ಡೆಂಗ್ಯೂ ನಿಯಂತ್ರಣಕ್ಕೆ ಸಹಭಾಗಿತ್ವ ಅಗತ್ಯ : ಡಾ.ಯಲ್ಲಾ ರಮೇಶಬಾಬು
ಬಳ್ಳಾರಿ, 16 ಮೇ (ಹಿ.ಸ.) : ಆ್ಯಂಕರ್ : ಮನೆಯಲ್ಲಿ ಬಳಕೆಗಾಗಿ ಸಂಗ್ರಹಿಸುವ ನೀರಿನ ಪರಿಕರಗಳನ್ನು ಸರಿಯಾಗಿ ಮುಚ್ಚದಿದ್ದರೆ, ಅಂತಹ ನೀರಿನಲ್ಲಿ ಈಡೀಸ್ ಸೊಳ್ಳೆಗಳು ಮೊಟ್ಟೆಯಿಟ್ಟು ಸಂತತಿ ವೃದ್ಧಿಸುತ್ತವೆ. ಹಾಗಾಗಿ ಸಾರ್ವಜನಿಕರು ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದರೊಂದಿಗೆ, ಇಲಾಖೆಯ ಡೆಂಗ್ಯೂ ನ
rtnership is needed to control dengue: Dr. Yalla Rameshbabu's call


rtnership is needed to control dengue: Dr. Yalla Rameshbabu's call


ಬಳ್ಳಾರಿ, 16 ಮೇ (ಹಿ.ಸ.) :

ಆ್ಯಂಕರ್ : ಮನೆಯಲ್ಲಿ ಬಳಕೆಗಾಗಿ ಸಂಗ್ರಹಿಸುವ ನೀರಿನ ಪರಿಕರಗಳನ್ನು ಸರಿಯಾಗಿ ಮುಚ್ಚದಿದ್ದರೆ, ಅಂತಹ ನೀರಿನಲ್ಲಿ ಈಡೀಸ್ ಸೊಳ್ಳೆಗಳು ಮೊಟ್ಟೆಯಿಟ್ಟು ಸಂತತಿ ವೃದ್ಧಿಸುತ್ತವೆ. ಹಾಗಾಗಿ ಸಾರ್ವಜನಿಕರು ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದರೊಂದಿಗೆ, ಇಲಾಖೆಯ ಡೆಂಗ್ಯೂ ನಿಯಂತ್ರಣ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಲ್ಲಾ ರಮೇಶಬಾಬು ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ ಹಾಗೂ ಕೌಲ್ಬಜಾರ್ನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟೀಯ ಡೆಂಗ್ಯೂ ದಿನಾಚರಣೆ ಜಾಗೃತಿ ಜಾಥಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮನೆಯ ಒಳಗಿನ ಸ್ವಚ್ಛತೆಗೆ ನೀಡುವಷ್ಟೇ ಮಹತ್ವವನ್ನು ಹೊರಗಿನ ಸ್ವಚ್ಛತೆಗೂ ನೀಡಬೇಕು. ನೀರು ತುಂಬುವ ಪರಿಕರಗಳನ್ನು ವಾರಕ್ಕೊಮ್ಮೆ ತಿಕ್ಕಿ ತೊಳೆದು, ಒಣಗಿಸಿ ನಂತರ ನೀರು ತುಂಬಿ ಸರಿಯಾಗಿ ಮುಚ್ಚಳ ಮುಚ್ಚಬೇಕು. ಮನೆಯ ಹೊರಗೆ ಅನಗತ್ಯವಾಗಿ ಮಳೆ ನೀರು ನಿಲ್ಲುವ ಬೀಸಾಡಿದ ಟೈರ್, ತಗಡಿನ ಟಿನ್, ಪ್ಲಾಸ್ಟಿಕ್ ಕಪ್, ಹೂವಿನ ಕುಂಡ ಹಾಗೂ ಫ್ರಿಡ್ಜ್ನ ಹಿಂಭಾಗದಲ್ಲಿ 7 ದಿನಗಳಿಗಿಂತ ಹೆಚ್ಚು ಕಾಲ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಇದರಿಂದ ಡೆಂಗ್ಯೂ ಮತ್ತು ಚಿಕೂನ್ಗುನ್ಯಾ ಹರಡುವ ‘ಈಡೀಸ್ ಇಜಿಪ್ಟಿ' ಸೊಳ್ಳೆಗಳ ಮರಿ ಉತ್ಪತ್ತಿಯಾಗುವುದನ್ನು ತಡೆಯಬಹುದು ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಮಾತನಾಡಿ, ‘ಡೆಂಗ್ಯೂ ನಿಯಂತ್ರಣಕ್ಕಾಗಿ ಸಮುದಾಯದ ಪಾಲ್ಗೊಳ್ಳುವಿಕೆ: ಪರಿಶೀಲಿಸಿ, ಸ್ವಚ್ಛಗೊಳಿಸಿ ಹಾಗೂ ಮುಚ್ಚಿಡಿ’ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರವು ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ಕಾಯ್ದೆಗೆ ಒಳಪಡಿಸಿದೆ. ಈಡೀಸ್ ಸೊಳ್ಳೆಗಳ ಲಾರ್ವಾ ಉತ್ಪತ್ತಿ ತಾಣಗಳನ್ನು ನಿರ್ಲಕ್ಷ್ಯ ಮಾಡಿದರೆ ದಂಡ ವಿಧಿಸುವ ಕಾನೂನು ಜಾರಿಯಲ್ಲಿದೆ. ಆದರೆ ಕೇವಲ ಕಾನೂನಿನಿಂದ ಮಾತ್ರ ಸೊಳ್ಳೆ ನಿಯಂತ್ರಣ ಸಾಧ್ಯವಿಲ್ಲ, ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜ್ವರ, ಕಣ್ಣು ಕೆಂಪಾಗುವುದು, ಕಣ್ಣಿನ ಹಿಂಭಾಗದಲ್ಲಿ ನೋವು, ವಾಂತಿ, ಕಾರಣವಿಲ್ಲದೆ ಮೈ ತುರಿಕೆ, ತಲೆನೋವು, ಮೈಮೇಲೆ ಗಂಧೆಗಳು (ದದ್ದುಗಳು), ಕೀಲು ಮತ್ತು ಸ್ನಾಯು ನೋವು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬೇಕು.

ಹೆಚ್ಚು ದಿನಗಳ ಕಾಲ ನೀರು ಸಂಗ್ರಹವಿರುವ ಸ್ಥಳಗಳಲ್ಲಿ ಸೊಳ್ಳೆ ಲಾರ್ವಾಗಳನ್ನು ತಿನ್ನುವ ‘ಗಪ್ಪಿ' ಮತ್ತು ‘ಗಾಂಬೋಷಿಯಾ' ಮೀನುಗಳನ್ನು ಬಿಡಲು ಅವಕಾಶವಿದ್ದು, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಇವುಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಈ ವೇಳೆ ಮಹಾನಗರ ಪಾಲಿಕೆಯ ಸದಸ್ಯರಾದ ಡಿ.ಸುಕುಂ, ಟಿ.ರಿಯಾಜ್ ಅಹಮ್ಮದ್, ವೈದ್ಯಾಧಿಕಾರಿ ಡಾ.ರೇವಣಸಿದ್ದಪ್ಪ, ಎನ್ವಿಬಿಡಿಸಿಪಿ ಕನ್ಸಲ್ಟಂಟ್ ಪ್ರತಾಪ್, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಮೇಲ್ವಿಚಾರಕರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande