ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಬರಪೂರ : ಶಾಸಕ ಕೊತ್ತೂರು ಮಂಜುನಾಥ್
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಬರಪೂರ ; ಶಾಸಕ ಕೊತ್ತೂರು ಮಂಜುನಾಥ್
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.


ಕೋಲಾರ, ಮೇ ೩೭ (ಹಿ.ಸ) :

ಆ್ಯಂಕರ್ : ಅಭಿವೃದ್ಧಿ ಕಾಮಗಾರಿ, ಗ್ಯಾರಂಟಿ ಯೋಜನೆ ಹಾಗೂ ಹಾಲಿನ ಪ್ರೋತ್ಸಾಹಧನ ಸೇರಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಮೂರು ವರ್ಷಗಳಲ್ಲಿ ಒಟ್ಟು ೩,೮೩೪.೩೭ ಕೋಟಿ ಅನುದಾನ ಸಿಕ್ಕಿದೆ. ಬರೀ ಅಭಿವೃದ್ಧಿ ಕಾಮಗಾರಿಗೆಂದೇ ೨,೫೮೩.೪೩ ಕೋಟಿ ಲಭಿಸಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರ ಹೊರವಲಯದ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಕೆಲಸ ಆಗಿಲ್ಲವೆಂದು ಮಾಜಿ ಸಂಸದ ಎಂ.ಮುನಿಸ್ವಾಮಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಛಲಪತಿ ಈಚೆಗೆ ಟೀಕಿಸಿದ್ದರು. ಅವರು ಟೀಕಿಸಿದ್ದರಲ್ಲಿ ತಪ್ಪಿಲ್ಲ. ಹೀಗಾಗಿ, ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೇವೆ ಹಾಗೂ ಏನಲ್ಲಾ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂಬುದ ಬಗ್ಗೆ ನಾವು ಜನರಿಗೆ ದಾಖಲೆಗಳ ಸಮೇತ ನಿಜವಾದ ಮಾಹಿತಿ ಕೊಡುತ್ತಿದ್ದೇವೆ ಎಂದರು.

ಬೇಕಾದರೆ ಗುಪ್ತಚರ ವರದಿಯನ್ನೂ ತೆಗೆದುಕೊಳ್ಳಲಿ. ನಾನು ಕಳೆದ ಮೂರು ವರ್ಷಗಳಲ್ಲಿ ಅಮೆರಿಕಕ್ಕೆ ಹೋಗಿದ್ದು ಬಿಟ್ಟರೆ ಬೇರೆ ಬಹುತೇಕ ಸಮಯದಲ್ಲಿ ಕ್ಷೇತ್ರದಲ್ಲೇ ಇದ್ದೇನೆ. ಈವರೆಗೆ ಕ್ಷೇತ್ರದ ಅಭಿವೃದ್ಧಿಗಾಗಿ ೨,೫೮೩.೪೩ ಕೊಟಿ ಅನುದಾನ ತರಲಾಗಿದೆ. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ೧,೧೬೨.೩೧ ಕೋಟಿ ಹಾಗೂ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನಕ್ಕೆ ೮೮.೬೩ ಕೋಟಿ ನೀಡಿದ್ದೇವೆ.

ವೈದ್ಯಕೀಯ ಕಾಲೇಜು ಸಂಬಂಧ ಪಿಪಿಪಿ ಮಾದರಿಗೆ ಟೀಕೆ ಹಾಗೂ ಆರೋಪ ಎದುರಾದ ಕಾರಣ ಕೈಬಿಡಲಾಯಿತು. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಸಂಬಂಧ ರಾಜ್ಯ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ ಆಗಿದ್ದು, ಕಾಮಗಾರಿಗೆ ೫೦೦ ಕೋಟಿ ಅನುದಾನ ಸಿಗಲಿದೆ. ಅರಣ್ಯ ಇಲಾಖೆ ಜಾಗ ಪಡೆದು ಅವರಿಗೆ ಬದಲಿ ಜಾಗ ಕೊಟ್ಟಿದ್ದೇವೆ. ವೈದ್ಯಕೀಯ ಕಾಲೇಜು ಸಂಬAಧ ಮುಂದೆ ಪ್ರವಾಸಿ ಮಂದಿರದ ಜಾಗವನ್ನು ಬಳಸಿಕೊಳ್ಳಬಹುದು. ಪ್ರವಾಸಿ ಮಂದಿರಕ್ಕೆ ಬೇರೆ ಕಡೆ ಆರು ಎಕರೆ ಜಾಗ ನಿಗದಿಪಡಿಸಿದ್ದೇವೆ. ಕೋಲಾರ ನಗರ ರಿಂಗ್ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಪ್ರಕ್ರಿಯೆ ಮಾಡಲಾಗುತ್ತಿದೆ. ಈ ಸಂಬಂಧ ಕೆಲಸವೂ ನಡೆಯುತ್ತಿದೆ ಎಂದು ಹೇಳಿದರು.

ಕೆಎಸ್ಎಚ್ಐಪಿನಿಂದ ಬೆಂಗಳೂರು ಗ್ರಾಮಾಂತರ ಗಡಿಯಿಂದ ಕೋಲಾರಕ್ಕೆ ೫೩೭.೪೬ ಕೋಟಿ ಹಾಗೂ ವೇಮಗಲ್ನಿಂದ ಮಾಲೂರು ಗಡಿವರೆಗೆ ೩೪೦.೩೪ ಕೋಟಿ ಸೇರಿ ಸುಮಾರು ೮೭೭.೮ ಕೋಟಿ ವೆಚ್ಚದಲ್ಲಿ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಾರ್ಚ್ನೊಳಗೆ ಕೋಲಾರ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ ಜನರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ನರಸೀಪುರದಲ್ಲಿ ಹೆಣ್ಣು ಮಕ್ಕಳಿಗೆ ವಸತಿ ನಿಲಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ಸುಮಾರು ೨೦೪ ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಕಟ್ಟಡ ಕಾಮಗಾರಿ ನಡೆಯುತ್ತಿವೆ. ಉನ್ನತ ಶಿಕ್ಷಣ ಇಲಾಖೆಯಿಂದ ಕ್ಷೇತ್ರಕ್ಕೆ ೧೦೩.೩೯ ಕೋಟಿ ಅನುದಾನ ಬಂದಿದೆ. ರಾಜ್ಯದ ಬೇರೆ ಯಾವುದೇ ತಾಲ್ಲೂಕಿಗೂ ಇಷ್ಟು ಹಣ ಬಂದಿಲ್ಲ. ಕೋಲಾರದಲ್ಲಿ ಗುರುಭವನ ನಿರ್ಮಾಣಕ್ಕೆ ಹಲವಾರು ಬಾರಿ ಭೂಮಿ ಪೂಜೆ ಮಾಡಲಾಗಿದೆ. ಎಲ್ಲಾ ಕಡೆ ಗುರುಭವನ ಕಟ್ಟಡ ಇದ್ದು, ನಮ್ಮಲ್ಲಿಯೇ ಇಲ್ಲ. ಗುರುಭವನಕ್ಕೆ ನಾನು ೨.೫ ಕೋಟಿ ಕೊಟ್ಟಿದ್ದೇವೆ. ಇದನ್ನು ನಮ್ಮ ಅವಧಿಯಲ್ಲಿ ನಿರ್ಮಿಸಲಾಗುವುದು. ನಗರಸಭೆಯಿಂದ ನಗರದಲ್ಲಿ ಎರಡು ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಕ್ರೀಡಾ ಇಲಾಖೆಯಿಂದ ನಗರದಲ್ಲಿ ಬ್ಯಾಸ್ಕೆಟ್ಬಾಲ್ ಕ್ರೀಡಾಂಗಣ ನವೀಕರಿಸಿದ್ದು, ಈಜುಕೊಳ ನಿರ್ಮಿಸಲಾಗುತ್ತಿದೆ. 'ಕುಡಾ' ಬಡಾವಣೆ ಅಭಿವೃದ್ಧಿ ನಿಂತು ಹೋಗಿತ್ತು ನಾವು ಮೂಲ ಸೌಕರ್ಯ ಕಲ್ಪಿಸಿದ್ದೇವೆ. ಯುಜಿಡಿ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.

ಎಪಿಎಂಸಿ ಮಾರುಕಟ್ಟೆಗೆ ೮೭ ಎಕರೆ ಜಾಗವನ್ನು ಕೋರಗೊಂಡನಹಳ್ಳಿ/ಕೋನೆಪುರ ಬಳಿ ಗುರುತಿಸಲಾಗಿದೆ. ೬೦.೩೦ ಎಕರೆ ಜಾಗ ಮಂಜೂರಾತಿ ಹಂತದಲ್ಲಿದೆ. ಇನ್ನೂ ೧೯.೧೦ ಎಕರೆ ಜಾಗ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಅಂಬೇಡ್ಕರ್ ಮ್ಯೂಸಿಯಂ ಮಾಡಲು ಜಾಗ ನಿಗದಿ ಮಾಡಲಾಗಿದೆ. ಸಭಾಂಗಣ ನಿರ್ಮಿಸಲಾಗುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ. ಕೋಲಾರ ನಗರದಲ್ಲಿ ದಟ್ಟಣೆ ಹೆಚ್ಚಿದ್ದು, ರಸ್ತೆ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಸಂಬಂಧ ಪ್ರಯತ್ನ ನಡೆಸುತ್ತಿದ್ದೇವೆ. ಆದರೆ, ತೆರವು ಕಾರ್ಯಾಚರನೆ ನಡೆಸಿ ನ್ಯಾಯಾಲಯ ಮೊರೆ ಹೋಗಬಹುದು, ರಾಜಕೀಯ ನಿರ್ಮಾಣವಾಗುತ್ತದೆ. ಹೀಗಾಗಿ, ಎಲ್ಲರ ಸಭೆ ಕರೆದು ಚರ್ಚಿಸಿ ಕ್ರಮ ವಹಿಸಬೇಕಾಗುತ್ತದೆ ಎಂದರು.

ರೈಲು ಯೋಜನೆಗೆ ಭೂಸ್ವಾಧೀನ ಕ್ರಮ ವಹಿಸಿಲ್ಲ ಎಂಬ ಸಂಸದರ ಆರೋಪಕ್ಕೆ ಪ್ರತಿಕ್ರಿಯಿಸಿ, ರೈಲು ಯೋಜನೆಗೆ ಜಮೀನು ಹಾಗೂ ಯೋಜನೆಗೆ ಶೇ ೫೦ ಹಣ ಕೊಡಬೇಕು ಎಂಬುದಾಗಿ ಕೇಳಿದ್ದಾರೆ. ಆದರೆ, ನಾವು ಜಾಗ ಕೊಡುತ್ತೇವೆ, ಯೋಜನೆ ಹಣವನ್ನು ಅವರೇ ಸಂಪೂರ್ಣವಾಗಿ ಭರಿಸಬೇಕು. ಈ ಸಂಬAಧ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರಬೇಕು. ಮುಳಬಾಗಿಲಿನಿಂದ ಕೋಲಾರ ಮೂಲಕ ವೈಟ್ಫೀಲ್ಡ್ಗೆ ರೈಲು ಬರಬೇಕು ಎಂದರು.

ಕೋಲಾರ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಸಂಬಂಧ ನಾವು ಸಿದ್ಧಪಡಿಸಿರುವ ಮಾಹಿತಿಯ ಬುಕ್ಲೆಟ್ ಅನ್ನು ಬಿಜೆಪಿ ಹಾಗೂ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಿಗೆ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳಿಸುತ್ತೇವೆ ಎಂದು ತಿಳಿಸಿದರು.

ಈ ಎಲ್ಲಾ ಅಭಿವೃದ್ಧಿ ಕೆಲಸ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್ ಹಾಗೂ ಎಂ.ಎಲ್.ಅನಿಲ್ ಕುಮಾರ್ ಕಾರಣ ಎಂದರು.

