

ಬಳ್ಳಾರಿ, 20 ಮೇ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕ ಜ್ಞಾನ ನೀಡುವುದಕ್ಕಿಂತ ಪ್ರಾಯೋಗಿಕ ಜ್ಞಾನ ನೀಡುವುದು ಸೂಕ್ತ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಅರವಿಂದ್ ಪಾಟೀಲ ಅವರು ತಿಳಿಸಿದ್ದಾರೆ.
ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ಕೊಟ್ಟೂರು ಸ್ವಾಮೀಜಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಂತರಿಕ ಗುಣಮಟ್ಟ ಬರವಸೆಯ ಕೋಶದ ಅಡಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಬುಧವಾರ ಏರ್ಪಡಿಸಿದ್ದ `ಪುನಃಶ್ಚೇತನ' ಕಾರ್ಯಗಾರವದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಶಿಕ್ಷಕರು ಕೇವಲ ಪಠ್ಯಪುಸ್ತಕಗಳ ಬೋಧನೆಗೆ ಸೀಮಿತ ಆಗದೇ ಪಠ್ಯೇತರ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳುವ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಶಿಕ್ಷಣವು ವಿದ್ಯಾರ್ಥಿಗಳ ಮತ್ತು ಸಮಾಜದ ಉತ್ತಮ ಭವಿಷ್ಯಕ್ಕಾಗಿ ಎಲ್ಲರಿಗೂ ಸಿಗುವಂತೆ ಆಗಬೇಕು ಎಂದು ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ನಿಖಾಯದ ಮುಖ್ಯಸ್ಥರಾಗಿರುವ ಡಾ.ಎನ್. ಶಾಂತ ನಾಯ್ಕ್ ಅವರು ಉದ್ಘಾಟಿಸಿ, ಶಿಕ್ಷಣ ಮತ್ತು ಕಲಿಕೆ ಒಂದೇ ನಾಣ್ಯದ ಎರೆಡು ಮುಖಗಳು. ವಿದ್ಯಾರ್ಥಿಗೆ ಶಿಕ್ಷಣವನ್ನು ಬೋಧಿಸುವುದರ ಜೊತೆಯಲ್ಲಿ ಆ ವಿದ್ಯಾರ್ಥಿಯ ಕಲಿಕಾ ಸಾಮಥ್ರ್ಯವನ್ನೂ ಶಿಕ್ಷಕರು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಕೊಟ್ಟೂರು ಸ್ವಾಮೀಜಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ. ಶರಣಬಸವನಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಪುನಃಶ್ಚೇತನ ಶಿಬಿರದ ಜ್ಞಾನವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಕ್ರಿಯಾಶೀಲವಾಗಿ ಬೋಧಿಸುವಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವೀರಶೈವ ವಿದ್ಯಾವರ್ಧಕ ಸಂಘ ಕಾರ್ಯದರ್ಶಿಗಳಾದ ಯಾಳ್ಪಿ ಮೇಟಿ ಪಂಪನಗೌಡ, ಆಡಳಿತ ಮಂಡಳಿಯ ಸದಸ್ಯರಾದ ಗವಿಸಿದ್ದಪ್ಪ ಸಿಂದಗಿ, ಕಾಲೇಜಿನ ಪ್ರಾಚಾರ್ಯರಾದ ಡಾ. ಸತೀಶ್ ಎ. ಹಿರೇಮಠ, ಸಂಯೋಜಕರಾದ ಡಾ. ವಿಕ್ರಮ್ ಪಿ. ಹಿರೇಮಠ್, ಕಾರ್ಯಗಾರದ ಸಂಯೋಜಕರಾದ ಎನ್.ಜಿ. ಜಯಣ್ಣ ಅವರು ವೇದಿಕೆಯಲ್ಲಿದ್ದರು.
ಪ್ರಶಿಕ್ಷಣಾರ್ಥಿ ಕಲ್ಪನಾ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿತು. ಉಪನ್ಯಾಸಕಾರ ಡಾ. ಸುರೇಶಬಾಬು ಅವರು ಸ್ವಾಗತಿಸಿದರು. ಡಾ. ಬಿ. ದಾನಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್