ಗೋವಾದ ಬಹುಚರ್ಚಿತ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಕನ್ನಡಿಗ ಸೇರಿ ಮೂವರಿಗೆ ಆರೋಪಮುಕ್ತಿ
ಬೆಂಗಳೂರು/ಪಣಜಿ, 10 ಜುಲೈ (ಹಿ.ಸ.): ಆ್ಯಂಕರ್: ಗೋವಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಕನ್ನಡಿಗ ಲೋಕೇಶ್ ಪುಟ್ಟಸ್ವಾಮಿ ಸೇರಿದಂತೆ ಮೂವರು ಆರೋಪಿಗಳನ್ನು ಗೋವಾದ ಮರ್ಸೆಸ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆರೋಪ ರೂಪಿಸುವ ಹಂತದಲ್ಲೇ ಸಂಪೂರ್ಣ ಆರೋಪಮುಕ್ತಗೊ
ಗೋವಾದ ಬಹುಚರ್ಚಿತ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಕನ್ನಡಿಗ ಸೇರಿ ಮೂವರಿಗೆ ಆರೋಪಮುಕ್ತಿ


ಬೆಂಗಳೂರು/ಪಣಜಿ, 10 ಜುಲೈ (ಹಿ.ಸ.):

ಆ್ಯಂಕರ್:

ಗೋವಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಕನ್ನಡಿಗ ಲೋಕೇಶ್ ಪುಟ್ಟಸ್ವಾಮಿ ಸೇರಿದಂತೆ ಮೂವರು ಆರೋಪಿಗಳನ್ನು ಗೋವಾದ ಮರ್ಸೆಸ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆರೋಪ ರೂಪಿಸುವ ಹಂತದಲ್ಲೇ ಸಂಪೂರ್ಣ ಆರೋಪಮುಕ್ತಗೊಳಿಸಿದೆ. ಆರೋಪಿಗಳ ಪರ ಹಿರಿಯ ವಕೀಲ ಕೆ.ವಿ. ಧನಂಜಯ್ ಮಂಡಿಸಿದ ವಾದವನ್ನು ಪರಿಗಣಿಸಿದ ನ್ಯಾಯಾಲಯ, ಮೂವರ ವಿರುದ್ಧ ವಿಚಾರಣೆಗೆ ಮುಂದಾಗುವಷ್ಟು ಯಾವುದೇ ಅಪರಾಧದ ಸಾಕ್ಷ್ಯಾಧಾರಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶಿಲ್ಪಾ ಎಸ್. ಪಂಡಿತ್ ಅವರು ಜುಲೈ 8ರಂದು ಸೆಷನ್ಸ್ ಕೇಸ್ (302) ಸಂಖ್ಯೆ 1/2026ರಲ್ಲಿ ನೀಡಿದ ಆದೇಶದಲ್ಲಿ, ಬೆಂಗಳೂರಿನ ಮೈಸೂರು ರಸ್ತೆಯ ಕೆ.ಎಚ್. ರಂಗನಾಥ ಕಾಲೊನಿಯ ನಿವಾಸಿ ಹಾಗೂ ನಿರ್ಮಾಣ ಸ್ಥಳದ ಮೇಲ್ವಿಚಾರಕ 53 ವರ್ಷದ ಲೋಕೇಶ್ ಪುಟ್ಟಸ್ವಾಮಿ, ಜಾರ್ಖಂಡ್ ಮೂಲದ 20 ವರ್ಷದ ಜೆಸಿಬಿ ನಿರ್ವಾಹಕ ರೋಹಿತ್ ಕುಮಾರ್ ಪ್ರಜಾಪತಿ ಹಾಗೂ ತಮಿಳುನಾಡಿನ ಅಡುಗೆ ಕೆಲಸಗಾರ 36 ವರ್ಷದ ವಿಜಯ್ ಸುಪ್ಪನ್ ಅವರನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಕಲಂ 250ರ ಅಡಿಯಲ್ಲಿ ಆರೋಪಮುಕ್ತಗೊಳಿಸಿದರು.

