

ಬಳ್ಳಾರಿ, 07 ಮೇ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಸಂಗಂ ಟ್ರಸ್ಟ್ (ರಿ) ಜ್ಞಾನಾಮೃತ ಕಾಲೇಜಿನಲ್ಲಿ ಮೇ 9 ಮತ್ತು 10ರಂದು ಎರಡು ದಿನಗಳ ಅಂತಾರಾಜ್ಯ ಮಟ್ಟದ ಸಾಹಿತ್ಯ ವಿಚಾರ ಸಂಕಿರಣ ಹಾಗೂ ದ್ರಾವಿಡ ಭಾಷಾ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ.
ಸಂಗಂ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಅವರು ಸುದ್ದಿಗಾರರಿಗೆ ಗುರುವಾರ ಈ ಮಾಹಿತಿ ನೀಡಿದ್ದು, ಬಳ್ಳಾರಿಗೆ ವಿಶ್ವಮಟ್ಟದ ಸಾಹಿತ್ಯ ಕಳೆಯನ್ನು ತರುವ ಉದ್ದೇಶದಿಂದ 2022ರಲ್ಲಿ `ವಿಶ್ವಕವಿ ಸಮ್ಮೇಳನ'ವನ್ನು ಯಶಸ್ವಿಯಾಗಿ ನೆರವೇರಿಸಿದೆ. ಈ ಬಾರಿ ದ್ರಾವಿಡ ನುಡಿಗಳ ಸಾಹಿತ್ಯ ಪರಂಪರೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ `ದ್ರಾವಿಡ ಬಳಗ ಭಾಷಾ ಬಾಂಧವ್ಯ'ದ ಸರಣಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಪ್ರಸ್ತುತ ಕನ್ನಡ-ತೆಲುಗು ಸಾಹಿತ್ಯದ ನುಡಿ ಸಾಂಗತ್ಯ ಕುರಿತು ಚರ್ಚೆಗಳು ನಡೆಯಲಿವೆ. 50ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಸಾಹಿತಿಗಳು, ಕಲಾವಿದರು ಎರೆಡು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಮೇ 9ರಂದು ಸಮಾರಂಭವನ್ನು ಓ.ಎಲ್. ನಾಗಭೂಷಣಸ್ವಾಮಿ ಅವರು ಉದ್ಘಾಟಿಸಲಿದ್ದು, ಡಾ. ಅರವಿಂದ ಪಟೇಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ನ್ಯಾಷನಲ್ ಬುಕ್ ಟ್ರಸ್ಟ್ನ ಡಾ. ಪತ್ತಿಪಾಕ ಮೋಹನ್ ಅವರು ಮುಖ್ಯ ಅತಿಥಿಗಳಾಗಿದ್ದಾರೆ.
ಕಾವ್ಯ ಸಂವಾದದಲ್ಲಿ ಚಿದಾನಂದ ಸಾಲಿ, ರವಿಕುಮಾರ್ ಟೆಲೆಕ್ಸ್, ಭುವನಾ ಹಿರೇಮಠ, ನಾಗಣ್ಣ ಕಿಲಾರಿ (ಕನ್ನಡ) ಹಾಗೂ ತೆಲುಗು ಭಾಷೆಯ ತಗುಳ ಗೋಪಾಲ, ಕಲ್ಯಾಣ ಕುಂಜು, ಬಾಲಸುಧಾಕರ ಮೌಳಿ ಭಾಗವಹಿಸಲಿದ್ದಾರೆ. ಪ್ರಶಸ್ತಿ ಹಂತದ ಐದು ಮಂದಿ ಕವಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಅಮರೇಶ್ ನುಗಡೋಣಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ವೈ.ಸಿ. ಯೋಗಾನಂದ ರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ.
ಮೇ 10 ರಂದು ಕಥಾ ಸಮಯದಲ್ಲಿ ಮಾರುತಿ ಪೌರೋಹಿತಂ, ಪೂರ್ಣಿಮಾ ಮಾಳಿಗೆಮನಿ, ಶರಣಬಸವ ಗುಡದಿನ್ನಿ ಹಾಗೂ ಮೇಘನಾಥ ರೆಡ್ಡಿ ಅವರು ಭಾಗವಹಿಸಲಿದ್ದಾರೆ. `ಯುವ ಪ್ರಕಾಶಕರ ತವಕ-ತಲ್ಲಣ'ಗಳ ಗೋಷ್ಠಿಯಲ್ಲಿ ರಾಜೇಂದ್ರ ಪ್ರಸಾದ್, ಮಮತಾ ಸೂರ್ಯಕೀರ್ತಿ, ಚಾಂದ್ ಕವಿಚಂದ್ರ, ಶ್ರೀದಿವ್ಯ ಹಾಗೂ ಮಲ್ಲಿಕಾರ್ಜುನ್ ಶೇಷುಕೊರ್ಲಪಾಟಿ ಅವರು ಪಾಲ್ಗೊಳ್ಳಲಿದ್ದಾರೆ.
ಸಂಜೆಯ ಕವಿಸಮಯದಲ್ಲಿ ನಾಗಿಣಿ ಅಪ್ಪಸಾನಿ, ಲಕ್ಷ್ಮಣ್ .ವಿ.ಎ., ಸದಾಶಿವ ಸೊರಟೂರು ಹಾಗೂ ಆಶಾ ಜಗದೀಶ ಅವರು ಕವನ ವಾಚಿಸಲಿದ್ದಾರೆ. 2025ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಮರೇಶ್ ನುಗಡೋಣಿ ಅವರೊಂದಿಗೆ ವಿಶೇಷ ಸಂವಾದ ಪಲ್ಲವ ವೆಂಕಟೇಶ್ ಅವರಿಂದ. ರಾಜಶೇಖರ ಹಳೆಮನೆ ಹಾಗೂ ಮಂಜುಳಾ ಗೋನಾಳ್ ಅವರಿಂದ ಮಾತುಕತೆ ನಡೆಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ವೈ.ಸಿ. ಯೋಗಾನಂದ ರೆಡ್ಡಿ, ಬಸವರಾಜ್, ವೀರೇಶ್, ದಸ್ತಗಿರಿಸಾಬ್, ನಾಗರಾಜ್ ಬಸರಕೋಡು ಸೇರಿ ಸಾಹಿತಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್