
ಕೋಲಾರ, ೦೮ ಮೇ (ಹಿ.ಸ) :
ಆ್ಯಂಕರ್ : ಅರಣ್ಯ ಇಲಾಖೆಯಿಂದ ಕಂದಾಯ ಭೂಮಿ ೧೮೦ ಎಕರೆ ಜೊತೆಗೆ ರೈತರ ಹಿಡುವಳಿ ಜಮೀನು ೨೦೦ ಎಕರೆ ನಾಶ ಮಾಡಿದ್ದಾರೆ ಎಂದು ಜಂಟಿ ಸರ್ವೆಯಲ್ಲಿ ಸಾಬೀತಾಗಿದ್ದು ಕೂಡಲೇ ತಹಶಿಲ್ದಾರ್ ನಕ್ಷೆಗೆ ಸಹಿ ಮಾಡಿ ರೈತರಿಗೆ ಮತ್ತು ಅರಣ್ಯ ಇಲಾಖೆಗೆ ನೀಡುವಂತೆ ಒತ್ತಾಯಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿ, ಪ್ರಾಂತ ರೈತ ಸಂಘ ಹಾಗೂ ರೈತರು ಶುಕ್ರವಾರ ತಹಶಿಲ್ದಾರ್ ಕಛೇರಿ ಮುಂದೆ ಧರಣಿ ನಡೆಸಿದರು.
ಭೂ ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ಆರ್ ಶ್ರೀನಿವಾಸನ್ ಮಾತನಾಡಿ ಕೋಲಾರ ತಾಲೂಕು ಹುತ್ತೂರು ಹೋಬಳಿ ಶಿಳ್ಳೆಂಗೆರೆ, ಹರಟಿ, ಮಲ್ಲಂಡಹಳ್ಳಿ, ಕೋಟಿಗಾನಹಳ್ಳಿ, ಅಬ್ಬಣಿ, ಹಾಗೂ ಹರಳಕುಂಟೆ ಜಮೀನುಗಳ ಕಂದಾಯ ದಾಖಲೆಗಳನ್ನು ಮತ್ತು ಅರಣ್ಯ ಇಲಾಖೆಯ ೧೯೪೧ ಫಾರೆಸ್ಟ್ ಸೆಟಲ್ಮೆಂಟ್ ಕಾಫಿಯನ್ನು ಪರಿಶೀಲಿಸದೆ ಅಂದಿನ ಭೂ ದಾಖಲೆಗಳ ಸರ್ವೆಯರ್ ಸಂದೀಪ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ೧೦೦ ವರ್ಷದ ಹಿಂದಿನ ದಾಖಲೆಗಳನ್ನು ಮರೆಮಾಚಿ ರೈತರಿಗೆ ನೀಡಿದಂತಹ ಕಂದಾಯ ಭೂಮಿಯಲ್ಲಿ ಬೆಳೆಗಳನ್ನು, ಪಾಲಿ ಹೌಸ್ ಕಾಂಪೌ0ಡ್ ಮರಗಳನ್ನು ಕಳೆದ ವರ್ಷ ಮಾರ್ಚ್ ನಲ್ಲಿ ಮೂರು ದಿನಗಳ ಕಾಲ ಸುಮಾರು ೧೦ ರಿಂದ ೧೫ ಜೆಸಿಬಿಗಳೊಂದಿಗೆ ಅರಣ್ಯ ಒತ್ತುವರಿಯ ಹೆಸರಿನಲ್ಲಿ ಪೋಲಿಸ್ ಇಲಾಖೆಯ ಅಧಿಕಾರಿಗಳ ಬೆಂಗಾಲಿನಲ್ಲಿ ನಾಶ ಮಾಡಿ ರೈತರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಅರಣ್ಯ ಇಲಾಖೆಯ ದೌರ್ಜನ್ಯ ವಿರುದ್ದ ರೈತರು ನ್ಯಾಯಾಲಯಕ್ಕೆ ಹೋಗಿದ್ದು ಅದರಂತೆ ಜಂಟಿ ಸರ್ವೆ ಮಾಡಲು ಆದೇಶಿಸಿದ್ದಾರೆ, ಜಿಲ್ಲಾಧಿಕಾರಿ ಜಿಲ್ಲಾ ಉಸ್ತುವಾರಿ ಸಚಿವರು ಜನಪ್ರತಿನಿಧಿಗಳು ಜಂಟಿ ಸರ್ವೆ ಮಾಡಿ ರೈತರ ಹಿಡುವಳಿ ಜಮೀನುಗಳು ಯಾವುದು ಅರಣ್ಯ ಭೂಮಿ ಯಾವುದು ಎಂಬುದನ್ನು ಸ್ಪಷ್ಟವಾಗಿ ನಕ್ಷೆ ತಯಾರಿಸಿ ಎಂದು ತಹಶಿಲ್ದಾರ್ ರವರಿಗೆ ಆದೇಶಿಸಿದ್ದು ಅದರಂತೆ ತಹಶೀಲ್ದಾರ್ ತಾಲ್ಲೂಕು ಭೂ ಮಾಪನ ಅಧಿಕಾರಿಗಳು ಕಳೆದ ವರ್ಷ ಆಗಸ್ಟ್ ನಲ್ಲಿ ಮರು ಜಂಟಿ ಅಳತೆ ಮಾಡಲು ಕಂದಾಯ ಇಲಾಖೆಯೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತರು ಭಾಗವಹಿಸಲು ಆದೇಶ ಮಾಡಿದ್ದರು ಎಂದು ವಿವರಿಸಿದರು.
ಕಿರು ಅರಣ್ಯ ಪ್ರದೇಶವನ್ನು ರಾಜ್ಯ ಅರಣ್ಯವನ್ನಾಗಿ ಅಂದಿನ ಮಹಾರಾಜರ ಕಾಲದಲ್ಲಿಯೇ ೧೯೪೧ರಲ್ಲಿ ಫೈನಲ್ ಸೆಟಲ್ಮೆಂಟ್ ಮಾಡಿದ್ದಾರೆ. ಇದಕ್ಕೆ ಸಂಬ0ಧಪಟ್ಟ0ತೆ ಎಲ್ಲಾ ದಾಖಲೆಗಳು ಇವೆ. ಈ ಸಂಬ0ಧ ಅನೇಕ ಬಾರಿ ಇಲಾಖೆಯಲ್ಲಿ ಇರುವುದರಿಂದ ಕೋಲಾರ ಜಿಲ್ಲೆಯಲ್ಲಿ ಅರಣ್ಯ ಭೂಮಿಯನ್ನು ರೈತರಿಗೆ ಕಂದಾಯ ಇಲಾಖೆ ನೀಡಿರುವುದಿಲ್ಲ. ಆದ್ದರಿಂದಲೇ ಈ ಭೂಮಿಗಳು ಯಾವುದೇ ಎಸ್.ಐ.ಟಿ. ವ್ಯಾಪ್ತಿಗೆ ಒಳಪಡುವುದಿಲ್ಲ ಅರಣ್ಯ ಇಲಾಖೆಯವರು ಅನವಶ್ಯಕವಾಗಿ ಕಿರು ಅರಣ್ಯ ಪ್ರದೇಶಗಳು ಇವೆ ಎಂದು ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆ. ಅದಕ್ಕೆ ಸಂಬ0ಧಪಟ್ಟ0ತಹ ಸರಿಯಾದ ದಾಖಲೆಗಳು ಇರುವುದಿಲ್ಲ ಎಂಬುದಕ್ಕೆ ಅಬ್ಬಣಿ ಕಿರು ಅರಣ್ಯವೇ ಸಾಕ್ಷಿಯಾಗಿದೆ ಎಂದರು.
ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯಕ್ಕೆ ಒಳಗಾದ ರೈತರು ಹೋರಾಟ ಮಾಡಿ, ಜಿಲ್ಲಾಧಿಕಾರಿಗಳನ್ನು ಮತ್ತು ಕಂದಾಯ ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿ ಜಂಟಿ ಸರ್ವೆಯ ನಕ್ಷೆಯನ್ನು ನೀಡುವಂತೆ ಈ ಹಿಂದೆ ತಾಲೂಕು ಕಚೇರಿ ಮುಂದೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಭೂಸಂತ್ರಸ್ತರ ಹೋರಾಟ ಸಮಿತಿಯ ಸದಸ್ಯರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಸತ್ಯಾಗ್ರಹವನ್ನು ಮಾಡಿದ್ದು, ಇದುವರೆಗೂ ಜಂಟಿ ಸರ್ವೆ ನಕ್ಷೆ ನೀಡಿರುವುದಿಲ್ಲ. ತಾಲ್ಲೂಕು ತಹಶೀಲ್ದಾರ್ ರವರು ಜಂಟಿ ಸರ್ವೆ ನಕ್ಷೆಗೆ ಸಹಿ ಮಾಡಿ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭೂ ಸಂತ್ರಸ್ತರ ಹೋರಾಟ ಸಮಿತಿಯ ಸಂಚಾಲಕ ಸಿಪಿಎಂ ಗೋಪಾಲ್, ಹರಟಿ ಪ್ರಕಾಶ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ ಆರ್ ಸೂರ್ಯನಾರಾಯಣ ಜಿಲ್ಲಾಧ್ಯಕ್ಷ ಎನ್.ಎನ್ ಶ್ರೀರಾಮ್ ತಾಲೂಕು ಅಧ್ಯಕ್ಷ ವೆಂಕಟೇಶಪ್ಪ, ಕಾರ್ಯದರ್ಶಿ ನಾರಾಯಣರೆಡ್ಡಿ, ಜಿಲ್ಲಾ ಮುಖಂಡರಾದ ಶ್ರೀಧರ್, ಸೋಮಶೇಖರ್ ಗೌಡ, ಚಿನ್ನಮ್ಮ, ಬಿ.ಜಿ ಆನಂದ್, ವೆಂಕಟರಮಣಪ್ಪ ಭಟ್ರಹಳ್ಳಿ ಮಂಜುನಾಥ್, ಶ್ರೀನಿವಾಸ್ ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್