
ಕೋಲಾರ, ೨೮ ಮೇ (ಹಿ.ಸ) :
ಆ್ಯಂಕರ್ : ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಕೋಲಾರದಲ್ಲಿ ಮುಸ್ಲೀಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಕೋಲಾರ ನಗರದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ರಸ್ತೆಯ ಈದ್ಗಾ ಮೈದಾನದಲ್ಲಿ ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈದ್ ಉಲ್ ಜುûಹಾ ಪ್ರಾರ್ಥನೆಯೊಂದಿಗೆ ಮುಸ್ಲೀಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಿದರು. ಸಮುದಾಯ ಹೆಚ್ಚಿರುವ ನಗರದ ಈದ್ಗಾ ಮೈದಾನ ಮಾತ್ರವಲ್ಲದೇ ನಗರದ ಕ್ಲಾಕ್ಟವರ್ ಮೂಲಕ ಹಾದು ಹೋಗುವ ಮೇಲ್ಸೇತುವೆ ಮೇಲೆ ನೂರಾರು ಸಂಖ್ಯೆಯಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ ನಗರದ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ನಗರದ ನೂರಾನಿ ಈದ್ಗಾ ಮೈದಾನ ಟಮಕದಲ್ಲಿ ಬೆಳಗ್ಗೆ ೭:೩೦ ಸಮಯದಲ್ಲಿ ಮೌಲಾನ ಮೌಲ್ವಿ ಅತೀಕ್ ಉರ್ ರೆಹಮಾನ್ ರಶಾದಿ ಪ್ರಾರ್ಥನೆ ನೆರವೇರಿಸಿದರು. ಚಿಕ್ಕಬಳ್ಳಾಪುರ ರಸ್ತೆ ಮೌಲಾ ಖಾಜ ಈದ್ಗಾ ಮೈದಾನದಲ್ಲಿ ಬೆಳಗ್ಗೆ ೯ ಗಂಟೆಗೆ ಮೌಲಾನ ಮೊಹಮ್ಮದ್ ರಜಾ ನೂರಿ ನೆರವೆರಿಸಿದರು. ಬೆಂಗಳೂರು ರಸ್ತೆ ಶಾಹಿ ಈದ್ಗಾ ಮೈದಾನದಲ್ಲಿ ಬೆಳಗ್ಗೆ ೧೦ ಗಂಟೆಗೆ ಮೌಲಾನ ಮೊಹಮ್ಮದ್ ಮುದಸೀರ್ ರಷಾದಿ ಸಾಹೇಬರು ಈದ್ ಉಲ್ ಜುಹಾ ಪ್ರಾರ್ಥನೆ ನೆರವೇರಿಸಿದರು.
ಮುಸ್ಲಿಂ ಬಾಂಧವರು ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು. ಕ್ಲಾಕ್ ಟವರ್, ರಹಮತ್ ನಗರದ ಮುಖ್ಯ ರಸ್ತೆಗಳಲ್ಲಿ ಹೊಸ ಬಟ್ಟೆ ತೊಟ್ಟ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಭ್ರಮಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್