


ಬಳ್ಳಾರಿ, 29 ಮೇ (ಹಿ.ಸ.) :
ಆ್ಯಂಕರ್ : ಮಣ್ಣಿನ ಸಾವಯವ ಅಂಶ ಹಾಗೂ ಫಲವತ್ತತೆಯನ್ನು ಸುಧಾರಿಸುವಲ್ಲಿ ಹಸಿರು ಗೊಬ್ಬರದ ಪಾತ್ರ ಅನನ್ಯವಾಗಿದೆ ಎಂದು ಐಸಿಎಆರ್-ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ (ಮಣ್ಣು ವಿಜ್ಞಾನ) ಡಾ.ಕೆ.ರಾಜನ್ ಅವರು ಹೇಳಿದರು.
ಐಸಿಎಆರ್-ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಪ್ರಾದೇಶಿಕ ಕೇಂದ್ರ ವತಿಯಿಂದ ಬುಡಕಟ್ಟು ಉಪ ಯೋಜನೆ ಅಡಿ ಮತ್ತಾಜನಹಳ್ಳಿ ಗ್ರಾಮದಲ್ಲಿ ಸ್ಥಿತ ಸ್ಥಳದಲ್ಲಿಯೆ ಹಸಿರೆಲೆ ಗೊಬ್ಬರ: ಮಣ್ಣಿನ ಸಾವಯವ ಪದಾರ್ಥ ಮತ್ತು ಫಲವತ್ತತೆಯನ್ನು ಹೆಚ್ಚಿಸುವುದು ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರು ತಮ್ಮ ಜಮೀನುಗಳಲ್ಲಿ ಸುನ್ಹೆಂಪ್ (ಸೆಣಬು), ಡೈಂಚಾ, ಗೋವಿನ ಜೋಳ ಮತ್ತು ಉದ್ದು ಮುಂತಾದ ಹಸಿರು ಗೊಬ್ಬರದ ಬೆಳೆಗಳನ್ನು ನಿಯಮಿತವಾಗಿ ಬಳಸಬೇಕು ಎಂದು ರೈತರಿಗೆ ಕರೆ ನೀಡಿದರು.
ಬೆಳೆಗಳಿಗೆ ಪೋಷಕಾಂಶಗಳ ಪೂರೈಕೆ, ಸಾರಜನಕ ಸ್ಥಿರೀಕರಣ ಹಾಗೂ ಮಣ್ಣಿನ ಜೈವಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಈ ಬೆಳೆಗಳ ಪ್ರಾಮುಖ್ಯತೆಯನ್ನು ಚಿತ್ರಗಳ ಮೂಲಕ ವಿವರಿಸಿದ ಅವರು, ಮಣ್ಣಿನ ದೀರ್ಘಕಾಲೀನ ಉತ್ಪಾದಕತೆಗಾಗಿ ಪ್ರತಿ ವರ್ಷ ತಪ್ಪದೇ ಹಸಿರೆಲೆ ಗೊಬ್ಬರವನ್ನು ಮಣ್ಣಿಗೆ ಸೇರಿಸಲು ರೈತರಲ್ಲಿ ಮನವಿ ಮಾಡಿದರು.
ಹಿರಿಯ ವಿಜ್ಞಾನಿ (ಅರಣ್ಯ) ಡಾ. ರಮೇಶ ಎಂ.ಎನ್. ಅವರು ಮಾತನಾಡಿ, ರೈತರು ಕೃಷಿ ಹೊಲಗಳ ಬದುಗಳ ಮೇಲೆ ಸ್ಥಳೀಯವಾಗಿ ಲಭ್ಯವಿರುವ ಜೀವಂತ ಹಸಿರುಪೊದೆಗಳನ್ನು ಬೆಳೆಸುವ ಮೂಲಕ ಮಣ್ಣನ್ನು ಸಾವಯವ ವಸ್ತುಗಳಿಂದ ಸಮೃದ್ಧಗೊಳಿಸಬಹುದು. ಇದು ರಾಸಾಯನಿಕ ಗೊಬ್ಬರಗಳ ಮೇಲಿನ ವೆಚ್ಚ ಮತ್ತು ಬೇಡಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದರು.
ರೈತರು ಮನೆಯಲ್ಲಿ ತಯಾರಾಗುವ ಕುರಿ ಮತ್ತು ಮೇಕೆ ಗೊಬ್ಬರವನ್ನು ಹೊರಗಡೆ ಮಾರಾಟ ಮಾಡುವ ಬದಲು, ತಮ್ಮದೇ ಭೂಮಿಯ ದೀರ್ಘಕಾಲೀನ ಸುಸ್ಥಿರತೆ ಹಾಗೂ ಉತ್ಪಾದಕತೆಯನ್ನು ಕಾಯ್ದುಕೊಳ್ಳಲು ಸ್ವಂತ ಜಮೀನಿಗೆ ಬಳಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರಜನಕ ಸ್ಥಿರೀಕರಣ ಸಾಮರ್ಥ್ಯ ಹೊಂದಿರುವ ಗ್ಲಿರಿಸಿಡಿಯಾ (ಗೊಬ್ಬರದ ಗಿಡ), ಹೊಂಗೆ, ಸುಬಾಬುಲ್, ತುಗ್ಗಲಿ, ಅಗಸೆ ಮತ್ತು ಹಾಲುವಾಣ ಮುಂತಾದ ಮರಗಳ ಪ್ರಭೇದಗಳ ಬಗ್ಗೆ ಅವರು ಮಾಹಿತಿ ನೀಡಿದರು. ಇದರೊಂದಿಗೆ ಹುರುಳಿ, ಹೆಡ್ಜ್ ಲ್ಯೂಸರ್ನ್ ಹಾಗೂ ಸ್ಟೈಲೋಸಾಂಥೆಸ್ ಸ್ಕ್ಯಾಬ್ರಾ ಸೇರಿದಂತೆ ಸ್ಥಳೀಯ ಹಸಿರು ಗೊಬ್ಬರದ ಬೆಳೆಗಳ ಪ್ರಯೋಜನಗಳನ್ನು ಪರಿಚಯಿಸಿದರು.
ಜಾಗೃತಿ ಅಭಿಯಾನದಲ್ಲಿ ಮತ್ತಾಜನಹಳ್ಳಿ ಗ್ರಾಮದ ಒಟ್ಟು 56 ರೈತರು ಅತ್ಯಂತ ಆಸಕ್ತಿಯಿಂದ ಭಾಗವಹಿಸಿದ್ದರು. ಇದರಲ್ಲಿ 41 ಮಹಿಳಾ ರೈತರು ಹಾಗೂ 15 ಪುರುಷ ರೈತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್