ಪ್ರಕರಣವು 2025ರ ನವೆಂಬರ್ 5ರಂದು ಗೋವಾದ ಮೊರ್ಜಿಂನಲ್ಲಿ 63 ವರ್ಷದ ಉಮಕಾಂತ್ ರಘೋಬಾ ಖೋಟ್ ಅವರ ಸಾವಿನ ನಂತರ ದಾಖಲಾಗಿತ್ತು. ಅಕ್ರಮ ನಿರ್ಮಾಣವನ್ನು ವಿರೋಧಿಸಿದ್ದರಿಂದ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ತೆಲಂಗಾಣ ಮೂಲದ ಜಮೀನಿನ ಮಾಲೀಕ ಸೇರಿದಂತೆ ನಾಲ್ವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಬೆಂಗಳೂರಿನ ಲೋಕೇಶ್ ಪುಟ್ಟಸ್ವಾಮಿ ಉದ್ಯೋಗದ ನಿಮಿತ್ತ ನವೆಂಬರ್ 3ರಂದು ಗೋವಾಕ್ಕೆ ತೆರಳಿದ್ದು, ಎರಡು ದಿನಗಳಲ್ಲೇ ಅವರನ್ನು ಕೊಲೆ ಆರೋಪದಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅವರು ಆರು ತಿಂಗಳಿಗಿಂತ ಹೆಚ್ಚು ಕಾಲ ಕಾರಾಗೃಹದಲ್ಲಿದ್ದರು.

ಪ್ರಕರಣದ ವಿಚಾರಣೆ ಗೋವಾದಲ್ಲಿ ವ್ಯಾಪಕ ಗಮನ ಸೆಳೆದಿತ್ತು. ಆರೋಪಿಗಳು ಹೊರರಾಜ್ಯದವರಾಗಿದ್ದರಿಂದ ಅವರ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳು ನಡೆದಿದ್ದವು. ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ವ್ಯಕ್ತವಾಗಿತ್ತು.

ವಿಚಾರಣೆ ವೇಳೆ ಹಿರಿಯ ವಕೀಲ ಕೆ.ವಿ. ಧನಂಜಯ್ ಅವರು ತನಿಖಾ ದಾಖಲೆಗಳು, ಸಾಕ್ಷಿದಾರರ ಹೇಳಿಕೆಗಳು, ವೈದ್ಯಕೀಯ ವರದಿಗಳು ಹಾಗೂ ಅಧಿಕೃತ ದಾಖಲೆಗಳ ಆಧಾರದ ಮೇಲೆ ವಾದ ಮಂಡಿಸಿದರು. ಅವರೊಂದಿಗೆ ವಕೀಲರಾದ ಓಜಸ್ವಿ, ಅನನ್ಯ ಕೆ. ಮತ್ತು ಧೀರಜ್ ಎಸ್.ಜೆ. ಸಹಕರಿಸಿದ್ದರು.

ನ್ಯಾಯಾಲಯವು ಆರೋಪಪಟ್ಟಿಯಲ್ಲಿನ ಪ್ರತಿಯೊಬ್ಬ ಸಾಕ್ಷಿದಾರರ ಹೇಳಿಕೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಿತು. ನಿರ್ಮಾಣ ಸ್ಥಳದ ಕಾರ್ಮಿಕರು, ಗುತ್ತಿಗೆದಾರರು, ನಾಗರಿಕ ಇಂಜಿನಿಯರ್, ತಾಲ್ಲೂಕು ಆಡಳಿತದ ಅಧಿಕಾರಿಗಳು ಹಾಗೂ ಮೃತರ ಕುಟುಂಬ ಸದಸ್ಯರ ಹೇಳಿಕೆಗಳನ್ನು ವಿಶ್ಲೇಷಿಸಿತು. ಆರೋಪಿಗಳ ವಿರುದ್ಧ ನೇರ ಸಾಕ್ಷ್ಯಗಳಿಲ್ಲ ಎಂಬುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪ್ರಕರಣದ ಪ್ರಾಥಮಿಕ ದೂರಿನಲ್ಲಿ ಮೂವರು ಕಾರ್ಮಿಕರ ಹೆಸರೇ ಇರಲಿಲ್ಲ. ದೂರುದಾರರು ಜಮೀನಿನ ಮಾಲೀಕರ ಹೆಸರನ್ನು ಮಾತ್ರ ಉಲ್ಲೇಖಿಸಿ, ಉಳಿದವರನ್ನು ಗುರುತು ತಿಳಿಯದ ಸಹಚರರು ಎಂದು ಉಲ್ಲೇಖಿಸಿದ್ದರು. ಯಾವುದೇ ಸಾಕ್ಷಿದಾರರು ಆರೋಪಿಗಳು ಮೃತರ ಮೇಲೆ ಹಲ್ಲೆ ನಡೆಸಿರುವುದನ್ನು ನೋಡಿಲ್ಲ ಎಂದು ನ್ಯಾಯಾಲಯ ದಾಖಲಿಸಿದೆ. ಮಧ್ಯಾಹ್ನ ಒಂದು ಗಂಟೆಯಿಂದ ಎರಡು ಗಂಟೆಯವರೆಗೆ ಆರೋಪಿಗಳು ಕೆಲಸದ ಸ್ಥಳದಲ್ಲಿ ಕಾಣಿಸಲಿಲ್ಲ ಎಂಬ ಮಾಹಿತಿ ಮಾತ್ರ ಸಾಕ್ಷಿದಾರರ ಹೇಳಿಕೆಗಳಲ್ಲಿ ಇದೆ ಎಂದು ತಿಳಿಸಿದೆ.

ನಿರ್ಮಾಣ ಕಾರ್ಯಕ್ಕೆ ಪಟ್ಟಣ ಮತ್ತು ಗ್ರಾಮ ಯೋಜನಾ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯಿಂದ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದಿರುವುದು ದಾಖಲೆಗಳಿಂದ ದೃಢಪಟ್ಟಿದೆ. ಮೃತರು ಆ ಜಮೀನಿನ ಕಾನೂನುಬದ್ಧ ಬಾಡಿಗೆದಾರರಾಗಿದ್ದರು ಎಂಬುದಕ್ಕೂ ಯಾವುದೇ ಅಧಿಕೃತ ದಾಖಲೆ ಇಲ್ಲ ಎಂದು ನ್ಯಾಯಾಲಯ ಗಮನಿಸಿದೆ.

ವೈದ್ಯಕೀಯ ವರದಿಯಲ್ಲಿಯೂ ಆರೋಪಿಗಳಿಗೆ ಅನುಕೂಲಕರ ಅಂಶಗಳಿವೆ ಎಂದು ನ್ಯಾಯಾಲಯ ಹೇಳಿದೆ. ಮೃತರ ಹೃದಯ ಸಾಮಾನ್ಯ ಗಾತ್ರಕ್ಕಿಂತ ಬಹಳ ದೊಡ್ಡದಾಗಿದ್ದು, ಪ್ರಮುಖ ರಕ್ತನಾಳದಲ್ಲಿ 80ರಿಂದ 90 ಶೇಕಡಾ ತಡೆ ಕಂಡುಬಂದಿತ್ತು. ತಲೆಯ ಹಿಂಭಾಗದಲ್ಲಿ ಯಾವುದೇ ಗಂಭೀರ ಗಾಯ, ತಲೆಬುರುಡೆ ಮುರಿತ ಅಥವಾ ಮೆದುಳಿನೊಳಗಿನ ರಕ್ತಸ್ರಾವ ಇರಲಿಲ್ಲ. ಮೃತರ ವಯಸ್ಸು ಹಾಗೂ ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿದರೆ ಸಣ್ಣ ಪ್ರಮಾಣದ ಆಘಾತವೂ ಸಾವಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿರುವುದನ್ನು ನ್ಯಾಯಾಲಯ ಉಲ್ಲೇಖಿಸಿದೆ.

ಸಹೋದ್ಯೋಗಿಗಳ ನಡುವಿನ ದೂರವಾಣಿ ಕರೆಗಳು ಅಥವಾ ಉದ್ಯೋಗದಾತರು ಲೋಕೇಶ್ ಅವರ ವಿಮಾನ ಟಿಕೆಟ್ ಕಾಯ್ದಿರಿಸಿರುವುದನ್ನು ಅಪರಾಧದ ಸಾಕ್ಷ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಪ್ರಕರಣದಲ್ಲಿ ಮೇ 18ರಂದು ಇದೇ ನ್ಯಾಯಾಲಯ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಇದೀಗ ಆರೋಪ ರೂಪಿಸುವ ಹಂತದಲ್ಲೇ ಅವರನ್ನು ಸಂಪೂರ್ಣ ಆರೋಪಮುಕ್ತಗೊಳಿಸಿರುವುದು ಅಪರೂಪದ ಬೆಳವಣಿಗೆಯಾಗಿದ್ದು, ಗೋವಾ, ಬೆಂಗಳೂರು ಹಾಗೂ ದೆಹಲಿಯ ಕಾನೂನು ವಲಯಗಳಲ್ಲಿ ಈ ತೀರ್ಪು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ನ್ಯಾಯಾಲಯದ ಈ ಆದೇಶದಿಂದ ಮೂವರು ಆರೋಪಿಗಳ ವಿರುದ್ಧದ ಕ್ರಿಮಿನಲ್ ವಿಚಾರಣೆ ಆರಂಭವಾಗುವ ಮುನ್ನವೇ ಅಂತ್ಯಗೊಂಡಿದ್ದು, ಅವರ ವಿರುದ್ಧ ವಿಚಾರಣೆ ಮುಂದುವರಿಸಲು ಯಾವುದೇ ಸಮರ್ಪಕ ಆಧಾರವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande