭಿಮಾನ ಮತ್ತು ಕೋಟ್ಯಂತರ ಭಾರತೀಯರ ಹೆಮ್ಮೆಯ ಸಂಕೇತ. ದೇಶದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಹೋರಾಟಗಾರರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅಂತಹ ರಾಷ್ಟ್ರಧ್ವಜಾರೋಹಣಕ್ಕೆ ಸಮಯವಿಲ್ಲ ಎಂದು ಹೇಳುವುದು ರಾಷ್ಟ್ರೀಯ ಕರ್ತವ್ಯದ ಬಗ್ಗೆ ಇರುವ ಗಂಭೀರ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
“ಕಾಂಗ್ರೆಸ್ ಪಕ್ಷದ ಕೆಲಸವೇ ನಿಮ್ಮ ಸಚಿವ ಸ್ಥಾನದ ಜವಾಬ್ದಾರಿಗಿಂತ ಮುಖ್ಯವಾಗಿದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪೂರ್ಣಾವಧಿ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡಿ. ಸಾರ್ವಜನಿಕ ಹುದ್ದೆಯ ಅಧಿಕಾರ ಮತ್ತು ಸೌಲಭ್ಯಗಳನ್ನು ಅನುಭವಿಸುತ್ತಾ ರಾಷ್ಟ್ರೀಯ ಕರ್ತವ್ಯವನ್ನು ಎರಡನೇ ಸ್ಥಾನಕ್ಕೆ ತಳ್ಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಸಚಿವರ ಆದ್ಯತೆಯಲ್ಲಿ ಪಕ್ಷ ಮೊದಲು, ರಾಷ್ಟ್ರ ನಂತರ ಎಂಬಂತಾಗಿರುವುದು ಅತ್ಯಂತ ಖಂಡನೀಯ. ಇದು ಸಚಿವರಷ್ಟೇ ಅಲ್ಲ, ಅವರ ಪಕ್ಷದ ಆದ್ಯತೆಗಳನ್ನೂ ಬಹಿರಂಗಪಡಿಸುತ್ತದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
“ರಾಷ್ಟ್ರಧ್ವಜಕ್ಕಿಂತ ಪಕ್ಷದ ಕೆಲಸವೇ ಮುಖ್ಯವೇ? ನಾಚಿಕೆಯಾಗಬೇಕು” ಎಂದು ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.