
ತಿರುವನಂತಪುರಂ, 18 ಮೇ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಅವರು ಇಂದು ತಿರುವನಂತಪುರಂನ ಸೆಂಟ್ರಲ್ ಕ್ರೀಡಾಂಗಣದಲ್ಲಿ ಕೇರಳಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸಿದರು.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಸರ್ಕಾರವನ್ನು ವಿ.ಡಿ. ಸತೀಶನ್ ಮುನ್ನಡೆಸಲಿದ್ದು, ಅವರೊಂದಿಗೆ ಸಚಿವ ಸಂಪುಟದ ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಿದರು. ಸಚಿವ ಸಂಪುಟದಲ್ಲಿ ಕಾಂಗ್ರೆಸ್ನ 11 ಮಂದಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಐವರು ಹಾಗೂ ಇತರ ಮೈತ್ರಿ ಪಕ್ಷಗಳ ಪ್ರತಿನಿಧಿಗಳು ಸ್ಥಾನ ಪಡೆದಿದ್ದಾರೆ.
ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು.
ಕಾಂಗ್ರೆಸ್ನ ರಮೇಶ್ ಚೆನ್ನಿತಲ, ಸನ್ನಿ ಜೋಸೆಫ್, ಕೆ. ಮುರುಳೀಧರನ್, ಎ.ಪಿ. ಅನಿಲ್ ಕುಮಾರ್, ಪಿ.ಸಿ. ವಿಷ್ಣುನಾಥ್, ಟಿ. ಸಿದ್ದಿಕ್, ಬಿಂದು ಕೃಷ್ಣ, ಕೆ.ಎ. ತುಳಸಿ, ರೋಸಿ ಎಂ. ಜಾನ್, ಎಂ. ಲಿಜು ಹಾಗೂ ಒ.ಜೆ. ಜಾನಿಶ್ ಸಚಿವ ಸಂಪುಟಕ್ಕೆ ಸೇರಿದ್ದಾರೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಪಿ.ಕೆ. ಕುನ್ಹಾಲಿಕುಟ್ಟಿ, ಎನ್. ಶಮ್ಸುದ್ದೀನ್, ಕೆ.ಎಂ. ಶಾಜಿ, ಪಿ.ಕೆ. ಬಶೀರ್ ಹಾಗೂ ವಿ.ಇ. ಅಬ್ದುಲ್ ಗಫೂರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇದಲ್ಲದೆ, ಕೇರಳಂ ಕಾಂಗ್ರೆಸ್ (ಜೋಸೆಫ್)ನ ಮಾನ್ಸ್ ಜೋಸೆಫ್, ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಶಿಬು ಬೇಬಿ ಜಾನ್, ಕೇರಳ ಕಾಂಗ್ರೆಸ್ (ಜಾಕೋಬ್)ನ ಅನೂಪ್ ಜಾಕೋಬ್ ಹಾಗೂ ಸಿಪಿಐ(ಎಂ) ನಾಯಕ ಸಿಪಿ ಜಾನ್ ಕೂಡ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
2026ರ ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 102 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.