ಪ್ರಮುಖರ ಬೆಂಬಲ ಇರುವ ಕಾರಣ ಕೊತ್ತೂರು ಮಂಜುನಾಥ್ ಅವರಿಗೆ ಹೆಚ್ಚಿನ ಅನುದಾನ ಸಿಕ್ಕಿದೆ ಎಂಬುದಾಗಿ ಎಸ್.ಎನ್.ನಾರಾಯಣಸ್ವಾಮಿ ಹೇಳಿರುವುದು ಸತ್ಯ. ಮುಂದಿನ ಎರಡು ವರ್ಷ ಅವಧಿಯಲ್ಲಿ ಹಲವಾರು ಗುರಿ ಇಟ್ಟುಕೊಂಡಿದ್ದೇನೆ. ಸರ್ಕಾರಿ ವೈದ್ಯಕೀಯ ಕಾಲೇಜು, ಎಂಪಿಎAಸಿ ಮಾರುಕಟ್ಟೆ ಸ್ಥಾಪನೆ, ರಿಂಗ್ ರಸ್ತೆ ನಿರ್ಮಾಣ, ಅಂಬೇಡ್ಕರ್ ಅಧ್ಯಯನ ಕೇಂದ್ರ ಸ್ಥಾಪನೆ, ಹಳೆ ಬಸ್ ನಿಲ್ದಾಣ ನವೀಕರಣ, ನೂತನ ನಗರಸಭೆ ಕಟ್ಟಡ ನಿರ್ಮಾಣ, ಟಿ.ಚನ್ನಯ್ಯ ವಸತಿ ಶಾಲೆ ಸ್ಥಾಪನೆ, ನರಸಾಪುರದಲ್ಲಿ ಮಹಿಳೆಯರ ವಸತಿ ಗೃಹ ನಿರ್ಮಾಣ, ಹೆಲಿಪ್ಯಾನ್ ಜೊತೆ ಪ್ರವಾಸಿ ಮಂದಿರ ನಿರ್ಮಾಣ, ಕೋಲಾರ-ವೇಮಗಲ್-ಕೋಲಾರ ಗಡಿವರೆಗೆ ರಸ್ತೆ ಅಭಿವೃದ್ಧಿ, ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಮುಕ್ತ ಕೋಲಾರ, ಕೋಲಾರ ನಗರದ ಉದ್ಯಾನಗಳ ಅಭಿವೃದ್ಧಿ, ನಗರದ ಎಸ್ಟಿಪಿ ಮತ್ತು ಯುಜಿಡಿ ಕಾಮಗಾರಿ ಪೂರ್ಣಗೊಳಿಸುವುದು, ನಗರದ ಪ್ರಮುಖ ವೃತ್ತಗಳ ಆಧುನೀಕರಣ ಮಾಡಲಾಗುವುದು ಎಂದರು,

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಹೆದ್ದಾರಿ ವಿಚಾರವಾಗಿ ದೇವನಹಳ್ಳಿಯಿಂದ ಮಾಲೂರುವರೆಗೆ ಐದು ವಿಧಾನಸಭಾ ಕ್ಷೇತ್ರ ಇದ್ದು, ವೇಮಗಲ್ನಿಂದ ಮಾಲೂರು ಗಡಿವರೆಗೆ ? ೩೪೦ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಅಧಿಕಾರಿಗಳು ಭ್ರಷ್ಟರಾದರೆ ಜನರೂ ಭ್ರಷ್ಟರಾಗಿದ್ದಾರೆ ಎಂದು ಅರ್ಥ. ಯಾವ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ನಿಖರವಾಗಿ ಹೇಳಬೇಕು. ತಹಶೀಲ್ದಾರ್ ಕಚೇರಿ ಸಂಬಂಧ ದೂರುಗಳಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ ಎಂದರು.

ಕೋಮುಲ್ ನಿರ್ದೇಶಕ ಚಂಚಿಮಲೆ ರಮೇಶ್, ಕುಡಾ ಅಧ್ಯಕ್ಷ ಮೊಹಮ್ಮದ್ ಹನೀಫ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ತಾಲೂಕು ಅಧ್ಯಕ್ಷ ವೇಮಗಲ್ ಮುನಿಯಪ್ಪ, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಅಫ್ಸರ್, ಕೋಮುಲ್ ನಾಮಿನಿ ನಿರ್ದೇಶಕ ಶಂಶೀರ್, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಖಾಜಿಕಲ್ಲಹಳ್ಳಿ ಮುನಿರಾಜು, ಉರಟಅಗ್ರಹಾರ ಚೌಡರೆಡ್ಡಿ, ಪೆಮ್ಮಶೆಟ್ಟಹಳ್ಳಿ ಸುರೇಶ್ ಹಾಗೂ ಮುಖಂಡರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande