ಬೋರ್ಗರೆವ ನೀರಿನೊಂದಿಗೆ ಮೀನುಗಳ ಚೆಲ್ಲಾಟ; ಪ್ರಕೃತಿ ಪ್ರಿಯರ ಗಮನ ಸೆಳೆದ ದೃಶ್ಯ
ಬಾಗಲಕೋಟೆ, 14 ಆಗಸ್ಟ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ಸಮೀಪದ ಸಿದ್ದರಾಮೇಶ್ವರ ಬ್ಯಾರೇಜ್ನಿಂದ ನದಿ ಪಾತ್ರಕ್ಕೆ ಧುಮ್ಮಿಕ್ಕಿ ಬೀಳುತ್ತಿರುವ ನೀರಿನ ರಭಸ ಹಾಗೂ ಅದರೊಂದಿಗೆ ಮೀನುಗಳು ನೀರಿನ ವಿರುದ್ಧ ದಿಕ್ಕಿನಲ್ಲಿ ಹಾರಾಡುತ್ತಿರುವ ಅಪರೂಪದ ದೃಶ್ಯಗಳು ಪ್ರಕೃತಿ ಪ್ರಿಯರ ಗಮನ ಸೆಳೆಯು
ಮೀನುಗಳು


ಬಾಗಲಕೋಟೆ, 14 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ

ಮುಧೋಳ ಸಮೀಪದ ಸಿದ್ದರಾಮೇಶ್ವರ ಬ್ಯಾರೇಜ್ನಿಂದ ನದಿ ಪಾತ್ರಕ್ಕೆ ಧುಮ್ಮಿಕ್ಕಿ ಬೀಳುತ್ತಿರುವ ನೀರಿನ ರಭಸ ಹಾಗೂ ಅದರೊಂದಿಗೆ ಮೀನುಗಳು ನೀರಿನ ವಿರುದ್ಧ ದಿಕ್ಕಿನಲ್ಲಿ ಹಾರಾಡುತ್ತಿರುವ ಅಪರೂಪದ ದೃಶ್ಯಗಳು ಪ್ರಕೃತಿ ಪ್ರಿಯರ ಗಮನ ಸೆಳೆಯುತ್ತಿವೆ.

ಬ್ಯಾರೇಜ್ನ ಮೇಲ್ಭಾಗದಿಂದ ನದಿಯ ನೀರು ರಭಸವಾಗಿ ಕೆಳಭಾಗಕ್ಕೆ ಹರಿದು ಬೀಳುತ್ತಿದ್ದು, ಇದೇ ಸಂದರ್ಭದಲ್ಲಿ ನದಿಯಲ್ಲಿ ಈಜಿಕೊಂಡು ಬರುತ್ತಿರುವ ಮೀನುಗಳು ನೀರಿನ ಹರಿವಿನ ವಿರುದ್ಧ ದಿಕ್ಕಿನಲ್ಲಿ ಮೇಲಕ್ಕೆ ಹಾರುತ್ತಿರುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಕೆಲವೊಮ್ಮೆ ಹಿಂಡು ಹಿಂಡಾಗಿ ಮೀನುಗಳು ನೀರಿನಿಂದ ಮೇಲಕ್ಕೆ ಚಿಮ್ಮಿ ಮತ್ತೆ ನದಿಗೆ ಬೀಳುತ್ತಿದ್ದು, ನೀರಿನೊಂದಿಗೆ ಅವುಗಳ ಚೆಲ್ಲಾಟ ನೋಡುಗರಿಗೆ ಪ್ರಕೃತಿಯ ಸುಂದರ ಅನುಭವ ನೀಡುತ್ತಿದೆ.

ನದಿಯ ನೀರಿನ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬ್ಯಾರೇಜ್ ಸುತ್ತಮುತ್ತಲಿನ ಪ್ರದೇಶದಲ್ಲಿ ಮೀನುಗಳ ಚಟುವಟಿಕೆಯೂ ಹೆಚ್ಚಾಗಿದೆ. ನೀರಿನ ರಭಸಕ್ಕೆ ವಿರುದ್ಧವಾಗಿ ಈಜುತ್ತಾ ಮೇಲಕ್ಕೆ ಸಾಗುವ ಮೀನುಗಳು ಬ್ಯಾರೇಜ್ನ ಬಳಿ ನೀರಿನಿಂದ ಜಿಗಿಯುವ ದೃಶ್ಯಗಳು ವಿಶೇಷವಾಗಿ ಸಂಜೆ ವೇಳೆಯಲ್ಲಿ ಹೆಚ್ಚು ಕಂಡುಬರುತ್ತಿವೆ ಎಂದು ಪರಿಸರ ಪ್ರೇಮಿ ಪ್ರಶಾಂತ್ ವೆರ್ಣೇಕರ್ ತಿಳಿಸಿದ್ದಾರೆ.

ಮೀನುಗಳ ಈ ವಿಶಿಷ್ಟ ಚಲನವಲನವನ್ನು ಕಣ್ತುಂಬಿಕೊಳ್ಳಲು ಪ್ರತಿದಿನ ಸಂಜೆ ನದಿ ತೀರಕ್ಕೆ ಸಾರ್ವಜನಿಕರು ಹಾಗೂ ಪ್ರಕೃತಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸುವವರು ಬ್ಯಾರೇಜ್ನ ನೀರಿನ ಹರಿವು, ನದಿಯ ಸೌಂದರ್ಯ ಹಾಗೂ ಮೀನುಗಳ ಹಾರಾಟವನ್ನು ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ.

ಮೀನುಗಳು ನೀರಿನ ವಿರುದ್ಧ ದಿಕ್ಕಿನಲ್ಲಿ ಹಾರಾಡುತ್ತಿರುವ ದೃಶ್ಯವು ನದಿಯ ಜೀವವೈವಿಧ್ಯ ಹಾಗೂ ನೈಸರ್ಗಿಕ ಪರಿಸರದ ಮಹತ್ವವನ್ನು ಸಾರುತ್ತಿದೆ. ನದಿ ಹಾಗೂ ಜಲಚರಗಳ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂತಹ ನೈಸರ್ಗಿಕ ದೃಶ್ಯಗಳು ಸಹಕಾರಿಯಾಗುತ್ತವೆ. ನದಿಪಾತ್ರದ ಸ್ವಚ್ಛತೆ ಕಾಪಾಡುವುದರ ಜೊತೆಗೆ ಜಲಚರಗಳ ಬದುಕಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಪರಿಸರ ಪ್ರಿಯರು ಅಭಿಪ್ರಾಯಪಟ್ಟಿದ್ದಾರೆ.

ಸಂಜೆ ಹೊತ್ತಿನಲ್ಲಿ ಬ್ಯಾರೇಜ್ ಬಳಿ ಕಂಡುಬರುವ ನೀರಿನ ಸೊಬಗು, ರಭಸವಾಗಿ ಹರಿಯುವ ಜಲಧಾರೆ ಮತ್ತು ಅದರೊಂದಿಗೆ ಹಾರಾಡುವ ಮೀನುಗಳ ದೃಶ್ಯ ಸದ್ಯ ಸಾರ್ವಜನಿಕರ ಮೊಬೈಲ್ ಕ್ಯಾಮೆರಾಗಳಲ್ಲೂ ಸೆರೆಯಾಗುತ್ತಿದ್ದು, ಸಿದ್ದರಾಮೇಶ್ವರ ಬ್ಯಾರೇಜ್ ಪ್ರಕೃತಿ ಸೌಂದರ್ಯದ ತಾಣವಾಗಿ ಗಮನ ಸೆಳೆಯುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande