
ಕೋಲಾರ,ಜು.೧೪ (ಹಿ.ಸ):
ಆ್ಯಂಕರ್ : ಒಳಚರಂಡಿ ಮಿಸ್ಸಿಂಗ್ ಲೈನ್ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಯಾವುದೇ ರಸ್ತೆಗಳ ಅಭಿವೃದ್ದಿ ಪಡಿಸುವುದಿಲ್ಲ ಅಲ್ಲಿ ತನಕ ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ಮನವಿ ಮಾಡಿದರು.
ನಗರದ ಚೌಡೇಶ್ವರಿ ನಗರಕ್ಕೆ ಮಂಗಳವಾರ ಭೇಟಿ ನೀಡಿ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಚೌಡೇಶ್ವರಿ ನಗರದ ಮೂಲಭೂತ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಸ್ಥಳಿಯ ಮುಖಂಡರು ಹಾಗೂ ಯುವಕರ ಜೊತೆ ಸಂಚರಿಸಿ ಪರಿಶೀಲನೆ ನಡೆಸಿ ಮಾತನಾಡಿದರು. ಚೌಡೇಶ್ವರಿ ನಗರದ ನಿವಾಸಿಗಳು ಹಿಂದೆ ನನ್ನನ್ನು ಭೇಟಿ ಮಾಡಿ ತಮ್ಮ ಭಾಗದಲ್ಲಿ ರಸ್ತೆ, ಚರಂಡಿ ಮತ್ತು ನೀರಿನ ಸಮಸ್ಯೆ ಇರುವ ಬಗ್ಗೆ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಚೌಡೇಶ್ವರಿ ತಾಯಿಯ ದರ್ಶನ ಪಡೆದು, ಸ್ಥಳ ಪರಿಶೀಲನೆ ನಡೆಸಲಾಗಿದೆ ಇಲ್ಲಿ ರಸ್ತೆ, ವಿದ್ಯುತ್ ಕಂಬಗಳು ಹಾಗೂ ಚರಂಡಿ ವ್ಯವಸ್ಥೆ ಇಲ್ಲದಿರುವುದು ನಿಜ. ಮುಖ್ಯ ರಸ್ತೆಯಿಂದ ಹೈವೇಗೆ ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ನಾಳೆಯಿಂದಲೇ ಆರಂಭಿಸಲಾಗುವುದು ಎಂದು ಭರವಸೆ ನೀಡಿದರಲ್ಲದೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚೌಡೇಶ್ವರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮತ್ತೊಂದು ಬೋರ್ವೆಲ್ಗೆ ಮೋಟಾರ್ ಅಳವಡಿಸುವ ಕೆಲಸವನ್ನು ಶೀಘ್ರದಲ್ಲೇ ಮಾಡಿಕೊಡುವುದಾಗಿ ತಿಳಿಸಿದರು. ಕೋಲಾರ ನಗರದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ೫೦ ಕೋಟಿ ರೂಪಾಯಿ ಹಾಗೂ ವೇಮಗಲ್ ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ೧೫ ಕೋಟಿ ರೂಪಾಯಿ ಅನುದಾನ ಲಭ್ಯವಿದೆ ನಮ್ಮ ಬಳಿ ಹಣವಿದ್ದರೂ ತಕ್ಷಣ ರಸ್ತೆ ನಿರ್ಮಾಣ ಮಾಡಲ್ಲ ಈಗ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರಸ್ತೆ ಮಾಡಿ, ನಾಳೆ ಯುಜಿಡಿ (ಒಳಚರಂಡಿ) ಲೈನ್ ಅಳವಡಿಸಲು ಮತ್ತೆ ರಸ್ತೆಯನ್ನು ಅಗೆದರೆ ಸಾರ್ವಜನಿಕರ ಹಣ ವ್ಯರ್ಥವಾಗುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟಲು ಮೊದಲು ಯುಜಿಡಿ ಕಾಮಗಾರಿ ಮುಗಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ನಗರದಲ್ಲಿ ಕೈಬಿಟ್ಟು ಹೋಗಿರುವ ಒಟ್ಟು ೬೭ ಕಿಲೋಮೀಟರ್ ಯುಜಿಡಿ ಮಿಸ್ಸಿಂಗ್ ಲೈನ್ಗಳ ಪೈಕಿ ಮೊದಲ ಹಂತದಲ್ಲಿ ೩೪ ಕಿಲೋಮೀಟರ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರೊಂದಿಗೆ ಕೋಲಾರಮ್ಮ ಕೆರೆ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿ ಬಳಿಯ ಕೋಡಿಕಣ್ಣೂರು ಕೆರೆ ಮಾರ್ಗವಾಗಿ ಹೋಗಿರುವ ಲೈನ್ಗಳನ್ನು ರಸ್ತೆ ಬದಿಗೆ ಶಿಫ್ಟ್ ಮಾಡುವ ಯೋಜನೆಗೂ ಯೋಜನೆ ಅನುಮೋದನೆಗೆ ನೀಡಲಾಗಿದೆ. ಇನ್ನೊಂದು ವಾರ ಅಥವಾ ೧೫ ದಿನಗಳಲ್ಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಜನರು ತಮ್ಮ ಭಾಗದ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಾಗ ಮಾತ್ರ ನಮಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ನಗರದ ಯುಜಿಡಿ ಮತ್ತು ಮಿಸ್ಸಿಂಗ್ ಲೈನ್ ಕನೆಕ್ಷನ್ ಮುಗಿಯುವವರೆಗೂ ಕೋಲಾರ ನಗರದ ಜನತೆ ಸ್ವಲ್ಪ ಸಹಕರಿಸಬೇಕು. ಒಮ್ಮೆ ಒಳಚರಂಡಿ ಮತ್ತು ಪ್ಲಾಂಟ್ ಕೆಲಸ ಮುಗಿದ ತಕ್ಷಣವೇ ಎಲ್ಲಾ ರಸ್ತೆಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿಕೊಡಲಾಗುವುದು,ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮೂರಂಡಹಳ್ಳಿ ಕ್ರಾಸ್, ಬಂಗಾರಪೇಟೆ ಮೂಲಕ ತಮಿಳುನಾಡು ಗಡಿಯವರೆಗಿನ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಮಾಡಲು ಈಗಾಗಲೇ ಡಿಪಿಆರ್ ಸಿದ್ಧವಾಗುತ್ತಿದೆ. ಬಂಗಾರಪೇಟೆ ಬ್ರಿಡ್ಜ್ನಿಂದ ಚಿಕ್ಕಬಳ್ಳಾಪುರ ರೈಲ್ವೆ ಬ್ರಿಡ್ಜ್ವರೆಗಿನ ರಸ್ತೆಗೆ ಒಳಚರಂಡಿ ಲೈನ್ ಅಳವಡಿಸಿ, ಸಂಪೂರ್ಣವಾಗಿ ಸಿಮೆಂಟ್ ರಸ್ತೆಯನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು
ಜಿಲ್ಲಾ ಪಂಚಾಯತ್ ಕಚೇರಿ ವೃತ್ತದಿಂದ ಶ್ರೀನಿವಾಸಪುರಕ್ಕೆ ಸಂಪರ್ಕಿಸುವ ರಸ್ತೆಯ ದ್ವಿಪಥ ಕಾಮಗಾರಿಯನ್ನು ಕೈಗೆತ್ತುಕೊಂಡಿದ್ದು ಅತಿ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಕೋಲಾರಕ್ಕೆ ರಿಂಗ್ ರಸ್ತೆ ಡಿಪಿಆರ್ ನಡೆಯುತ್ತಿದೆ. ಕ್ಷೇತ್ರದ ಮುಂದಿನ ಬೇಡಿಕೆಗಳ ಪಟ್ಟಿಯನ್ನು ಸಿದ್ಧಪಡಿಸಿ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಯಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರ್ ಸ್ಥಳೀಯ ಮುಖಂಡರಾದ ರಾಮಕೃಷ್ಣ ತ್ಯಾಗರಾಜ್ ಹಾಗೂ ನಗರಸಭೆಯ ಮಾಜಿ ಸದಸ್ಯರು ಮತ್ತು ಚೌಡೇಶ್ವರಿ ನಗರದ ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್