
ನವದೆಹಲಿ, 16 ಜುಲೈ (ಹಿ.ಸ.):
ಆ್ಯಂಕರ್:
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹರಿಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ದೇಶದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಜಿಂದ್–ಸೋನಿಪತ್ ಮಾರ್ಗದಲ್ಲಿ ಸಂಚರಿಸಲಿರುವ ಈ ರೈಲು ಸುಮಾರು 2,600 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಹೈಡ್ರೋಜನ್ನಿಂದಲೇ ವಿದ್ಯುತ್ ಉತ್ಪಾದಿಸಿಕೊಂಡು ಸಂಚರಿಸುವ ವಿಶೇಷತೆಯನ್ನು ಹೊಂದಿದೆ.
ರೈಲ್ವೆ ಸಚಿವಾಲಯದ ಪ್ರಕಾರ, ಈ ರೈಲು ಮೇಲ್ದರ್ಜೆಯ ವಿದ್ಯುತ್ ತಂತಿಗಳ ಅವಲಂಬನೆಯಿಲ್ಲದೆ ಹೈಡ್ರೋಜನ್ ಮತ್ತು ಗಾಳಿಯಲ್ಲಿರುವ ಆಮ್ಲಜನಕದ ಸಹಾಯದಿಂದ ವಿದ್ಯುತ್ ಉತ್ಪಾದಿಸುತ್ತದೆ. ರೈಲಿನಲ್ಲಿ ಎರಡು ಪವರ್ ಕಾರುಗಳು ಹಾಗೂ ಎಂಟು ಪ್ರಯಾಣಿಕರ ಬೋಗಿಗಳು ಸೇರಿ ಒಟ್ಟು 10 ಬೋಗಿಗಳಿದ್ದು, ಗರಿಷ್ಠ ಗಂಟೆಗೆ 110 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಜಿಂದ್–ಸೋನಿಪತ್ ಮಾರ್ಗದಲ್ಲಿ ಗಂಟೆಗೆ 75 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ.
ಹೈಡ್ರೋಜನ್ ಸೋರಿಕೆ, ಬೆಂಕಿ, ಹೊಗೆ ಹಾಗೂ ಅಧಿಕ ಉಷ್ಣಾಂಶವನ್ನು ಪತ್ತೆಹಚ್ಚುವ ಸುಧಾರಿತ ಸಂವೇದಕಗಳನ್ನು ಅಳವಡಿಸಲಾಗಿದ್ದು, ಯಾವುದೇ ತಾಂತ್ರಿಕ ದೋಷ ಕಂಡುಬಂದರೆ ಹೈಡ್ರೋಜನ್ ಪೂರೈಕೆ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುವ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ರೈಲಿಗಾಗಿ ಜಿಂದ್ನಲ್ಲಿ ದೇಶದ ಅತಿದೊಡ್ಡ ರೈಲ್ವೆ ಹೈಡ್ರೋಜನ್ ಇಂಧನ ತುಂಬುವ ಕೇಂದ್ರವನ್ನು ನಿರ್ಮಿಸಲಾಗಿದೆ. ಇಲ್ಲಿ ನೀರಿನಿಂದ ಹೈಡ್ರೋಜನ್ ಉತ್ಪಾದಿಸಿ ಸುರಕ್ಷಿತವಾಗಿ ಸಂಗ್ರಹಿಸಿ ರೈಲಿಗೆ ತುಂಬಲಾಗುತ್ತದೆ. ಅಗತ್ಯ ತಾಂತ್ರಿಕ ಹಾಗೂ ಸುರಕ್ಷತಾ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಜರ್ಮನಿಯ ಸ್ವತಂತ್ರ ಸಂಸ್ಥೆಯೂ ಸುರಕ್ಷತೆಯನ್ನು ಪ್ರಮಾಣೀಕರಿಸಿದೆ.
ರೈಲ್ವೆ ಸಚಿವಾಲಯದ ಮಾಹಿತಿ ಪ್ರಕಾರ, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ಗೆ ಉತ್ತೇಜನ ನೀಡುವ ಈ ಯೋಜನೆಯ ಅನುಭವದ ಆಧಾರದಲ್ಲಿ ಭವಿಷ್ಯದಲ್ಲಿ ಕಾಲ್ಕಾ–ಶಿಮ್ಲಾ ಸೇರಿದಂತೆ ಇತರ ಮಾರ್ಗಗಳಲ್ಲಿಯೂ ಹೈಡ್ರೋಜನ್ ರೈಲುಗಳನ್ನು ಸಂಚರಿಸುವ ಯೋಜನೆ ರೂಪಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.