ನೀಟ್ ಅಕ್ರಮ : ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ
ನೀಟ್ ಅಕ್ರಮ : ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ
ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ.


ಕೋಲಾರ, ೧೯ ಮೇ (ಹಿ.ಸ) :

ಆ್ಯಂಕರ್ : ನೀಟ್ ಪರೀಕ್ಷೆ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಷ್ಟೊತ್ತಿಗೆ ರಾಜೀನಾಮೆ ನೀಡಬೇಕಿತ್ತು. ಲಕ್ಷಾಂತರ ಮಕ್ಕಳ ಭವಿಷ್ಯಕ್ಕೆ ಪೆಟ್ಟು ಬಿದ್ದಿದ್ದರೂ ಯಾವುದೇ ಕ್ರಮ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡಲೇ ಅವರನ್ನು ಸಚಿವ ಸಂಪುಟದಿ0ದ ವಜಾ ಮಾಡಬೇಕು ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಿ ಪರೀಕ್ಷೆ ಬರೆಯುವುದರ ಹಿಂದೆ ಮಕ್ಕಳ ಅಪಾರ ಶ್ರಮವಿರುತ್ತದೆ. ಒಂದು ಬಾರಿ ಬರೆಯುವುದೇ ಕಷ್ಟ. ಕೆಲವರು ಲಾಂಗ್ ಟರ್ಮ್ ಅಂದರೆ ಹಾಸ್ಟೆಲ್ನಲ್ಲಿ ಇದ್ದುಕೊಂಡು ಎರಡು ವರ್ಷಗಳಿಂದ ತರಬೇತಿ ಪಡೆದಿರುತ್ತಾರೆ. ಪರೀಕ್ಷೆ ಬರೆಯುವವರಿಗಷ್ಟೇ ಆ ಕಷ್ಟ ಗೊತ್ತು. ಹಿಂದಿನ ಬೆಂಚಿನ ವಿದ್ಯಾರ್ಥಿಯನ್ನು ವಾಮಮಾರ್ಗದಲ್ಲಿ ಪಾಸ್ ಮಾಡಿದರೆ ಕಷ್ಟಪಟ್ಟು ಓದಿದ ಪ್ರತಿಭಾವಂತ ಮಕ್ಕಳ ಗತಿ ಏನು’ ಎಂದು ಕೇಳಿದರು.

ಕೇಂದ್ರ ಸರ್ಕಾರದ ಎಡವಟ್ಟಿನಿಂದ ದೇಶದ ಲಕ್ಷಾಂತರ ಮಕ್ಕಳಿಗೆ ತೊಂದರೆ ಆಗಿದೆ. ಇದು ಮಕ್ಕಳ ಭವಿಷ್ಯದ ಪ್ರಶ್ನೆ. ಆದರೆ, ಈ ಬಗ್ಗೆ ಬಿಜೆಪಿಯ ಯಾವುದೇ ನಾಯಕ ದನಿ ಎತ್ತುತ್ತಿಲ್ಲ. ಬೇರೆ ಏನಾದರೂ ಸಮಸ್ಯೆ ಉಂಟಾದರೆ ಇಂದಿರಾ ಗಾಂಧಿ, ಜವಾಹರಲಾಲ್ ನೆಹರೂ ಕಾಲಘಟ್ಟದವರೆಗೆ ವಿಚಾರ ಎತ್ತಿಕೊಂಡು ಮಾತನಾಡುತ್ತಾರೆ. ಈಗಿನ ಸಮಸ್ಯೆ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ ಆಡಳಿತದಲ್ಲಿರುವ ರಾಜ್ಯಗಳಲ್ಲೇ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಈ ಬಗ್ಗೆ ಆ ಪಕ್ಷದ ಯಾರೊಬ್ಬರೂ ಉತ್ತರಿಸುತ್ತಿಲ್ಲ. ಬೇರೆ ವಿಚಾರಗಳಲ್ಲಿ ನಾಯಿ ಹೋದರೆ ಹುಲಿ ಬಂತು ಎನ್ನುತ್ತಾರೆ. ಈಗ ನಾವೆಲ್ಲಾ ಹಾಕುವ ಭದ್ರ ಬುನಾದಿ ಮೇಲೆ ಮಕ್ಕಳು ತಮ್ಮ ಭವಿಷ್ಯ ಕಂಡುಕೊಳ್ಳುತ್ತಾರೆ. ಕೆಲವರು ವೈದ್ಯರು, ಕೆಲವರು ಎಂಜಿನಿಯರ್, ಕೆಲವರು ರಾಜಕಾರಣಿಗಳಾಗುವ ಕನಸು ಕಂಡಿರುತ್ತಾರೆ. ಇನ್ನು ಕೆಲವರು ಯುಪಿಎಸ್ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಸೆ ಇಟ್ಟುಕೊಂಡಿರುತ್ತಾರೆ. ಇಷ್ಟೊಂದು ತೊಂದರೆ ಉಂಟು ಮಾಡಿ ಮಕ್ಕಳ ಭವಿಷ್ಯ ಚಿವುಟಿದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಈಗಾಗಲೇ ನೈತಿಕ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದರೆ ನಾವು ಸ್ವಾಗತಿಸುತ್ತಿದ್ದೆವು. ತಪ್ಪು ಒಪ್ಪಿಕೊಂಡು ಅವರ ರಾಜೀನಾಮೆಯನ್ನು ಪ್ರಧಾನಿ ಪಡೆಯಬೇಕಿತ್ತು, ಇಲ್ಲವೇ ಕಿತ್ತು ಬಿಸಾಕಬೇಕಿತ್ತು. ಆದರೆ, ಆ ರೀತಿ ಮಾಡಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ನೀಟ್ ಪರೀಕ್ಷೆ ಮಾಡುವುದನ್ನು ರಾಜ್ಯ ಸರ್ಕಾರಕ್ಕೇ ಬಿಡಬೇಕು. ಕಂಪ್ಯೂಟರ್ ಬೇಸಿಕ್ ಟೆಸ್ಟ್ (ಸಿಬಿಟಿ) ಪದ್ಧತಿ ಅಳವಡಿಸಿಕೊಳ್ಳಬೇಕು. ಆಗ ಈ ರೀತಿ ಹಗರಣ ಆಗುವುದು ತಪ್ಪುತ್ತದೆ. ಆದರೆ, ಕೇಂದ್ರ ಸರ್ಕಾರ ಏಕೆ ಎಲ್ಲವನ್ನೂ ಮೈಮೇಲೆ ಎಳೆದುಕೊಂಡು ಇಷ್ಟೆಲ್ಲಾ ಸಮಸ್ಯೆ ಸೃಷ್ಟಿಸಬೇಕು? ಕಳೆದ ೯ ವರ್ಷಗಳಲ್ಲಿ ಮೂರು ಬಾರಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಇದಕ್ಕೆ ಯಾರು ಹೊಣೆ? ಈ ಬಗ್ಗೆ ಕೇಳಿದರೆ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ ಎಂದು ಕೇಳುತ್ತಾರೆ. ಸರಿ ನಾವೇನೂ ಮಾಡಿಲ್ಲ, ಅವರೇನೂ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಪೆಟ್ರೋಲ್, ಡೀಸೆಲ್ ದರ ಪದೇಪದೇ ಏರಿಕೆ ಮಾಡಲಾಗುತ್ತಿದೆ. ಇದಕ್ಕೆ ಯಾರು ಹೊಣೆ? ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಲೀಟರ್ಗೆ ಕೇವಲ ₹ ೬೦ರ ಆಸುಪಾಸಿನಲ್ಲಿ ಇತ್ತು. ಇವತ್ತು ₹ ೧೦೬ ಆಗಿದೆ. ಗ್ಯಾಸ್ ದರವೂ ಭಾರಿ ಏರಿಕೆ ಆಗಿದೆ. ಆಗ ದೇಶದ ಸಾಲ ₹ ೫೦ ಲಕ್ಷ ಕೋಟಿ ಇತ್ತು. ಈಗ ₹ ೨೦೦ ಲಕ್ಷ ಕೋಟಿ ದಾಟಿದೆ. ಹಾಗಾದರೆ ಕೇಂದ್ರ ಸರ್ಕಾರ ಏನು ಅಭಿವೃದ್ಧಿ ಮಾಡಿದೆ? ಸಾಲ ಪಡೆದಿರುವುದೇ ಅಭಿವೃದ್ಧಿಯೇ? ಕೇಳಿದರೆ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂಬುದಾಗಿ ಕೇಳುತ್ತಾರೆ. ರಾಜ್ಯದಲ್ಲಿ ಐದು ಗ್ಯಾರಂಟಿ ಮೂಲಕ ಬಡವರ ನೋವಿಗೆ ಸ್ಪಂದಿಸಲಾಗುತ್ತಿದೆ. ಬಡತನ ನಿರ್ಮೂಲನೆ, ಬಡವರನ್ನು ಕಾಪಾಡುವುದೇ ಮೊದಲ ಹೆಜ್ಜೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಗ್ಯಾರAಟಿ ನೀಡುವುದರಿಂದ ರಾಜ್ಯ ಸರ್ಕಾರ ದಿವಾಳಿ ಆಗಿಬಿಡುತ್ತದೆ ಎಂದೂ ಕೆಲವರು ಟೀಕಿಸಿದರು. ಆದರೆ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧೆಡೆ ಏಕೆ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡಿದರು? ಗ್ಯಾರಂಟಿ ನೀಡದೆ ಬರೀ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಚುನಾವಣೆ ಎದುರಿಸಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ಯಾಸ್ ದರ ₹ ೫೦೦ ಇದ್ದಾಗ ಬಿಜೆಪಿಯ ಮಹಿಳಾ ನಾಯಕಿಯರು ತಲೆ ಮೇಲೆ ಸಿಲಿಂಡರ್ ಹೊತ್ತು ಪ್ರತಿಭಟನೆ ನಡೆಸಿದರು. ಈಗ ಸಾವಿರ ರೂಪಾಯಿ ತಲುಪಿದ್ದರೂ ಏಕೆ ಪ್ರತಿಭಟನೆ ನಡೆಸುತ್ತಿಲ್ಲ? ಎಲ್ಲರೂ ಏಕೆ ಮೌನವಾಗಿದ್ದಾರೆ ಎಂದು ಹರಿಹಾಯ್ದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಬುಧವಾರಕ್ಕೆ ಮೂರು ವರ್ಷ ಪೂರೈಸುತ್ತಿದೆ. ಸಚಿವ ಸಂಪುಟ ವಿಸ್ತರಣೆಯಾದರೆ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಸಚಿವ ಸ್ಥಾನ ನೀಡಬೇಕು ಹಿಂದುಳಿದ ಸಮುದಾಯದಿಂದ ಬಂದು ಶಾಸಕರಾಗಿದ್ದಾರೆ. ದೇಶದಲ್ಲೇ ಅವರ ಸಮುದಾಯದಿಂದ ಶಾಸಕರಾಗಿರುವ ಏಕೈಕ ವ್ಯಕ್ತಿ ಕೂಡ. ಹಿಂದೆ ಪಕ್ಷೇತರ ಶಾಸಕರಾಗಿದ್ದಾಗಲೂ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಮುಳಬಾಗಿಲಿನಲ್ಲಿ ಎಚ್.ನಾಗೇಶ್ ಅವರನ್ನು ಗೆಲ್ಲಿಸಿ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಕೊಡಿಸಿದ್ದರು. ಹೀಗಾಗಿ, ಕೊತ್ತೂರು ಮಂಜುನಾಥ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.

ಮೂರು ವರ್ಷದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಏನೆಲ್ಲಾ ಸಾಧನೆ ಮಾಡಿದೆ, ಅಭಿವೃದ್ಧಿ ಕೈಗೊಂಡಿದೆ ಎಂಬುದರ ಬಗ್ಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಸದ್ಯದಲ್ಲೇ ಮಾಹಿತಿ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪೈರೋಜ್ ಖಾನ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಘುನಾಥ್, ಚಿನ್ನಾಪುರ ನಾರಾಯಣಸ್ವಾಮಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವೀರೇಂದ್ರ ಪಾಟೀಲ್ ಮುಖಂಡರಾದ ವಿಜಯನಗರ ಮಂಜುನಾಥ್, ನದೀಂ, ಕೋಟೆ ಶ್ರೀನಿವಾಸ್, ಮಡಿವಾಳ ಬೈರೇಗೌಡ, ರಾಜಕಲ್ಲಹಳ್ಳಿ ಶ್ರೀನಿವಾಸ್, ಬಾಬರ್, ಗಾಜಲದಿನ್ನೆ ರಮೇಶ್, ಮುಂತಾದವರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande