
ಬೆಂಗಳೂರು, 08 ಮೇ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, “ತಮಿಳುನಾಡು ರಾಜಕೀಯದ ಬಗ್ಗೆ ಬಿ.ಎಲ್. ಸಂತೋಷ್ ಉಪನ್ಯಾಸ ನೀಡುತ್ತಿರುವುದು ಈ ದಶಕದ ದೊಡ್ಡ ತಮಾಷೆ. ತಮಿಳುನಾಡಿನಲ್ಲಿ ರಾಜಕೀಯವಾಗಿ ಅಸ್ತಿತ್ವವಿಲ್ಲದ ಬಿಜೆಪಿ ಅಲ್ಲಿನ ಚುನಾವಣಾ ರಾಜಕೀಯದಲ್ಲಿ ಗಂಭೀರ ಪಾತ್ರಧಾರಿಯೇ ಅಲ್ಲ” ಎಂದು ಟೀಕಿಸಿದ್ದಾರೆ.
ಭಾರತೀಯ ಜನತಾ ಪಕ್ಷ ಮೊದಲು ತಮಿಳುನಾಡಿನಲ್ಲಿ ಮೈತ್ರಿಗಳ ನೆರವಿಲ್ಲದೆ ಸ್ವಂತ ಬಲದ ಮೇಲೆ ಎರಡು ಅಂಕಿ ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ತೋರಿಸಲಿ. ನಂತರ ಇತರ ಪಕ್ಷಗಳ ಬಗ್ಗೆ ಮಾತನಾಡಲಿ” ಎಂದು ಕಿಡಿಕಾರಿದ್ದಾರೆ.
ತಮಿಳುನಾಡಿನ ಜನರು ಕೋಮು ರಾಜಕೀಯ, ಹಿಂದಿ ಹೇರಿಕೆ ಹಾಗೂ ‘ಒಡೆದು ಆಳುವ’ ರಾಜಕೀಯವನ್ನು ಹಲವು ಬಾರಿ ತಿರಸ್ಕರಿಸಿದ್ದಾರೆ ಎಂದು ಹೇಳಿದ ಅವರು, “ರಾಜ್ಯದ ಭವಿಷ್ಯವನ್ನು ತಮಿಳುನಾಡಿನ ಜನರೇ ನಿರ್ಧರಿಸುತ್ತಾರೆ. ದೆಹಲಿಯ ಪ್ರಚಾರ ಯಂತ್ರವಲ್ಲ” ಎಂದು ಹೇಳಿದ್ದಾರೆ.
ಮೈತ್ರಿ ರಾಜಕೀಯದ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, “ಜನರ ನಂಬಿಕೆ ಮತ್ತು ವಿಶ್ವಾಸದ ಮೇಲೆ ಮೈತ್ರಿಗಳು ನಿರ್ಮಾಣವಾಗುತ್ತವೆ. ಆದರೆ ಜಾರಿ ನಿರ್ದೇಶನಾಲಯದ ದಾಳಿಗಳು, ರಾಜ್ಯಪಾಲರ ಹಸ್ತಕ್ಷೇಪ, ಕುದುರೆ ವ್ಯಾಪಾರ ಹಾಗೂ ಹಿಂಬಾಗಿಲಿನ ರಾಜಕೀಯದ ಮೂಲಕ ಮೈತ್ರಿಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa