
ಬೆಂಗಳೂರು, 18 ಜುಲೈ (ಹಿ.ಸ.):
ಆ್ಯಂಕರ್:
ಬಿಡದಿ ಟೌನ್ಶಿಪ್ ಯೋಜನೆ ವಿಚಾರದಲ್ಲಿ ಬಿಜೆಪಿ ನಡೆಸಲು ಮುಂದಾಗಿರುವ ಪಾದಯಾತ್ರೆ, ತಾವು ಮಾಡಿರುವ ತಪ್ಪುಗಳಿಗೆ ಪ್ರಾಯಶ್ಚಿತ ಯಾತ್ರೆ ಎಂದು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್ಶಿಪ್ ಯೋಜನೆಗೆ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳೇ ಅಡಿಪಾಯ ಹಾಕಿದ್ದು, ಈಗ ಅದೇ ಯೋಜನೆ ವಿರುದ್ಧ ಹೋರಾಟ ನಡೆಸುತ್ತಿರುವುದು ರಾಜಕೀಯ ನಾಟಕ ಎಂದು ಆರೋಪಿಸಿದರು.
ಕುಮಾರಸ್ವಾಮಿ ಅವರು ಡಿಎಲ್ಎಫ್ ಸಂಸ್ಥೆಗೆ ಯೋಜನೆ ನೀಡುವಾಗ ಎಷ್ಟು ಕಿಕ್ಬ್ಯಾಕ್ ಪಡೆದರು ಹಾಗೂ ಬಳಿಕ 400 ಕೋಟಿ ರೂ. ಹಿಂತಿರುಗಿಸುವ ವೇಳೆ ಯಡಿಯೂರಪ್ಪ ಸರ್ಕಾರ ಎಷ್ಟು ಕಿಕ್ಬ್ಯಾಕ್ ಪಡೆದಿತು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಯೋಜನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ನಡೆಸಿದ ಸಭೆಗಳ ದಾಖಲೆಗಳು ಹಾಗೂ ನಂತರದ ಬಿಜೆಪಿ ಸರ್ಕಾರಗಳು ಯೋಜನೆ ಮುಂದುವರಿಸಿದ ದಾಖಲೆಗಳನ್ನು ವಿಧಾನಮಂಡಲ ಅಧಿವೇಶನದಲ್ಲಿ ಬಹಿರಂಗಪಡಿಸುವುದಾಗಿ ತಿಳಿಸಿದರು.
2018ರಲ್ಲಿ ರೈತರು ಯೋಜನೆ ಕೈಬಿಡುವಂತೆ ಮನವಿ ಮಾಡಿದರೂ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ನಿರಾಕರಿಸಿದ್ದರು. ದೇವೇಗೌಡರೂ ರೈತರಿಗೆ ನೆರವಾಗದೆ ಮೌನವಾಗಿದ್ದರು ಎಂದು ಆರೋಪಿಸಿದರು.
ಯಡಿಯೂರಪ್ಪ ಸರ್ಕಾರವೇ ಸಮಿತಿ ರಚಿಸಿ ಟೌನ್ಶಿಪ್ ಯೋಜನೆಗೆ ಶಿಫಾರಸು ಮಾಡಿದ್ದು, ನಂತರ ಬೊಮ್ಮಾಯಿ ಸರ್ಕಾರವೂ ಅದನ್ನು ಮುಂದುವರಿಸಿತ್ತು ಎಂದು ಹೇಳಿದರು.
ಅನಿತಾ ಕುಮಾರಸ್ವಾಮಿ ಹೆಸರಿನ 36 ಎಕರೆಯಲ್ಲಿ 31 ಎಕರೆ ಪಿಟಿಸಿಎಲ್ ವ್ಯಾಪ್ತಿಯ ಭೂಮಿಯಾಗಿದ್ದು, ಅದು ಕುಮಾರಸ್ವಾಮಿ ಅವರ ಬೇನಾಮಿ ಆಸ್ತಿ ಎಂದು ಗಂಭೀರ ಆರೋಪ ಮಾಡಿದರು. ಈ ಭೂಮಿಗೆ ಸಂಬಂಧಿಸಿದ ಕಾನೂನು ಉಲ್ಲಂಘನೆಗಳ ತನಿಖೆ ನಡೆಯುತ್ತಿದೆ ಎಂದರು.
ಬಿಡದಿ ಯೋಜನೆಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಅಧಿವೇಶನದಲ್ಲಿ ಮಂಡಿಸಿ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರ ನೀಡುವುದಾಗಿ ಹೆಚ್.ಸಿ. ಬಾಲಕೃಷ್ಣ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.