
ಬೆಂಗಳೂರು, 11 ಆಗಸ್ಟ್ (ಹಿ.ಸ.):
ಆ್ಯಂಕರ್:
‘ಸ್ವಚ್ಛ ಬೆಂಗಳೂರು’ ಯೋಜನೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನ ನಾಗರಿಕರ ಜೇಬಿಗೆ ಮತ್ತಷ್ಟು ಹೊರೆ ಹಾಕುತ್ತಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.
ಎಕ್ಸ್ನಲ್ಲಿ ಹೇಳಿಕೆ ನೀಡಿರುವ ಅವರು, ಬೆಂಗಳೂರಿನ ತ್ಯಾಜ್ಯ ಸಮಸ್ಯೆಗೆ ಉತ್ತಮ ತ್ಯಾಜ್ಯ ನಿರ್ವಹಣೆ, ಉತ್ತಮ ನಾಗರಿಕ ಸೇವೆ ಹಾಗೂ ಹೊಣೆಗಾರಿಕೆ ಒದಗಿಸುವ ಬದಲು ಸ್ವಚ್ಛತೆಯ ಹೆಸರಿನಲ್ಲಿ ನಾಗರಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಟೀಕಿಸಿದ್ದಾರೆ.
20×30 ಅಡಿ ನಿವೇಶನ ಹೊಂದಿರುವವರಿಗೆ ₹6,700, ಕಾಂಪೌಂಡ್ ಇರುವ ನಿವೇಶನಕ್ಕೆ ₹7,700 ಹಾಗೂ ತ್ಯಾಜ್ಯ ಸಂಗ್ರಹಣೆಗೆ ₹19,200 ಶುಲ್ಕ ವಿಧಿಸಲಾಗುತ್ತಿದೆ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ.
ಈಗಾಗಲೇ ನಾಗರಿಕರಿಂದ ಆಸ್ತಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಅದರ ಹೊರತಾಗಿಯೂ ತ್ಯಾಜ್ಯ ನಿರ್ವಹಣೆ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಿಧಿಸುವ ಅಗತ್ಯವೇನು ಎಂದು ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವಚ್ಛ ಭಾರತ’ ಅಭಿಯಾನದ ಮೂಲಕ ದೇಶದಲ್ಲಿ ಸ್ವಚ್ಛತಾ ಕ್ರಾಂತಿಗೆ ಚಾಲನೆ ನೀಡಿದರು. ಆದರೆ ಕಾಂಗ್ರೆಸ್ ಸರ್ಕಾರ ಸ್ವಚ್ಛತೆಯನ್ನು ನಾಗರಿಕರಿಂದ ಹಣ ವಸೂಲಿ ಮಾಡಲು ನೆಪವಾಗಿ ಬಳಸುತ್ತಿದೆ ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿಗೆ ನಾಗರಿಕರ ಜೇಬು ಖಾಲಿ ಮಾಡುವ ಹೊಸ ಮಾರ್ಗಗಳಲ್ಲ, ಸ್ವಚ್ಛ ಹಾಗೂ ಹೊಣೆಗಾರಿಕೆಯ ಆಡಳಿತ ಅಗತ್ಯ ಎಂದು ಅವರು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.