
ಬೆಂಗಳೂರು, 28 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ಕಸರತ್ತು ಗರಿಗೆದರಿದ್ದು, ದೆಹಲಿ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಪ್ರಮುಖ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಸಮಾಲೋಚನೆ ನಡೆಸುತ್ತಿದ್ದು, ಶೀಘ್ರದಲ್ಲೇ ಮಹತ್ವದ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಗೆ ಮೂರರಿಂದ ನಾಲ್ಕು ಸಚಿವ ಸ್ಥಾನಗಳನ್ನು ನೀಡಬೇಕು ಎಂಬ ಬೇಡಿಕೆಯ ಕುರಿತು ಮಾತನಾಡಿದ ಅವರು, ಹಿಂದೆ ಜನತಾ ಪರಿವಾರದ ಸರ್ಕಾರವಿದ್ದಾಗ ಒಂದೇ ಜಿಲ್ಲೆಗೆ ನಾಲ್ಕೈದು ಸ್ಥಾನಗಳನ್ನು ನೀಡಿದ ಐತಿಹಾಸಿಕ ಉದಾಹರಣೆಗಳಿವೆ. ಈಗ ಜಿಲ್ಲೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಾತಿನಿಧ್ಯ ಕೋರುವುದು ತಪ್ಪಲ್ಲ ಎಂದರು. ಆದರೆ, ಮುಂಬರುವ ಚುನಾವಣೆ ಹಾಗೂ ಸಾಮಾಜಿಕ ನ್ಯಾಯದ, ಆಧಾರದ ಮೇಲೆ ವರಿಷ್ಠರು ಅಳೆದು ತೂಗಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಸಂಪುಟ ಸೇರುವ ವಿಶ್ವಾಸ ಎಲ್ಲ ಆಕಾಂಕ್ಷಿಗಳಿಗೂ ಇರುವುದು ಸಹಜವಾದರೂ, ಹೈಕಮಾಂಡ್ ನಿರ್ಧಾರವೇ ಎಲ್ಲರಿಗೂ ಅಂತಿಮ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ನೇತೃತ್ವದ ತಜ್ಞರ ನಿಯೋಗವು ದೆಹಲಿಯಲ್ಲಿ ಈಗಾಗಲೇ ಮಹತ್ವದ ಚರ್ಚೆ ನಡೆಸಿದೆ. ರಾಜ್ಯದ ರೈತರಿಗೆ ಹಾಗೂ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಮುಖ್ಯಮಂತ್ರಿಯವರು ಸಮರ್ಥ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ದೃಢವಿಶ್ವಾಸವಿದೆ ಎಂದರು.
ಇನ್ನು ಕೆಪಿಎಸ್ಸಿ ಹಗರಣದ ತನಿಖೆಯ ಬಗ್ಗೆ ಬಿಜೆಪಿ ಸಿಬಿಐ ತನಿಖೆಗೆ ಪಟ್ಟು ಹಿಡಿದಿರುವ ಕುರಿತು ವಾಗ್ದಾಳಿ ನಡೆಸಿದ ಅವರು, ಪ್ರಕರಣ ಈಗಾಗಲೇ ತನಿಖಾ ಹಂತದಲ್ಲಿರುವಾಗ ಆರೋಪ ಮಾಡುವುದು ಸರಿಯಲ್ಲ. ವಿರೋಧ ಪಕ್ಷದವರು ಪ್ರತಿಯೊಂದು ವಿಷಯಕ್ಕೂ ಸಿಬಿಐ ತನಿಖೆ ಕೇಳುವುದು ರೂಢಿಯಾಗಿದೆ. ರಾಜ್ಯದ ತನಿಖಾ ಸಂಸ್ಥೆಗಳು ಮತ್ತು ಕಾನೂನಿನ ಮೇಲೆ ನಂಬಿಕೆ ಇಡಬೇಕು ಎಂದು ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII